ಮಚಿಲ್ ದುರಂತ : ಹುತಾತ್ಮರಾದ ಐವರು ಸೈನಿಕರು
ಜಮ್ಮು, ಜನವರಿ 30: ಹಿಮದಲ್ಲಿ ಸಿಲುಕಿ, ಆ ನಂತರ ರಕ್ಷಿಸಿದ್ದ ಐವರು ಸೈನಿಕರು ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಮಚಿಲ್ ವಲಯದಲ್ಲಿ ಶನಿವಾರ ಹಿಮದಲ್ಲಿ ಸಿಲುಕಿದ ಸೈನಿಕರ ರಕ್ಷಣೆ ಮಾಡಲಾಗಿತ್ತು. ಶ್ರೀನಗರದ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.
ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ ಈ ಐವರು ಸೈನಿಕರು ಗಡಿಯಲ್ಲಿ ಉಗ್ರರು ಒಳನುಸುಳದಂತೆ ನೋಡಿಕೊಳ್ಳುವ ಕರ್ತವ್ಯದಲ್ಲಿದ್ದರು. ಅ ವೇಳೆ ಹಿಮಕುಸಿತವಾಗಿ ಸಿಲುಕಿಕೊಂಡಿದ್ದರು. ಆ ನಂತರ ಅವರ ರಕ್ಷಣೆ ಮಾಡಲಾಗಿತ್ತು. ಕಳೆದ ವಾರ ಜಮ್ಮು-ಕಾಶ್ಮೀರದಲ್ಲಿ ಭರೀ ಹಿಮಪಾತವಾಗಿತ್ತು. ಹಿರಿಯ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ನೀಡಿದ್ದರು.[ಶ್ರೀನಗರದ ಕುಪ್ವಾರದಲ್ಲಿ ಹಿಮದಲ್ಲಿ ಸಿಲುಕಿಕೊಂಡ ಐವರು ಸೈನಿಕರು]
ವಿದ್ಯುತ್ ಹಾಗೂ ಫೋನ್ ಸಂಪರ್ಕ ಹಲವೆಡೆ ಕಡಿತವಾಗಿತ್ತು. ಕೆಲವು ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಕಳೆದ ಬುಧವಾರ ಗುರುಜ್ ವಲಯ ಮತ್ತು ಸೋನ್ ಮಾರ್ಗ್ ನಲ್ಲಿ ಸಂಭವಿಸಿದ ಅವಘಡದಲ್ಲಿ ಹದಿಮೈದು ಸೈನಿಕರು ಹಾಗೂ ಐವರು ನಾಗರಿಕರು ಮೃತಪಟ್ಟಿದ್ದರು.
ಹವಾಮಾನ ವೈಪರೀತ್ಯದ ಮಧ್ಯೆಯೂ ಕಳೆದ ಶನಿವಾರ ರಕ್ಷಣಾ ತಂಡಗಳು ಆರು ಸೈನಿಕರನ್ನು ರಕ್ಷಿಸಿ, ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯುವಲ್ಲಿ ಸಫಲವಾಗಿದ್ದವು. ಮೂವರು ಸೈನಿಕರ ಶವ ಪತ್ತೆಯಾಗಿದ್ದವು. ಮತ್ತೊಂದು ಅವಘಡದಲ್ಲಿ ಅದೇ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು.[ಹಿಮ ಕುಸಿತ: ಇನ್ನೂ ನಾಲ್ವರು ಸೈನಿಕರ ಶವ ಪತ್ತೆ]
ಸೋನ್ ಮಾರ್ಗ್ ನಲ್ಲಿ ಸೇನಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಬಾರಾಮುಲ್ಲಾದ ಉರಿ ವಲಯದಲ್ಲಿ ಅರವತ್ತು ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಆ ವ್ಯಕ್ತಿಯನ್ನು ಹಿಮಪಾತದಿಂದ ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕಲಿಲ್ಲ.