ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
ನವದೆಹಲಿ, ಜನವರಿ.20: ನವದೆಹಲಿಯಲ್ಲಿ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ 56 ದಿನಗಳಿಂದ ಅನ್ನದಾತರು ಹೋರಾಟ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಕೇಂದ್ರ ಸರ್ಕಾರಕ್ಕೆ ಕಾಣುತ್ತಿಲ್ಲ. ಅನ್ನದಾತರ ಧಿಕ್ಕಾರದ ಘೋಷಣೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೇಳುತ್ತಿಲ್ಲ. ದೇಶಾದ್ಯಂತ ಬಿಜೆಪಿ ನಾಯಕರು ಕೃಷಿ ಕಾಯ್ದೆ ಮತ್ತು ರೈತರ ಪ್ರತಿಭಟನೆ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಮಾತ್ರ ಮಹಾತ್ಮ ಗಾಂಧೀಜಿಯವರ ತತ್ವವನ್ನು ಸಾರಿ ಹೇಳುವ ಮೂರು ಕೋತಿಗಳಂತೆ ವರ್ತಿಸುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು, ರಾಷ್ಟ್ರ ರಾಜಧಾನಿಯಲ್ಲಿ ಮೈಕೊರೆಯುವ ಚಳಿ ನಡುವೆ ನ್ಯಾಯಕ್ಕಾಗಿ ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. ನವೆಂಬರ್.26ರಿಂದ ಇಂದಿನವರೆಗೂ ಕೇಂದ್ರ ಸರ್ಕಾರ ತಮಗೆ ನ್ಯಾಯ ನೀಡುತ್ತದೆ ಎಂಬ ನಿರೀಕ್ಷೆಯಲ್ಲೇ ಎದುರು ನೋಡುತ್ತಿದ್ದಾರೆ.
ವಿವಾದಿತ ಕೃಷಿ ಕಾಯ್ದೆ ಮತ್ತು ರೈತರ ಹೋರಾಟದ ಹಾದಿಯ ಚಿತ್ರಣ
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಹೋರಾಟದಿಂದ ಹಿಂದೆ ಸರಿಯದಿರಲು ಅನ್ನದಾತರು ಪಣ ತೊಟ್ಟಿದ್ದಾರೆ. ಕಳೆದ 56 ದಿನಗಳ ಹೋರಾಟದ ಮಧ್ಯೆ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮತ್ತು ರೈತರ ಸಂಘಟನೆಗಳು ಮತ್ತು ಮುಖಂಡರ ನಡುವೆ 9 ಸುತ್ತಿನ ಮಾತುಕತೆ ನಡೆದಿದೆ. ಹೀಗೆ ನಡೆದ 9 ಸುತ್ತಿನ ಮಾತುಕತೆಯಲ್ಲಿ ನಡೆದಿದ್ದು ಏನು ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.
1ನೇ ಸುತ್ತು: ಅಕ್ಟೋಬರ್.14,2020
ಮೊದಲ ಸುತ್ತಿನ ಸಭೆಗಾಗಿ ರೈತ ಸಂಘಟನೆಗಳ ಮುಖಂಡರು ನವದೆಹಲಿಗೆ ತೆರಳಿದ್ದರು. ಆದರೆ ಅಂದು ಕೃಷಿ ಭವನದಲ್ಲಿ ನಡೆದ ಸಭೆಗೆ ಯಾವುದೇ ಕೇಂದ್ರ ಸಚಿವರು ಆಗಮಿಸಿರಲಿಲ್ಲ. ಕೇವಲ ಕೃಷಿ ಕಾರ್ಯದರ್ಶಿ ಜೊತೆಗೆ ಚರ್ಚೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ರೈತರು ಸಭೆಯಿಂದ ಹೊರ ನಡೆದರು. ಈ ಪೈಕಿ ಕೆಲವು ರೈತ ಸಂಘಟನೆ ಮುಖಂಡರು ಕೇಂದ್ರದ ಮಾಜಿ ಸಚಿವರನ್ನು ಭೇಟಿಯಾಗಿ ಕೃಷಿ ಸಂಬಂಧಿತ ಕಾಯ್ದೆಗಳಲ್ಲಿನ ಲೋಪದೋಷವನ್ನು ಸರಿಪಡಿಸುವುದು. ಬೆಳೆ ಸುಡುವುದಕ್ಕೆ ದಂಡ ವಿಧಿಸದಂತೆ ಮನವಿ ಪತ್ರ ಸಲ್ಲಿಸಿ ವಾಪಸ್ಸಾಗಿದ್ದರು.
