ಮಧ್ಯಪ್ರದೇಶ ಚುನಾವಣಾ ಫಲಿತಾಂಶ LIVE
ಭೋಪಾಲ್, ಡಿ. 8 : ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಭಾರತೀಯ ಜನತಾ ಪಕ್ಷ ಮಧ್ಯಪ್ರದೇಶದಲ್ಲಿ 118 ಸ್ಥಾನಗಳನ್ನು ಗೆದ್ದುಕೊಂಡು ಲೋಕಸಭೆ ಚುನಾವಣೆಗೆ ಮುನ್ನ ತನ್ನ ಪ್ರತಾಪ ಏನೆಂದು ತೋರಿಸಿದೆ. ಇನ್ನೂ 38 ಕ್ಷೇತ್ರಗಳಲ್ಲಿ ಮುಂದಿರುವುದರಿಂದ ಸ್ಪಷ್ಟ ಬಹುಮತ ಪಡೆಯುವುದು ಬಿಜೆಪಿ ನೀರು ಕುಡಿದಷ್ಟೇ ಸರಳವಾಗಿದೆ.
ಬಿಜೆಪಿಯ ಮಾಜಿ ಶಾಸಕ ರಾಮಲಾಲ್ ರೋತಾಲ್ ಅವರು ಅನುಪ್ಪುರ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ವಿದಿಶಾ ಕ್ಷೇತ್ರದಲ್ಲಿ ಮತ್ತು ಮುಖ್ಯಮಂತ್ರಿ ಗದ್ದುಗೆ ಏರಲು ಸಿದ್ಧರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಇಲ್ಲಿಯವರೆಗೆ 35 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದ ಕಾಂಗ್ರೆಸ್ ಇಲ್ಲಿ ಭಾರೀ ಮುಖಭಂಗ ಅನುಭವಿಸಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆ ಕಂಡಿದ್ದರೂ ಸೋಲನ್ನೊಪ್ಪಿಕೊಳ್ಳಲು ಇನ್ನೂ ಸಿದ್ಧವಿಲ್ಲ. ಕಟ್ಟಕಡೆಯ ಮತ ಎಣಿಕೆ ಮುಗಿಯುವತನಕ ಏನನ್ನೂ ಹೇಳುಲಾಗುವುದಿಲ್ಲ ಎಂದು ಆಶಾಭಾವನೆ ವ್ಯಕ್ತಪಡಿಸಿದೆ. ಇದೇ ಸಮಯದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮನೆಯ ಮುಂದೆ ಪಟಾಕಿಗಳ ಸದ್ದು ಕಾಂಗ್ರೆಸ್ ಕಿವಿಯನ್ನು ಮುಚ್ಚಿಸಿದೆ. ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಭಾರತೀಯ ಜನತಾ ಪಕ್ಷ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವತ್ತ ಧಾಪುಗಾಲಿಟ್ಟಿದೆ.
ಒಟ್ಟು 230 ಕ್ಷೇತ್ರಗಳಿಗೆ ನವೆಂಬರ್ 25ರಂದು ಚುನಾವಣೆ ನಡೆದಿತ್ತು. ಈ ಬಾರಿ ಕೂಡ ಬಿಜೆಪಿ ಅಧಿಕಾರಕ್ಕೆ ಬಂದರೆ ಶಿವರಾಜ್ ಸಿಂಗ್ ಚೌಹಾಣ್ ಹ್ಯಾಟ್ರಿಕ್ ಸಾಧಿಸಿದಂತಾಗುತ್ತದೆ. ಬಹುಮತ ಗಳಿಸಲು ಬಿಜೆಪಿ 116 ಸ್ಥಾನಗಳು ಬೇಕು. ಆದರೆ, ಸಮೀಕ್ಷೆಯ ಪ್ರಕಾರ, ಚೌಹಾಣ್ ಸರಕಾರ 141 ಸ್ಥಾನಗಳನ್ನು ಗಳಿಸುವುದು ಗ್ಯಾರಂಟಿ. ಈಗಿನ ಟ್ರೆಂಡ್ ನೋಡಿದರೆ ಅದು ಅಸಾಧ್ಯ ಅನ್ನಿಸದಿರದು. [ದೆಹಲಿ ಫಲಿತಾಂಶ]
ಬೆಳಿಗ್ಗೆ 11.50 : ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು ನಾಲ್ಕು ಕ್ಷೇತ್ರಗಳನ್ನು ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡಿದೆ.
