ಹೆಣ್ಣು ಮಕ್ಕಳ ಹೆಗಲಿಗೆ ನೊಗ ಹೊರಿಸಿದ ಬಡ ರೈತ
ಭೋಪಾಲ್, ಜುಲೈ 9: ಎತ್ತುಗಳನ್ನು ಕೊಳ್ಳಲು ಹಣವಿಲ್ಲದೆ ತನ್ನ ಹೆಣ್ಣು ಮಕ್ಕಳ ಮೂಲಕವೇ ರೈತರೊಬ್ಬರು ನೇಗಿಲು ಎಳೆಸಿದ ಮನಕಲಕುವ ಸುದ್ದಿಯೊಂದು ವರದಿಯಾಗಿದೆ. ಮಧ್ಯ ಪ್ರದೇಶದ ಸೆಹೋರೆ ಜಿಲ್ಲೆಯ ಬಸಂತಪುರಿ ಭಾಗಕ್ಕೆ ಸೇರಿದ ಪಂಗ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದು ಭಾರತದ ಬಡ ರೈತರ ಆರ್ಥಿಕ ಬಿಕ್ಕಟ್ಟಿಗೆ ಕನ್ನಡಿ ಹಿಡಿಯುತ್ತಿದೆ.
ತನ್ನ ಜಮೀನಿನಲ್ಲಿ ಜೋಳದ ಬೆಳೆಗೆ ಹೂಟೆ ಮಾಡಲು ತನ್ನ ಇಬ್ಬರು ಹೆಣ್ಣುಮಕ್ಕಳ ಹೆಗಲಿಗೆ ಸರ್ದಾರ್ ಕಹ್ಲಾ ಎಂಬ ರೈತರು ನೊಗ ಹೊರಿಸಿದ್ದಾರೆ. ಹಣ ಕಾಸಿನ ಕೊರತೆಯಿಂದ ಶಾಲೆ ಬಿಟ್ಟ 14 ವರ್ಷದ ರಾಧಿಕಾ, 11 ವರ್ಷದ ಕುಂತಿ ಈತನ ಮಕ್ಕಳಾಗಿದ್ದು ಅವರ ಮೂಲಕವೇ ನೇಗಿಲು ಎಳೆಸಿ ನೆಲ ಉತ್ತಿದ್ದಾರೆ.
"ಕುಟುಂಬಕ್ಕೆ ಅಗತ್ಯ ಧಾನ್ಯ ಬೆಳೆಯಲು ಭೂಮಿ ಉಳುಮೆ ಮಾಡಬೇಕು. ಆದರೆ ಎತ್ತುಗಳನ್ನು ಖರೀದಿಸಲು ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಇದರಿಂದ ಮಕ್ಕಳು ಸೇರಿದಂತೆ ನಾವೇ ಉಳುಮೆ ಮಾಡುತ್ತಿದ್ದೇವೆ," ಎಂದು ಬಡ ರೈತ ಸರ್ದಾರ್ ಕಹ್ಲಾ ಹೇಳಿದ್ದಾರೆ. ಆರ್ಥಿಕ ಕೊರತೆ ಕಾರಣ ನನ್ನ ಇಬ್ಬರು ಪುತ್ರಿಯರೂ ಶಾಲಾ ಶಿಕ್ಷಣವನ್ನು ತೊರೆದಿದ್ದಾರೆ ಎಂದು ಕಹ್ಲಾ ಸ್ಪಷ್ಟಪಡಿಸಿದ್ದಾರೆ.
Don't have enough money to buy oxen, ploughing fields to sow of maize crop. Daughter left studies after 8th standard: Sardar Barela, farmer pic.twitter.com/ofsRIa0DsA
— ANI (@ANI_news) July 9, 2017
ಈ ವಿಚಾರ ರಾಷ್ಟ್ರೀಯ ಸುದ್ದಿಯಾಗುತ್ತಿದ್ದಂತೆ ಬಸಂತಪುರಿಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಆಶಿಶ್ ಶರ್ಮಾ ಮಾತನಾಡಿದ್ದು, "ಈ ವಿಷಯ ಸಂಬಂಧ ಗಮನ ಹರಿಸಿಲಾಗುವುದು. ಸರ್ಕಾರಿ ಯೋಜನೆಗಳ ಅಡಿ ಅವರಿಗೆ ಸೂಕ್ತ ಸಹಾಯ ನೀಡಲಾಗುವುದು," ಎಂದು ಹೇಳಿದ್ದಾರೆ.