ಮಹಾರಾಷ್ಟ್ರ ಬಿಕ್ಕಟ್ಟಿನ ಕುರಿತು ಅಮಿತ್ ಶಾ ಮಹತ್ವದ ಹೇಳಿಕೆ
ನವದೆಹಲಿ, ನವೆಂಬರ್ 13: ಮಹಾರಾಷ್ಟ್ರದಲ್ಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸುಮಾರು 18 ದಿನಗಳ ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನಾ-ಬಿಜೆಪಿ ಅಗತ್ಯ ಬಹುಮತದ ಸಂಖ್ಯೆ ಹೊಂದಿದ್ದರೂ, ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತು ಉಂಟಾದ ವಿವಾದ ಹೊಸ ತಿರುವು ಪಡೆದುಕೊಂಡಿತ್ತು. ಬಳಿಕ ಶಿವಸೇನಾ, ತನ್ನ ವಿರೋಧಿಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಪ್ರಯತ್ನ ಮಾಡಿದರೂ ಕೈಗೂಡಿಲ್ಲ. ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದರೂ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಯತ್ನಗಳು ಮುಂದುವರಿದಿವೆ.
ಶಿವಸೇನಾ ನಾಯಕರಾದ ಉದ್ಧವ್ ಠಾಕ್ರೆ, ಸಂಜಯ್ ರಾವತ್ ಸೇರಿದಂತೆ ಅನೇಕರು ಬಿಜೆಪಿ ತಮಗೆ ಮೋಸ ಮಾಡಿದೆ ಎಂದು ನಿರಂತರ ಆರೋಪಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷ ಹಂಚಿಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿಯೇ ಚರ್ಚಿಸಿ ಒಪ್ಪಿಗೆ ನೀಡಲಾಗಿತ್ತು. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ಅದಕ್ಕೆ ಒಪ್ಪಿಕೊಳ್ಳದೆ ವಂಚಿಸಿದೆ ಎಂದು ಶಿವಸೇನಾ ಆರೋಪಿಸಿದೆ. ಜತೆಗೆ ಬಿಜೆಪಿ ಸುಳ್ಳುಗಾರರ ಪಕ್ಷ ಎಂದು ಅಮಿತ್ ಶಾ ವಿರುದ್ಧವೂ ನೇರ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ರಾಜಕೀಯ ಪ್ರಹಸನದಲ್ಲಿ ಕೊನೆಗೆ ಗೆದ್ದಿದ್ದು ಕಾಂಗ್ರೆಸ್!
ಇಷ್ಟೆಲ್ಲಾ ಆರೋಪಗಳನ್ನು ಮಾಡುತ್ತಿದ್ದರೂ ಮಹಾರಾಷ್ಟ್ರ ರಾಜಕೀಯದ ಬಗ್ಗೆ ಅಮಿತ್ ಶಾ ಯಾವ ಹೇಳಿಕೆಯನ್ನೂ ನೀಡಿರಲಿಲ್ಲ. ಬುಧವಾರ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿರುವ ಅವರು ಈ ಗೊಂದಲದ ಕುರಿತು ಮೌನಮುರಿದಿದ್ದಾರೆ. ಅವರ ಮಾತುಗಳಲ್ಲಿ ಆಯ್ದ ವಿವರಗಳು ಇಲ್ಲಿವೆ.
ಸುದೀರ್ಘ ಸಮಯ ನೀಡಲಾಗಿತ್ತು
ಮಹಾರಾಷ್ಟ್ರದ ಈ ಪ್ರಕರಣಕ್ಕೂ ಮುನ್ನ ಬೇರೆ ಯಾವ ರಾಜ್ಯದಲ್ಲಿಯೂ ಇಷ್ಟು ಸುದೀರ್ಘ ಸಮಯ ನೀಡಿರಲಿಲ್ಲ. ಸರ್ಕಾರ ರಚನೆಗೆ 18 ದಿನಗಳನ್ನು ನೀಡಲಾಗಿತ್ತು. ವಿಧಾನಸಭೆಯ ಅವಧಿ ಮುಗಿದ ಬಳಿಕವಷ್ಟೇ ರಾಜ್ಯಪಾಲರು ಪಕ್ಷಗಳಿಗೆ ಸರ್ಕಾರ ರಚನೆಯ ಆಹ್ವಾನ ನೀಡಿದ್ದರು. ಶಿವಸೇನಾ ಆಗಲೀ, ಎನ್ಸಿಪಿಯಾಗಲೀ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲ. ನಾವೂ ಕೂಡ ಮುಂದಾಗಲಿಲ್ಲ.
