ತಮಿಳುನಾಡು: ತಾಮ್ರ ಘಟಕದ ವಿಸ್ತರಣೆಗೆ ಹೈಕೋರ್ಟ್ ಮಧ್ಯಂತರ ತಡೆ
ತೂತುಕುಡಿ, ಮೇ 23: ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿರುವ ವೇದಾಂತ ಸಮೂಹಕ್ಕೆ ಸೇರಿದ ತೂತುಕುಡಿ ಸ್ಟೆರ್ಲೈಟ್ ಕಾಪರ್ ಕಾರ್ಖಾನೆ ಘಟಕದ ವಿಸ್ತರಣೆಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಾಮ್ರ ಘಟಕದಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಘಟಕದ ಸುತ್ತಮುತ್ತ ವಾಸಿಸುವ ಗ್ರಾಮಗಳು ಜನರು ನಿರಂತರವಾಗಿ ಅನಾರೋಗ್ಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಘಟಕವನ್ನು ಸ್ಥಗಿತಗೊಳಿಸುವಂತೆ ಕಾನೂನು ಸಮರ ಮತ್ತು ಪ್ರತಿಭಟನೆಗಳು ಆರಂಭವಾಗಿದ್ದವು.
ಕಾರ್ಖಾನೆ ಮುಚ್ಚಲು ಆಗ್ರಹಿಸಿ ಪ್ರತಿಭಟನೆ: ತೂತುಕುಡಿ ಉದ್ವಿಗ್ನ, 8 ಸಾವು
ಪ್ರತಿಭಟನೆಯ 100ನೇ ದಿನವಾದ ಮಂಗಳವಾರ ತೂತುಕುಡಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರು ಎಲ್ಲೆಡೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂಸಾಚಾರ ಭುಗಿಲೆದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ಗೆ 12 ಮಂದಿ ಬಲಿಯಾಗಿದ್ದರು.
ತಾಮ್ರದ ಘಟಕದ ವಿಸ್ತರಣೆಗೆ ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಮದುರೈ ನ್ಯಾಯಪೀಠವು ಘಟಕಕ್ಕೆ ತಡೆ ನೀಡಿದೆ.
ಅಲ್ಲದೆ, ಯಾವುದೇ ವಿಸ್ತರಣೆಗೂ ಮುನ್ನ ಸಾರ್ವಜನಿಕರ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು ಎಂದು ಕಂಪೆನಿಗೆ ಸೂಚಿಸಿದೆ.
ಹೋರಾಟ ಮುಂದುವರಿಸುತ್ತೇವೆ
ಕಂಪೆನಿ ವಿರುದ್ಧ 25 ವರ್ಷಗಳಿಂದ ಪ್ರತಿಭಟನೆಯ ನೇತೃತ್ವ ವಹಿಸಿರುವ, ನಿವೃತ್ತ ಪ್ರೊಫೆಸರ್ ಫಾತಿಮಾ ಬಾಬು, ಘಟಕ ಸಂಪೂರ್ಣ ಮುಚ್ಚುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಇದು ಇನ್ನೂ ಮಧ್ಯಂತರ ತಡೆ ಮಾತ್ರ. ಘಟಕದ ವಿಸ್ತರಣೆಗೆ ನಾಲ್ಕು ತಿಂಗಳ ಒಳಗೆ ಸಾರ್ವಜನಿಕ ಸಲಹೆ ಪಡೆದುಕೊಳ್ಳುವಂತೆ ಕೋರ್ಟ್ ನಿರ್ದೇಶಿಸಿದೆ. ಈ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
|
ಸ್ಥಳಕ್ಕೆ ಕಮಲಹಾಸನ್ ಭೇಟಿ
ಕಾರ್ಖಾನೆ ವಿರುದ್ಧದ ಹೋರಾಟಕ್ಕೆ ಹಿಂದೆಯೂ ಬೆಂಬಲ ನೀಡಿದ್ದ ನಟ, ರಾಜಕಾರಣಿ ಕಮಲಹಾಸನ್, ಪ್ರತಿಭಟನೆ ನಡೆದ ತೂತುಕುಡಿಗೆ ಭೇಟಿ ನೀಡಿದ್ದಾರೆ.
