ಮಧ್ಯಪ್ರದೇಶ ಕಾಲ್ತುಳಿತದ ದುರಂತದ ಚಿತ್ರಗಳು
ಭೋಪಾಲ, ಅ.14 : ಮಧ್ಯಪ್ರದೇಶದ ಐತಿಹಾಸಿಕ ರತನ್ಘರ್ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ ಕನಿಷ್ಠ 120 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್ಘರ್ ನಲ್ಲಿ ದೇವಾಲಯವಿದೆ. ಅದಕ್ಕೆ ಸಂಪರ್ಕ ಕಲ್ಪಿಸಲು ಸಿಂಧು ನದಿಗೆ ಈ ಸೇತುವೆ ಕಟ್ಟಲಾಗಿದೆ. ಕಾಲ್ತುಳಿತ ಸಂಭವಿಸುವ ಸಂರ್ಭದಲ್ಲಿ ಸೇತುವೆ ಮೇಲೆ 25,000ಕ್ಕೂ ಅಧಿಕ ಜನರಿದ್ದರು.
ಭಾನುವಾರ ಬೆಳಗ್ಗೆ ಭಕ್ತನೊಬ್ಬನಿಗೆ ಸೇತುವೆಯ ಒಂದು ಸಲಾಕೆ ಮುರಿದಂತೆ ಕಾಣಿಸಿದೆ. ತಕ್ಷಣ ಆತ ಸೇತುವೆ ಕುಸಿಯುತ್ತಿದೆ ಎಂದು ಜೋರಾಗಿ ಕೂಗಿಕೊಂಡಿದ್ದಾನೆ. ಇದರಿಂದ ಭಕ್ತಾದಿಗಳು ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು ಇದರಿಂದ ಆಯುಧಪೂಜೆ ದಿನದಂದು ಭೀಕರ ದುರಂತ ಸಂಭವಿಸಿದೆ.
ಹಿಂದೆ 2006ರಲ್ಲಿ ಇದೇ ಸೇತುವೆಯಲ್ಲಿ ಊಹಾಪೋಹಗಳಿಂದಾಗಿ ಕಾಲ್ತುಳಿತ ಸಂಭವಿಸಿ 50 ಮಂದಿ ಭಕ್ತರು ಸೇತುವೆಯಿಂದ ಕೆಳಗೆ ಹಾರಿ ನೀರು ಪಾಲಾಗಿದ್ದರು. ಭಾನುವಾರದ ಘಟನೆಯು ಅದೇ ದುರಂತವನ್ನು ಮತ್ತೆ ನೆನಪಿಸುವಂತೆ ಮಾಡಿದೆ. ಚಿತ್ರಗಳಲ್ಲಿ ನೋಡಿ ಕಾಲ್ತುಳಿತ ಸಂಭವಿಸಿದ ಸೇತುವೆ.(ಪಿಟಿಐ ಚಿತ್ರಗಳು)
ಹೇಗಿದೆ ಸೇತುವೆ
ಸಿಂಧು ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ 500 ಮೀಟರ್ ಉದ್ದ ಮತ್ತು ಹತ್ತು ಮೀಟರ್ ಅಗಲವಿದೆ. ಸೇತುವೆಯಲ್ಲಿ ದೇವಸ್ಥಾನಕ್ಕೆ ತೆರಳಲು ಸುಮಾರು 25 ಸಾವಿರ ಭಕ್ತಾದಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.
ಲಾಠಿ ಪ್ರಹಾರ
ಭಕ್ತಾದಿಗಳ ಪ್ರಕಾರ ಸಾಲಿನಲ್ಲಿ ನಿಂತಿದ್ದ ಭಕ್ತರು, ಸಾಲು ತಪ್ಪಿಸಿದ್ದರಿಂದ ಗಲಾಟೆ ಸಂಭವಿಸಿತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆಗ ಲಾಠಿ ತಪ್ಪಿಸಿಕೊಳ್ಳಲು ಭಕ್ತರು ಒಂದು ದಿಕ್ಕಿಗೆ ಓಡಲಾರಂಭಿಸಿದಾಗ, ಕಾಲ್ತುಳಿತ ಸಂಭವಿಸಿತು ಎಂದು ಹೇಳಲಾಗುತ್ತಿದೆ.
ನದಿಗೆ ಹಾರಿ ಪ್ರಾಣ ಬಿಟ್ಟರು
ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಯಮುನಾ ನದಿಯ ಉಪನದಿಯಾಗಿರುವ ಸಿಂಧು ಉಕ್ಕಿ ಹರಿಯುತ್ತಿತ್ತು. ಹಲವು ಮಂದಿ ಕಾಲ್ತುಳಿತ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದು, ಅವರು ಸಹ ಕೊಚ್ಚಿಕೊಂಡು ಹೋಗಿದ್ದಾರೆ. ಆದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದುರಂತಕ್ಕೆ ಸಾಕ್ಷಿ
ಸೇತುವೆ ಮೇಲೆ ರಕ್ತ ಸಿಕ್ತ ಮೃತದೇಹಗಳು, ಭಕ್ತರ ಚೀಲ, ಚಪ್ಪಲಿ ಇತ್ಯಾದಿಗಳು ಒಂದು ಭೀಕರ ದುರಂತದ ಕರಾಳ ಮುಖವನ್ನು ತೋರಿಸುತ್ತಿತ್ತು.
ಪರಿಹಾರ ಕಾರ್ಯವೂ ವಿಳಂಬ
ದುರಂತ ಸಂಭವಿಸಿದ ತಕ್ಷಣ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಲು ಸಾಧ್ಯವಾಗಿಲ್ಲ. ಈ ದೇವಾಲಯ ಗ್ವಾಲಿಯರ್ ನಿಂದ ಸುಮಾರು 75 ಕಿ.ಮೀ. ದೂರದಲ್ಲಿದೆ. ಕೆಟ್ಟ ರಸ್ತೆಯಿಂದಾಗಿ ಮತ್ತು 10 ಕಿ.ಮೀ. ಉದ್ದದಷ್ಟು ಟ್ರಾಫಿಕ್ ಜಾಮ್ನಿಂದಾಗಿ ರಕ್ಷಣಾ ಪಡೆಗಳು ಆಗಮಿಸುವುದು ವಿಳಂಬವಾಯಿತು.
ಹಿಂದಿನ ದುರಂತ
2006ರಲ್ಲಿ ಇದೇ ಸೇತುವೆಯಲ್ಲಿ ಊಹಾಪೋಹಗಳಿಂದಾಗಿ ಕಾಲ್ತುಳಿತ ಸಂಭವಿಸಿ 50 ಮಂದಿ ಭಕ್ತರು ಸೇತುವೆಯಿಂದ ಕೆಳಗೆ ಹಾರಿ ನೀರು ಪಾಲಾಗಿದ್ದರು. ಆದರೂ, ಸರ್ಕಾರ ಈ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪಗಳು ಇವೆ.