ಕಪಿಲ್ ಸಿಬಲ್ ಬಾಲಿಶ ಹೇಳಿಕೆ
ಇಂದು ಕೂಡ ಬಹುಮತ ಹೊಂದಿರುವ ಯಾವುದೇ ಪಕ್ಷ ಸರ್ಕಾರ ರಚನೆಗಾಗಿ ರಾಜ್ಯಪಾಲರನ್ನು ಭೇಟಿಯಾಗಬಹುದು. ರಾಜ್ಯಪಾಲರು ಯಾವುದೇ ಪಕ್ಷಕ್ಕೆ ಅವಕಾಶವನ್ನು ನಿರಾಕರಿಸಿಲ್ಲ. 'ನಾವು ಸರ್ಕಾರ ರಚನೆಗೆ ಅವಕಾಶ ನಿರಾಕರಿಸಿದೆವು' ಎಂಬಂತಹ ಬಾಲಿಶ ಹೇಳಿಕೆಗಳನ್ನು ಕಪಿಲ್ ಸಿಬಲ್ ಅವರಂತಹ ತಿಳಿವಳಿಕೆಯುಳ್ಳ ವಕೀಲರು ನೀಡುತ್ತಾರೆ.
ಮಾತು ತಪ್ಪುವುದು ನೈಜ ಹಿಂದುತ್ವವಲ್ಲ: ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ
ನಾನು ಮತ್ತು ಮೋದಿ ಇಬ್ಬರೂ ಹೇಳಿದ್ದೆವು
ನಮ್ಮ ಮೈತ್ರಿಕೂಟ ಜಯಗಳಿಸಿದರೆ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಚುನಾವಣೆಗೂ ಮುನ್ನ ನಾನು ಮತ್ತು ಪ್ರಧಾನಿ ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಹೇಳಿದ್ದೇವೆ. ಆಗ ಶಿವಸೇನಾದಿಂದ ಯಾವುದೇ ವಿರೋಧ ಬಂದಿರಲಿಲ್ಲ. ಈಗ ಅವರು ಹೊಸ ಬೇಡಿಕೆಯೊಂದಿಗೆ ಬಂದಿದ್ದಾರೆ. ಅದನ್ನು ನಾವು ಒಪ್ಪಲಾಗದು.
ಹಕ್ಕು ಇದೆ, ಆದರೆ ಸಂಖ್ಯೆ ಇಲ್ಲ
ಮುಂದಿನ ಸರ್ಕಾರ ರಚಿಸುವುದು ತಮ್ಮ ಹಕ್ಕು ಎನ್ನುವ ಮೂಲಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಿದ ರಾಜ್ಯಪಾಲರ ನಿರ್ಧಾರವನ್ನು ಟೀಕಿಸುತ್ತಿರುವವರಿಗೆ ನಾನು ಹೇಳಲು ಬಯಸುವುದಿಷ್ಟೇ, ನಿಮಗೆ ಹಕ್ಕು ಇದೆ ನಿಜ. ಆದರೆ ನಿಮ್ಮ ಬಳಿ ಸಂಖ್ಯೆಯಿಲ್ಲ.
ಮಹಾರಾಷ್ಟ್ರ: ಸರ್ಕಾರ ರಚನೆಗೆ 6 ತಿಂಗಳವರೆಗೆ ಅವಕಾಶ
ಮಧ್ಯಂತರ ಚುನಾವಣೆ ಬಯಸಿಲ್ಲ
ಮುಚ್ಚಿದ ಬಾಗಿಲ ಹಿಂದೆ ಏನೇನು ಚರ್ಚೆಗಳು ನಡೆದಿವೆ ಎಂಬುದನ್ನು ಬಹಿರಂಗಪಡಿಸುವುದು ನಮ್ಮ ಪಕ್ಷದ ಸಂಪ್ರದಾಯದಲ್ಲಿ ಇಲ್ಲ. ಶಿವಸೇನಾ ದಂಗೆ ಎದ್ದು ಜನರ ಅನುಕಂಪ ಗಿಟ್ಟಿಸಿಕೊಳ್ಳಬಹುದು ಎಂದು ಯೋಚಿಸಿದ್ದರೆ ಅವರಿಗೆ ಜನರ ಬಗ್ಗೆ ತಿಳಿದೇ ಇಲ್ಲ ಎಂದರ್ಥ. ನಾವು ಶಿವಸೇನಾಕ್ಕೆ ಮೋಸ ಮಾಡಿಲ್ಲ. ತನ್ನ ಮೈತ್ರಿಪಕ್ಷದೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಲು ಬಯಸಿತ್ತು. ನಾವು ಮಧ್ಯಂತರ ಚುನಾವಣೆಯನ್ನು ಬಯಸುತ್ತಿಲ್ಲ. 50:50ರ ಸರ್ಕಾರಕ್ಕೆ ಚುನಾವಣೆಗೂ ಮುನ್ನ ಬಿಜೆಪಿ ಒಪ್ಪಿಕೊಂಡಿತ್ತು ಎಂದು ಶಿವಸೇನಾ ಹೇಳಿದೆ. ಬಿಜೆಪಿ ನೀಡದೆಯೇ ಇರುವ ಭರವಸೆಯಿದು ಎಂದು ಶಾ ಹೇಳಿದರು.