ಮಂಗಳವಾರ ನಡೆದ ಪ್ರತಿಭಟನೆ ವೇಳೆ ಗಾಯಗೊಂಡು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
|
ಚಿದಂಬರಂ ವಿರುದ್ಧ ಹರಿಹಾಯ್ದ ಸ್ವಾಮಿ
ಸ್ಟೆರ್ಲೈಟ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಪಿ. ಚಿದಂಬರಂ ಅವರು ಕಂಪೆನಿಯ ಪರವಾಗಿ ವಿಚಾರಣೆಗೆ ಹಾಜರಾಗಬೇಕು. ಏಕೆಂದರೆ ಅವರು ಈ ಹಿಂದೆ ಕಂಪೆನಿಯ ವೇತನ ಸಹಿತ ನಿರ್ದೇಶಕರಾಗಿದ್ದರು. ಈ ವೇತನವು ಸಂಜೆ ವೇಳೆಯ 'ಮನರಂಜನೆ'ಯನ್ನೂ ಒಳಗೊಂಡಿತ್ತು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವಿಟ್ಟರ್ನಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.
|
ಕಲಾವಿದರ ಖಂಡನೆ
ತಮಿಳುನಾಡು ಚಿತ್ರರಂಗದ ಅನೇಕ ನಟ ನಟಿಯರು ತೂತುಕುಡಿಯಲ್ಲಿ ಮಂಗಳವಾರ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಟ ಸಿದ್ಧಾರ್ಥ್, ಇದು ನಮ್ಮ ಇತಿಹಾಸದ ಕರಾಳ ದಿನ ಎಂದು ಹೇಳಿದ್ದಾರೆ. ತೂತುಕುಡಿಯಲ್ಲಿ ಪ್ರತಿಭಟನಾಕಾರರ ಸಾವಿನ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ಅರವಿಂದ್ ಸ್ವಾಮಿ ಹೇಳಿದ್ದಾರೆ.
ಕೊನೆಗೂ ಎಚ್ಚೆತ್ತ ಸರ್ಕಾರ
ಸ್ಟೆರ್ಲೈಟ್ ಕಾಪರ್ ಕಾರ್ಖಾನೆ ವಿರುದ್ಧದ ಹೋರಾಟ ಇಂದು ನಿನ್ನೆಯದಲ್ಲ. ಕಂಪೆನಿ ಆರಂಭವಾದ 25 ವರ್ಷದಿಂದಲೂ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಕಾನೂನು ಸಮರದಲ್ಲಿಯೂ ಗೆಲುವು ಕಾಣದ ಜನರು ಕೊನೆಗೆ ಬೇಸತ್ತು ಬೀದಿಗಿಳಿಯುವ ತೀರ್ಮಾನ ಕೈಗೊಂಡಿದ್ದರು.
ತೂತುಕುಡಿಯಲ್ಲಿ ಪ್ರತಿಭಟನೆ ಆರಂಭವಾಗಿ 99 ದಿನಗಳು ಕಳೆದಿದ್ದರೂ ಮಾಧ್ಯಮಗಳಲ್ಲಿ ಅಷ್ಟಾಗಿ ಸುದ್ದಿಯಾಗುತ್ತಿರಲಿಲ್ಲ. ಕೊನೆಗೆ ದೇಶದ ಗಮನ ಸೆಳೆಯಲು ಇಲ್ಲಿನ ಜನತೆ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಯಿತು. ಪೊಲೀಸರ ಗುಂಡಿಗೆ 12 ಮಂದಿ ಬಲಿಯಾದ ಬಳಿಕ ರಾಷ್ಟ್ರೀಯ ಮಾಧ್ಯಮಗಳು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಾಧ್ಯಮಗಳೂ ಇತ್ತ ಗಮನ ಹರಿಸಿವೆ.
ದೇಶದಾದ್ಯಂತ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತವಾಗುತ್ತಿದ್ದಂತೆಯೇ ತಮಿಳುನಾಡು ಸರ್ಕಾರ ಕೂಡ ಎಚ್ಚೆತ್ತಿದೆ.