ಬೆಳಿಗ್ಗೆ 11.15 : ಬಿಜೆಪಿ 140 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಒಂದು ಕ್ಷೇತ್ರದಲ್ಲಿ ಗೆಲುವುದ ಸಾಧಿಸಿದ್ದರೆ, ಕಾಂಗ್ರೆಸ್ 76 ಕ್ಷೇತ್ರಗಳಲ್ಲಿ ಮುಂದಿದೆ. 2008ರ ಚುನಾವಣೆಯಲ್ಲಿ ಬಿಜೆಪಿ 143 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 71 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಬೆಳಿಗ್ಗೆ 10.00 : 218 ಸ್ಥಾನಗಳಲ್ಲಿ ಬಿಜೆಪಿ 141 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸರಕಾರ ಸ್ಥಾಪಿಸುವತ್ತೆ ಧಾಪುಗಾಲಿಟ್ಟಿದೆ. ಕಾಂಗ್ರೆಸ್ 67 ಸೀಟುಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಬೆಳಿಗ್ಗೆ 9.30 : ಭಾರತೀಯ ಜನತಾ ಪಕ್ಷ 131 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ 55 ಸ್ಥಾನಗಳಲ್ಲಿ ಮುಂದೆ.
ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಂದ ಯಾವುದೇ ಚಮತ್ಕಾರ ನಡೆದಿಲ್ಲ. ಆದರೆ, ಅವರ ನಾಯಕತ್ವವನ್ನು ಬಿಜೆಪಿ ನಾಯಕಿ ಉಮಾ ಭಾರತಿ ಮೆಚ್ಚಿ ಅಚ್ಚರಿ ಮೂಡಿಸಿದ್ದರು. ವೆಬ್ ಸೈಟ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ "ಜ್ಯೋತಿರಾಧಿತ್ಯನನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಆತ ಒಬ್ಬ ಅತ್ಯುತ್ತಮ ನಾಯಕ. ಆದರೆ, ಅವರು ನಮಗೆ ತುರುಸಿನ ಸ್ಪರ್ಧೆ ನೀಡಬಹುದಾಗಿತ್ತು" ಎಂದು ಉಮಾ ಭಾರತಿ ನುಡಿದಿದ್ದಾರೆ. [ನಾಲ್ಕು ರಾಜ್ಯಗಳ ಫಲಿತಾಂಶ]
9.30ರವರೆಗೆ ಕಾಂಗ್ರೆಸ್ ಕೇವಲ 55 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಾರ್ಟಿ 3 ಸ್ಥಾನಗಳಲ್ಲಿ ಮುಂದಿದೆ. ಇಲ್ಲಿಯವರೆಗೆ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ. ಈ ನಡುವೆ, ಬಿಜೆಪಿ ನಾಯಕ ಅನಿಲ್ ಮಾಧವ್ ಅವರು, ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತ ಗಳಿಸುವುದು ಗ್ಯಾರಂಟಿ. ನಮಗೆ ಸರಕಾರ ಸ್ಥಾಪಿಸಲು ಬೇಕಾದ ಸಂಖ್ಯೆಗಳು ಖಂಡಿತ ದೊರೆಯುತ್ತದೆ ಎಂದು ಘೋಷಿಸಿದ್ದಾರೆ. [ಎಕ್ಸಿಟ್ ಪೋಲ್ ಸರ್ವೇ]