2ನೇ ಸುತ್ತು: ನವೆಂಬರ್.13, 2020
ರೈತ ಒಕ್ಕೂಟಗಳ ಜೊತೆಗೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಶ್ ಗೋಯೆಲ್ ಸಾಲು ಸಾಲು ಸಭೆಯಲ್ಲಿ ಏಳು ಗಂಟೆಗಳವರೆಗೂ ಚರ್ಚೆ ನಡೆಸಿದರು. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ಎಂದಿನಂತೆ ಮಂಡಿ ವ್ಯವಸ್ಥೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದರು. ಕೃಷಿ ತಜ್ಞರು ಮತ್ತು ರೈತ ಸಂಘಟನೆಗಳ ಮುಖಂಡರು ಸೇರಿದಂತೆ ಐವರು ಸದಸ್ಯರ ಸಮಿತಿ ರಚಿಸುವಂತೆ ಸಚಿವರು ಸಲಹೆ ನೀಡಿದ್ದರು. ಆದರೆ ರೈತ ಒಕ್ಕೂಟದ ಸದಸ್ಯರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಮುಂದಿನ ದಿನಾಂಕಕ್ಕೆ ಸಂಧಾನ ಸಭೆಯನ್ನು ಮುಂದೂಡಲಾಗಿತ್ತು.
ಕೃಷಿ ಕಾಯ್ದೆ: ಕೇಂದ್ರ ಸರ್ಕಾರದ ಕಿವಿ ಹಿಂಡುವ ಪ್ರಶ್ನೆ ಕೇಳಿದ ಕೆಪಿಸಿಸಿ!
3ನೇ ಸುತ್ತು: ಡಿಸೆಂಬರ್.01, 2020
ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ವಿಸ್ತೃತ ವಿವರಣೆಯೊಂದಿಗೆ ರೈತರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿತು. ಆದರೆ ರೈತ ಸಂಘಟನೆಗಳು ತಮ್ಮ ನಿಲುವಿಗೆ ಬದ್ಧವಾಗಿದ್ದು, ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದವು. ಸಂಧಾನ ಮಾತುಕತೆಗಾಗಿ ಸಣ್ಣ ಸಮಿತಿ ರಚಿಸಿಕೊಳ್ಳುವಂತೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಸಲಹೆ ನೀಡಿದರೂ, ರೈತರು ಅದನ್ನು ತಿರಸ್ಕರಿಸಿದರು. "ನಮಗೆ ಕೇಂದ್ರ ಸಚಿವರೊಂದಿಗೆ ಚಹಾ ಕುಡಿಯುತ್ತಾ ಮಾತನಾಡುವ ಅಗತ್ಯವಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.
4ನೇ ಸುತ್ತು: ಡಿಸೆಂಬರ್.03, 2020
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದರು. ಕೃಷಿ ಕಾಯ್ದೆ ವಿರುದ್ಧದ ಹೋರಾಟವನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಬೇಕು. ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನಗಳು ನಡೆಯುವ ಅಪಾಯವಿರುತ್ತದೆ. ದೇಶದ ಭದ್ರತೆ ದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವೆ ಏಳು ಗಂಟೆಗಳವರೆಗೂ ನಿರಂತರ ಸಭೆ ನಡೆಯಿತು. ಈ ವೇಳೆ ಕನಿಷ್ಠ ಬೆಂಬಲ ಬೆಲೆ ನೀತಿಯು ