ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮತ್ತೊಂದು ಮಹತ್ವದ ಬಂಧನ
ನವದೆಹಲಿ, ಜನವರಿ 26: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯು ಪಶ್ಚಿಮ ಬಂಗಾಳ ನಿವಾಸಿ ಪ್ರತಾಪ್ ಹಜ್ರಾ (34) ಎಂಬಾತನನ್ನು ಗುರುವಾರ ಬಂಧಿಸಿದೆ. ಸ್ಫೋಟಕಗಳನ್ನು ತಯಾರಿಸಲು ಈತ ಬಲಪಂಥೀಯ ಸಂಘಟನೆಗಳಿಗೆ ತರಬೇತಿ ನೀಡಿದ ಆರೋಪದಡಿ ಆತನನ್ನು ಬಂಧಿಸಲಾಗಿದೆ.
ಈತನ ಬಂಧನದಿಂದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಮತ್ತೊಂದು ಆಯಾಮ ದೊರಕಿದೆ. ಏಕೆಂದರೆ 2017ರಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿರುವ ಕೆಲವು ಆರೋಪಿಗಳು ಆತನ ಬಳಿ ತರಬೇತಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಗೌರಿ ಲಂಕೇಶ್ ಹತ್ಯೆ; 15 ದಿನ ಪೊಲೀಸ್ ವಶಕ್ಕೆ ಋಷಿಕೇಶ್
2018ರ ನಲಸೋಪರ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ತಂಡವು ಪ್ರತಾಪ್ ಹಜ್ರಾನನ್ನು ಬಂಧಿಸಿದೆ. ಈತನ ವಿರುದ್ಧ 2018ರ ಆಗಸ್ಟ್ 10ರಂದು ಪ್ರಕರಣ ದಾಖಲಾಗಿತ್ತು. ಅಂದಿನಿಂದಲೂ ತಲೆಮರೆಸಿಕೊಂಡಿದ್ದ ಹಜ್ರಾನನ್ನು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಉಷ್ತಿ ಎಂಬಲ್ಲಿಂದ ಬಂಧಿಸಲಾಗಿದೆ.
ಹಜ್ರಾನನ್ನು ಸೋಮವಾರ ಕೋಲ್ಕತಾ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ಮುಂಬೈ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನ್ಯಾಯಾಲಯವು ಗುರುವಾರ ಆತನನ್ನು ಮಹಾರಾಷ್ಟ್ರ ಎಟಿಎಸ್ಗೆ ಒಪ್ಪಿಸಿದೆ.
ರಾವತ್ ಮನೆಯಲ್ಲಿ ಶಸ್ತ್ರಾಸ್ತ್ರ
ಅಕ್ರಮ ಶಸ್ತಾಸ್ತ್ರ ಹೊಂದಿದ ಆರೋಪದಲ್ಲಿ ಎಟಿಎಸ್ 2018ರ ಆಗಸ್ಟ್ನಲ್ಲಿ ನಲಸೊಪರದ ವೈಭವ್ ರಾವತ್, ಪುಣೆಯ ಸುಧನ್ವ ಗೊಂಧಲೇಕರ್ ಮತ್ತು ಔರಂಗಾಬಾದ್ನ ಶರದ್ ಕಲಾಸ್ಕರ್ ಸೇರಿದಂತೆ 12 ಮಂದಿಯನ್ನು ಬಂಧಿಸಿತ್ತು. ಮುಂಬೈ ಸಮೀಪದ ನಲಸೊಪರದಲ್ಲಿರುವ ರಾವತ್ನ ನಿವಾಸದಿಂದ ಕಚ್ಚಾ ಬಾಂಬ್ಗಳು, ಸ್ಫೋಟಕಗಳು, ನಾಡ ಪಿಸ್ತೂಲುಗಳು ಮತ್ತು ಇತರೆ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿತ್ತು. ರಾವತ್ ಹಿಂದೂ ಗೋವಂಶ ರಕ್ಷ ಸಮಿತಿಯ ಸದಸ್ಯನಾಗಿದ್ದ ಎಂದು ಎಟಿಎಸ್ ತಿಳಿಸಿತ್ತು.
