ಸಕಲ ಮಾನಸಿಕ ಸಮಸ್ಯೆಗಳಿಗೆ ಮಹಾಭಾರತದಲ್ಲಿ ಉತ್ತರ: ಐಎಂಎ ಮುಖ್ಯಸ್ಥ
ಮಹಾಭಾರತದಲ್ಲಿ ಎಲ್ಲಾ ಮಾನಸಿಕ ಸಮಸ್ಯೆಗಳಿಗೆ ಉತ್ತರ. ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ರಾಷ್ಟ್ರೀಯ ಅಧ್ಯಕ್ಷ ಕೆ.ಕೆ. ಅಗರ್ವಾಲ್ ಪ್ರತಿಪಾದನೆ. ನಿಯತಕಾಲಿಕೆಯೊಂದರಲ್ಲಿ ಹೇಳಿಕೆ.
ನವದೆಹಲಿ, ಜುಲೈ 26: ಮಾನವನು ನಿತ್ಯ ಅನುಭವಿಸುವ ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಗೆ 'ಮಹಾಭಾರತ' ಪುರಾಣದಲ್ಲಿ ಉತ್ತರವಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮುಖ್ಯಸ್ಥ ಕೆ.ಕೆ. ಅಗರ್ವಾಲ್ ತಿಳಿಸಿದ್ದಾರೆ. ಅಲ್ಲದೆ, ಮಹಾಭಾರತದಲ್ಲಿ ಬರುವ ಶ್ರೀ ಕೃಷ್ಣನು ಅತಿ ದೊಡ್ಡ ಸಲಹೆಗಾರ (ಕೌನ್ಸೆಲರ್) ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಕ್ವೆಟಾರ್ ಲೈನ್ ಎಂಬ ನಿಯತಕಾಲಿಕೆಯ ಇತ್ತೀಚೆಗಿನ ಸಂಚಿಕೆಯಾದ 'ಕಾಬ್ವೆಬ್ಸ್ ಇನ್ ಸೈಡ್ ಅಸ್' , ''ಭಾರತದ ಮನೋವಿಜ್ಞಾನವು ಭಗವದ್ಗೀತೆಯಿಂದಲೇ ಆರಂಭವಾಗಿದೆ ಎನ್ನಲಡ್ಡಿಯಿಲ್ಲ. ಏಕೆಂದರೆ, ಅಂದು ಶ್ರೀ ಕೃಷ್ಣನು, ಅರ್ಜುನನೊಂದಿಗೆ ನಡೆಸಿದ ಸಂವಾದವೇ ಭಗವದ್ಗೀತೆಯಾಗಿ ರೂಪುಗೊಂಡಿತು. ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶದಿಂದ ಅರ್ಜುನ ಮಾನಸಿಕವಾಗಿ ಸದೃಢನಾಗುತ್ತಾನೆ. ಹಾಗಾಗಿ, ಶ್ರೀ ಕೃಷ್ಣನನ್ನು ಜಗದ್ವಿಖ್ಯಾತ ಸಲಹೆಗಾರ ಎನ್ನುವುದರಲ್ಲಿ ತಪ್ಪಿಲ್ಲ'' ಎಂದಿದ್ದಾರೆ.
ನಮ್ಮ ಭಾರತದಲ್ಲಿ ಮನೋ ವಿಜ್ಞಾನ ಎಂದರೇನು, ಮನೋ ಕಾಯಿಲೆಗಳಿಗೆ ಔಷಧಿಗಳು ಇವೆಯೇ ಎಂಬುದು ಅರಿವಿಗೆ ಬರುವುದಕ್ಕೂ ಮುನ್ನವೇ ನಮ್ಮ ಹಿಂದೂ ಋಷಿ ಮುನಿಗಳು ಮನಸ್ಸಿನ ನಾನಾ ವಿಚಾರಗಳನ್ನು ತಮ್ಮ ಗ್ರಂಥಗಳಲ್ಲಿ ತಿಳಿಸಿದ್ದರು. ಅದಕ್ಕೂ ಮುನ್ನವೇ ಶ್ರೀ ಕೃಷ್ಣನು ಭಗವದ್ಗೀತೆಯ ಮೂಲಕ ಭಾರತೀಯ ಮನೋಶಾಸ್ತ್ರಕ್ಕೆ ನಾಂದಿ ಹಾಡಿದ ಮಹಾಪುರುಷನಾಗಿದ್ದಾನೆ ಎಂದು ಅವರು ಹೇಳಿದ್ದಾರೆ.