ಕುಡಿಯುವ ನೀರಿನ ಬೇಡಿಕೆಗೆ ವಿರೋಧವಿಲ್ಲ : ಗೋವಾ ಪರ ವಕೀಲ
ಪಣಜಿ, ಡಿಸೆಂಬರ್ 27: ಕುಡಿಯುವ ನೀರಿನ ಬೇಡಿಕೆಗೆ ಯಾವ ರಾಜ್ಯ ಕೂಡಾ ವಿರೋಧ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಆದರೆ, ಕರ್ನಾಟಕದ ಬೇಡಿಕೆಯಲ್ಲೇ ಲೋಪವಿದೆ ಎಂದು ಗೋವಾ ಪರ ವಕೀಲ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ಅಭಿಪ್ರಾಯಪಟ್ಟಿದ್ದಾರೆ.
ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕಾರ್ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ರಾಜಕೀಯ ಲಾಭ ನಷ್ಟದ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಎಂದು ಆತ್ಮಾರಾಮ್ ಹೇಳಿದರು.
ಮಹದಾಯಿ ವಿವಾದ-ಹೋರಾಟ ಅಂದಿನಿಂದ ಇಂದಿನವರೆಗೆ
ಕರ್ನಾಟಕ 7.56 ಟಿಎಂಸಿ ನೀರು ಕೇಳುತ್ತಿದೆ. ಆದರೆ, ಜಲಾನಯನ ಪ್ರದೇಶದ ಬಳಕೆಯನ್ನು ಮಾತ್ರ ಪರಿಗಣಿಸಿದರೆ ಬೆಳಗಾವಿ, ಖಾನಾಪುರ, ಪ್ರದೇಶಕ್ಕೆ ಎಷ್ಟು ಕುಡಿಯುವ ನೀರು ಬೇಕೋ ಅದನ್ನು ಅವರು ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ. ಈ ಬಗ್ಗೆ ನ್ಯಾಯಾಧೀಕರಣದ ಮುಂದೆ ಕೂಡಾ ಸ್ಪಷ್ಟಪಡಿಸಲಾಗಿದೆ. ಅದರಂತೆ, ಬೆಳಗಾವಿ ಖಾನಾಪುರ ಜನರಿಗೆ 0.1 ಟಿಎಂಸಿ ನೀರು ಬಿಡಲು ಸಿದ್ಧ ಎಂದರು.
ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೋರಾಟಗಾರರು, ರಾಜಕೀಯ ಮುಖಂಡರಂತೆ ನ್ಯಾಯಾಧೀಕರಣದ ಮುಂದೆ ವಾದಿಸಲು ಸಾಧ್ಯವಿಲ್ಲ. ಹುಬ್ಬಳ್ಳಿ-ಧಾರವಾಡ ಭಾಗದ ಕುಡಿಯುವ ನೀರಿನ ಅಗತ್ಯಕ್ಕಾಗಿ ಬೇಡಿಕೆ ಇದೆ. ಆದರೆ, ಜಲಾನಯನ ಪ್ರದೇಶವಲ್ಲದ ಭಾಗಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದರು.
ನ್ಯಾಯಾಧಿಕರಣದಲ್ಲಿ ಕೇಸ್ ಗೋವಾ ಪರವಿದೆ
ನ್ಯಾಯಾಧಿಕರಣದಲ್ಲಿ ಕೇಸ್ ಗೋವಾ ಪರ ಇದೆ. ಗೋವಾ ವಕೀಲರ ತಂಡ ರಾಜ್ಯದ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿದೆ. ಮಹದಾಯಿ ವಿಚಾರಣೆ ಕೊನೆಯ ಹಂತಕ್ಕೆ ಬಂದಿದೆ. ಎಲ್ಲಾ ಸಾಕ್ಷಿ, ಪುರಾವೆಗಳ ಪರಿಶೀಲನೆ ಮುಗಿದಿದೆ ಎಂದರು.
ಜನವರಿ 15ರೊಳಗೆ ಕರ್ನಾಟಕ ಪರಿಶೀಲನೆ ಅರ್ಜಿ ಸಲ್ಲಿಸಬಹುದು, ಫೆಬ್ರವರಿ 6ರಿಂದ ವಾದ ಶುರುವಾಗಲಿದ್ದು, ಆಗಸ್ಟ್ 2018ರ ವೇಳೆಗೆ ನ್ಯಾಯಾಧಿಕರಣದ ಅವಧಿ ಕೂಡ ಮುಕ್ತಾಯವಾಗುತ್ತದೆ. ಅದಕ್ಕೂ ಮುನ್ನ ಅವರು ತೀರ್ಪು ಪ್ರಕಟಿಸಬೇಕು
ಮಹಾದಾಯಿ ನದಿ ನೀರು ಹಂಚಿಕೆ ವಸ್ತುಸ್ಥಿತಿ ಏನಿದೆ?
ಮಾಂಡೋವಿ(ಮಹಾನದಿ) ನೀರಲ್ಲಿ 7.56 ಟಿಎಂಸಿ ಪಾಲು ಕೇಳಿರುವ ಕರ್ನಾಟಕ ಸರ್ಕಾರಕ್ಕೆ ಅಗತ್ಯ ನೀರು ನೀಡಲು ಗೋವಾ ಹಾಗೂ ಮಹಾರಾಷ್ಟ್ರ ಹಿಂದೇಟು ಹಾಕುತ್ತಿದೆ. ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ.ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋವಾ ಪರ ವಾದ ಹೇಗೆ?
ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಆಯ್ಕೆಯಾಗುವ ವಕೀಲರು ರಾಜ್ಯ ಸರ್ಕಾರಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಪರ ವಕಾಲತ್ತು ಮಾಡಬಹುದು. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯ. ಕೇಂದ್ರ ಹಾಗೂ ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಯಲ್ಲಿದ್ದರೂ ಗೋವಾ ಪರ ವಕಾಲತ್ತು ವಹಿಸಲು ಆತ್ಮಾರಾಮ್ ನಾಡಕರ್ಣಿ ಅವರಿಗೆ ಅನುಮತಿ ಸಿಕ್ಕಿದೆ.
ಆತ್ಮಾರಾಮ್ ವಾದಕ್ಕೆ ಹೋರಾಟಗಾರರ ಆಕ್ಷೇಪ
ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕಗೊಳ್ಳುವ ಮುನ್ನ ನಾಡಕರ್ಣಿ ಗೋವಾದ ಅಡ್ವೊಕೇಟ್ ಜನರಲ್ ಆಗಿದ್ದರೂ ಅವರ ವಾದ ತಟಸ್ಥ ನೀತಿಯನ್ನು ಅನುಸರಿಸುವುದಿಲ್ಲ. ಮೊದಲೆ ಕೇಂದ್ರ ಸರ್ಕಾರಕ್ಕೂ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೂ ಆಗಿ ಬರುವುದಿಲ್ಲ. ಹೀಗಾಗಿ, ನಿಷ್ಪಕ್ಷಪಾತ ವಾದ, ಸಲಹೆ ಆತ್ಮಾರಾಮ್ ರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕಳಸಾ ಬಂಡೂರಿ ಹೋರಾಟಗಾರರಾದ ವಿಜಯ್ ಕುಲಕರ್ಣಿ ಹಾಗೂ ಸಂಗಡಿಗರು ಅವರು ಇಂಡಿಯಾ ಗೇಟ್ ಎದುರು ಪ್ರತಿಭಟನೆ ನಡೆಸಿದ್ದರು.