ಆರೋಪಪಟ್ಟಿಯಲ್ಲಿ ಹಜ್ರಾ ಹೆಸರು
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಎಸ್ಐಟಿಯಿಂದ ವಿಚಾರಣೆಗೆ ಒಳಗಾಗಿರುವ ಶಂಕಿತ ಆರೋಪಿಗಳಲ್ಲಿ ಒಬ್ಬಾತ ನೀಡಿರುವ ಹೇಳಿಕೆ ಆಧಾರದಲ್ಲಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹಜ್ರಾ ಹೆಸರನ್ನು ಸೇರಿಸಲಾಗಿತ್ತು. ಹಜ್ರಾ ಬಾಂಬ್ ತಯಾರಿಕೆಯಲ್ಲಿ ಪರಿಣತನಾಗಿದ್ದು, 2015ರಲ್ಲಿ ಮಂಗಳೂರಿನಲ್ಲಿ ನಡೆದ ಶಿಬಿರವೊಂದರಲ್ಲಿ ಅತಿಥಿ ತರಬೇತುದಾರನಾಗಿ ಭಾಗವಹಿಸಿದ್ದ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಇದು, ಗೌರಿ ಲಂಕೇಶ್ ಹತ್ಯೆಗೆ ಹಂತಕರು ಬಳಸಿದ 'ಕೋಡ್ ವರ್ಡ್'
ಸನಾತನ ಸಂಸ್ಥೆಗೆ ಸೇರಿದ ವ್ಯಕ್ತಿಗಳು ಈ ಶಿಬಿರಗಳನ್ನು ಆಯೋಜಿಸಿದ್ದರು ಎಂದು ಎಸ್ಐಟಿ ಹೇಳಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸನಾತನ ಸಂಸ್ಥೆಯ ಭಾಗವಾಗಿದ್ದ ಮೂವರು ಮತ್ತು ನಾಲ್ವರು ಸಾಕ್ಷಿಗಳು ಬಾಂಬ್ ತಯಾರಿಕೆಯ ತರಬೇತಿ ಶಿಬಿರದಲ್ಲಿ ಒಬ್ಬ 'ಬಾಬಾಜಿ' ಮತ್ತು ನಾಲ್ವರು 'ಗುರೂಜಿ'ಗಳು ಇದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
19 ಶಿಬಿರಗಳನ್ನು ನಡೆಸಿದ್ದರು
ಗೌರಿ ಲಂಕೇಶ್ ಕೊಲೆ ಪ್ರಕರಣದ ಶಂಕಿತ ಆರೋಪಿಗಳು ಮತ್ತು ಸಾಕ್ಷಿಗಳು ತರಬೇತುದಾರರಲ್ಲಿ ಹಜ್ರಾ ಒಬ್ಬನಾಗಿದ್ದ ಎಂದು ತಿಳಿಸಿದ್ದರಿಂದ ಆರೋಪಪಟ್ಟಿಯಲ್ಲಿ ಆತನ ಹೆಸರನ್ನು ಸೇರಿಸಲಾಗಿತ್ತು. ಐವರು 'ಅತಿಥಿ ತರಬೇತುದಾರ'ರನ್ನು ಅವರು ಗುರುತಿಸಿದ್ದಾರೆ. ಅವರಲ್ಲಿ ಹಜ್ರಾ ಒಬ್ಬನಾಗಿದ್ದಾನೆ.
ಸನಾತನ ಸಂಸ್ಥೆ ಮತ್ತು ಅದರ ಸಹವರ್ತಿ ಸಂಘಟನೆಗಳು 2011ರಿಂದ 2017ರ ಅವಧಿಯಲ್ಲಿ 19 ಬಾಂಬ್ ತಯಾರಕಾ ಶಿಬಿರಗಳನ್ನು ಆಯೋಜಿಸಿದ್ದರು. ಅದರಲ್ಲಿ ಮದ್ದುಗುಂಡುಗಳ ಬಳಕೆ, ಸುಧಾರಿತ ಸ್ಫೋಟಕ ಸಾಧನಗ ತಯಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಗಳನ್ನು ಕಲಿಯಲು ಜನರಿಗೆ ತರಬೇತಿ ನೀಡುತ್ತಿದ್ದರು ಎಂದು ಎಸ್ಐಟಿ ಪತ್ತೆಹಚ್ಚಿದೆ.
ಹಜ್ರಾ ಬಗ್ಗೆ ಬಾಯ್ಬಿಟ್ಟಿದ್ದ ಕಲಾಸ್ಕರ್
2013ರಲ್ಲಿ ನಡೆದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿನ ಆರೋಪಿಗಳಲ್ಲಿ ಒಬ್ಬನಾದ 26 ವರ್ಷದ ಶರದ್ ಕಲಾಸ್ಕರ್ ನೀಡಿದ ಹೇಳಿಕೆಯಿಂದ ಇಂತಹ ಶಿಬಿರಗಳಲ್ಲಿ ಹಜ್ರಾನ ನಂಟು ಬೆಳಕಿಗೆ ಬಂದಿತ್ತು. ಗೌರಿ ಲಂಕೇಶ್ ಹತ್ಯೆಯಲ್ಲಿಯೂ ಆರೋಪಿಯಾಗಿರುವ ಕಲಾಸ್ಕರ್, 2015ರಲ್ಲಿ ಧರ್ಮಸ್ಥಳದಲ್ಲಿ ನಡೆದ ಶಿಬಿರದಲ್ಲಿ ಹಜ್ರಾ ಅತಿಥಿ ತರಬೇತುದಾರನಾಗಿದ್ದ. ಈ ಶಿಬಿರವನ್ನು ಖಾಸಗಿ ಸಂಸ್ಥೆಯೊಂದು ಆಯೋಜಿಸಿತ್ತು ಎಂಬುದಾಗಿ ತಿಳಿಸಿದ್ದ.
