ಟಿಕೆಟ್ ಹಂಚಿಕೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ
ಭೋಪಾಲ್, ಅಕ್ಟೋಬರ್ 29: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೊಂದು ತಿಂಗಳು ಬಾಕಿ ಉಳಿದಿದ್ದು, ಟಿಕೆಟ್ ಹಂಚಿಕೆಯ ಭರಾಟೆ ಆರಂಭವಾಗಿದೆ.
ಸದ್ಯದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದ್ದು, ಅದಕ್ಕೂ ಮುನ್ನವೇ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ರಾಹುಲ್ ಮಧ್ಯಸ್ಥಿಕೆ ನಂತರವೂ ಬಗೆಹರಿದಿಲ್ಲ ಟಿಕೆಟ್ ಹಂಚಿಕೆ ಬಿಕ್ಕಟ್ಟು!
ಟಿಕೆಟ್ ಹಂಚಿಕೆಯ ಸಮಯದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ. ಈ ಆಕ್ರೋಶ ಚುನಾವಣೆಯ ಕೊನೆಯ ಕ್ಷಣಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾದರೆ ಅಚ್ಚರಿಯಿಲ್ಲ.
ಮಧ್ಯಪ್ರದೇಶ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಸದ್ಯದಲ್ಲೇ ಅದು ಬಿಡುಗಡೆಯಾಗಲಿದ್ದು, ಈ ಪಟ್ಟಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಅಂತಿಮಗೊಳಿಸಿದ್ದಾರೆ.
ಯಾರ್ಯಾರಿಗೆ ಟಿಕೆಟ್ ಭಾಗ್ಯ?!
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಬಿಎಸ್ಪಿ ಮೈತ್ರಿ ಮಾಡಿಕೊಳ್ಳದಿದ್ದರೂ ಬಿಎಸ್ಪಿಯಿಂದ ಟಿಕೆಟ್ ವಂಚಿತರಾದ ಹಲವರು ಕಾಂಗ್ರೆಸ್ ಸೇರಿದ್ದಾರೆ. ಅವರಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರ್ಧರಿಸಿದೆ. ಇದರಿಂದ ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಉಂಟಾಗಿದೆ. ಬಹುಜನ ಸಮಾಜವಾದಿ(ಬಿಎಸ್ಪಿ) ಮತ್ತು ಸಮಾಜವಾದಿ(ಎಸ್ಪಿ) ಪಕ್ಷದಿಂದ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಇವರನ್ನು ಓಲೈಸುವ ಅವಸರದಲ್ಲಿರುವ ಪಕ್ಷ, ಮೂಲ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ.
ಭುಗಿಲೆದ್ದ ಆಕ್ರೋಶ!
ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಕಂಡವರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ ಎನ್ನಲಾಗಿದೆ. ಇವರೆಲ್ಲ ಬೇರೆ ಪಕ್ಷದಿಂದ ಕಾಂಗ್ರೆಸ್ಸಿಗೆ ಟಿಕೆಟ್ ಗಾಗಿಯೇ ಸೇರಿದವರು ಎಂಬುದು ಮೂಲಕಾಂಗ್ರೆಸ್ಸಿಗರ ವಾದ. 25,000 ಮತಗಳ ಅಂತರದಿಂದ ಸೋಲುಂಡವರಿಗೂ ಟಿಕೆಟ್ ನೀಡಲಾಗಿದೆ. ಈ ಬಗ್ಗೆ ವಿಚಾರಿಸಿದರೆ, 'ಕಾಂಗ್ರೆಸ್ ಅಭ್ಯರ್ಥಿ ಇದಕ್ಕಿಂತಲೂ ಹೆಚ್ಚಿನ ಅಮತರದಲ್ಲಿ ಸಸೋತಿದ್ದಾರೆ' ಎಂಬ ಸಮಜಾಯಿಷಿ ಸಿಗುತ್ತಿದೆ! ಪಕ್ಷದ ಕುರಿತು ನಿಷ್ಠೆಯಿಂದ ಕೆಲಸ ಮಾಡಿದವರನ್ನು ಹೀಗೆ ನಡೆಸಿಕೊಳ್ಳುತ್ತಿರುವುದು ಕಾರ್ಯಕರ್ತರ ಮಟ್ಟದಲ್ಲೂ ಸಾಕಷ್ಟು ಅಸಮಾಧಾನ ಸೃಷ್ಟಿಸಿದೆ. ಚುನಾವಣೆಯ ಸಮಯದಲ್ಲಿ ಈ ಆಕ್ರೋಶ ಸ್ಫೋಟವಾದರೆ ಅಚ್ಚರಿಯೇನಿಲ್ಲ.
ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?
ಸಾಮೂಹಿಕ ರಾಜೀನಾಮೆಯ ಬೆದರಿಕೆ
ಇಲ್ಲಿನ ರೆವಾ ಮತ್ತು ಬುಂದೇಲ್ಖಂಡ್, ಪನ್ನಾ ಪ್ರದೇಶಗಳಲ್ಲಿ ಟಿಕೆಟ್ ಹಂಚಿಕೆ ದೊಡ್ಡ ತಲೆನೋವಾಗಿದೆ. ಕ್ರಿಮಿನಲ್ ಪ್ರಕರಣಗಳಿರುವ ಮತ್ತು ಗಣಿ ಹಗರಣಗಳಲ್ಲಿ ಸಿಲುಕಿಕೊಂಡ ನಾಯಕರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸ್ಥಳಿಯ ನಾಯಕರು ಬೆದರಿಕೆ ಒಡ್ಡಿದ್ದಾರೆ! ಬಿಎಸ್ಪಿಯಿಂದ ಬಂದ ಮಹೇಂದರ್ ವರ್ಮಾ, ಬೃಜೇಂದ್ರ ಕುಮಾರ್ ವ್ಯಾಸ್ ಮತ್ತು ಎಸ್ಪಿಯಿಂದ ಬಂದ ಚರಣ್ ಸಿಂಗ್ ಯಾದವ್ ಇವರುಗಳಿಗೆ ಟಿಕೆಟ್ ನೀಡುವುದು ಸ್ಥಳೀಯ ನಾಯಕರಿಗೆ ಸುತಾರಾಂ ಇಷ್ಟವಿಲ್ಲ!
ಹಿರಿಯ ನಾಯಕರ ಕೈಯಲ್ಲಿ ಅಭ್ಯರ್ಥಿಗಳ ಪಟ್ಟಿ, ರಾಹುಲ್ ಗೆ ತಲೆನೋವು?!
ನ.28 ರಂದು ಚುನಾವಣೆ
ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು ವಿಧಾನಸಭಾ ಕ್ಷೇತ್ರಗಳು 230. ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 116.