ಪ್ರೇಮಿಗಳೇ ಎಚ್ಚರ... ಸಿಕ್ಕಿಬಿದ್ದರೆ ಮದುವೆ ಗ್ಯಾರಂಟಿ
ಮೀರತ್, ಫೆ. 4: ಪ್ರೇಮಿಗಳೇ ಉಚಿತವಾಗಿ ಮದುವೆಯಾಗಲು ಇಚ್ಛಿಸುತ್ತೀರಾ? ಹಾಗಿದ್ದರೆ ಪ್ರೇಮಿಗಳ ದಿನಾಚರಣೆಯಂದು ಹಿಂದೂ ಮಹಾಸಭಾ ಕಾರ್ಯಕರ್ತರ ಕೈಗೆ ಸಿಕ್ಕಿಬೀಳಬೇಕು. ಅವರೇ ನಿಮ್ಮನ್ನು ಆರ್ಯ ಸಮಾಜದ ರೀತ್ಯಾ ಮದುವೆ ಮಾಡ್ತಾರೆ.
ಹೌದು, ಹೀಗೆಂದು ಉತ್ತರ ಪ್ರದೇಶದ ಹಿಂದೂ ಮಹಾಸಭಾ ಈಗಾಗಲೇ ಘೋಷಣೆ ಹೊರಡಿಸಿದೆ. ಪ್ರೇಮಿಗಳ ದಿನದಂದು ಸಿಕ್ಕಿಬೀಳುವ ಜೋಡಿ ಹಿಂದೂಗಳೇ ಆಗಿದ್ದರೆ ಆರ್ಯ ಸಮಾಜದಂತೆ ಕಲ್ಯಾಣ ಗ್ಯಾರಂಟಿ. ಅಂತರ್ ಧರ್ಮೀಯರಾಗಿದ್ದರೆ ಮೊದಲು ಶುದ್ಧೀಕರಣ ಕೈಗೊಂಡು ನಂತರ ಮದುವೆ ಮಾಡಲಾಗುತ್ತದೆ ಎಂದು ಹಿಂದೂ ಮಹಾಸಭಾ ರಾಷ್ಟ್ರಾಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ತಿಳಿಸಿದ್ದಾರೆ.
ಭಾರತದಲ್ಲಿ ವರ್ಷದ 365 ದಿನವೂ ಪ್ರೇಮಿಗಳ ಪರವಾಗಿಯೇ ಇರುತ್ತದೆ. ಅಂದ ಮೇಲೆ ಫೆ. 14ರಂದು ಮಾತ್ರ ಏಕೆ ಪ್ರೇಮಿಗಳ ದಿನ ಆಚರಿಸಬೇಕು ಎಂದು ಕೌಶಿಕ್ ಪ್ರಶ್ನಿಸಿದ್ದಾರೆ.
"ಪ್ರೇಮಿಗಳು ಎಂದ ಮೇಲೆ ಮದುವೆ ಆಗಲೇಬೇಕು. ಒಂದು ವೇಳೆ ತಮಗೆ ಯೋಚನೆ ಮಾಡಲು ಸಮಯ ಬೇಕು ಎಂದರೆ ಅವರ ಪಾಲಕರಿಗೆ ವಿಷಯ ತಿಳಿಸುತ್ತೇವೆ" ಎಂದು ಕೌಶಿಕ್ ಹೇಳಿದ್ದಾರೆ.
ಭಾರತದಲ್ಲಿ ವಾಸಿಸುವವರು ಎಲ್ಲರೂ ಹಿಂದೂಗಳು. ಆದ್ದರಿಂದ ಅವರನ್ನು ಹಿಂದೂ ಧರ್ಮದ ರೀತ್ಯಾ ಮದುವೆ ಮಾಡಲಾಗುವುದು ಎಂದು ಹಿಂದೂ ಮಹಾಸಭಾ ಆಗ್ರಾ ಪ್ರತಿನಿಧಿ ಮಹೇಶ್ ಚಂದನಾ ತಿಳಿಸಿದ್ದಾರೆ.