ಗೌರಿ ಲಂಕೇಶ್ ಹತ್ಯೆ; ಜಾರ್ಖಂಡ್ನಲ್ಲಿ 18ನೇ ಆರೋಪಿ ಬಂಧನ
'ಏರ್ ಪಿಸ್ತೂಲುಗಳನ್ನು ಬಳಸುವುದು, ನಾಡ ಬಾಂಬ್ಗಳು ಹಾಗೂ ಪೈಪ್ ಬಾಂಬ್ಗಳ ತಯಾರಿಕೆ ಮತ್ತು ಸ್ಫೋಟಿಸುವುದದ ಕುರಿತು ಮೂರು ದಿನಗಳ ತರಬೇತಿ ಶಿಬಿರದಲ್ಲಿ ಕಲಿಸಲಾಗಿತ್ತು' ಎಂದು ಕರ್ನಾಟಕ ಎಸ್ಐಟಿ ಆರೋಪಪಟ್ಟಿಯಲ್ಲಿ ಹೇಳಿದೆ.
ಹಲವು ತರಬೇತಿ ಶಿಬಿರಗಳು
ಗೌರಿ ಲಂಕೇಶ್ ಹತ್ಯೆಯಲ್ಲಿ ಆರು ಮಂದಿ ಭಾಗಿಯಾಗಿದ್ದು, ಅಮೋಲ್ ಕಾಳೆ ಮುಖ್ಯ ಯೋಜಕನಾಗಿದ್ದ. ಗಣೇಶ್ ಮಿಸ್ಕಿನ್, ಅಮಿತ್ ಬಡ್ಡಿ, ಭರತ ಕುರ್ನೆ, ಶರದ್ ಕಲಾಸ್ಕರ್ ಮತ್ತು ವಾಸುದೇವ್ ಸೂರ್ಯವಂಶಿ ಶಸ್ತ್ರಾಸ್ತ್ರ ಪೂರೈಕೆದಾರ ಮತ್ತು ಸಹಾಯಕರಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೇ ರೀತಿಯ ಶಿಬಿರಗಳು 2011 ಮತ್ತು 2015ರ ಜನವರಿಯಲ್ಲಿ ಜಲ್ನಾದಲ್ಲಿ ನಡೆದಿದ್ದವು. ಹಾಗೆಯೇ 2015ರ ನವೆಂಬರ್ನಲ್ಲಿ ಅಹಮದಾಬಾದ್ನಲ್ಲಿ ಹಾಗೂ 2016ರ ಜನವರಿಯಲ್ಲಿ ನಾಸಿಕ್ನಲ್ಲಿ ನಡೆದಿದ್ದವು ಎಂದು ಪತ್ರಿಕೆ ವರದಿ ಮಾಡಿದೆ.
ಸಿಕ್ಕಿಬಿದ್ದಿದ್ದ 'ಬಡೇ ಬಾಬಾಜಿ'
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತರು ಮತ್ತು ಸಾಕ್ಷಿಗಳು ಹೇಳಿರುವಂತೆ ಪ್ರತಿಯೊಬ್ಬ ತರಬೇತುದಾರರೂ ಪೆಟ್ರೋಲ್ ಬಾಂಬ್ನಿಂದ ಹಿಡಿದು ಪೈಪ್ ಬಾಂಬ್ ವರೆಗೆ ತಮ್ಮದೇ ವಿಭಾಗದಲ್ಲಿ ಪರಿಣತಿ ಪಡೆದಿದ್ದರು. ಅವರಲ್ಲಿ ಒಬ್ಬರಾದ 'ಬಾಬಾಜಿ' ಸನ್ಯಾಸಿಯಂತೆ ಉಡುಗೆ ಧರಿಸಿದ್ದರು. 45 ವರ್ಷದ 'ದೊಡ್ಡ ಬಾಬಾಜಿ'ಯನ್ನು 2018ರ ನವೆಂಬರ್ನಲ್ಲಿ ಭರೂಚ್ನಲ್ಲಿ ಗುಜರಾತ್ ಎಟಿಎಸ್ ಬಂಧಿಸಿತ್ತು. ಬಳಿಕ ಆತನನ್ನು 2007ರ ಅಜ್ಮೀರ್ ಬಾಂಬ್ ಸ್ಫೋಟದ ಬಳಿಕ ತಲೆಮರೆಸಿಕೊಂಡಿದ್ದ ಶಂಕಿತ ಆರೋಪಿ ಸುರೇಶ್ ನಾಯರ್ ಎಂದು ಗುರುತಿಸಲಾಗಿತ್ತು.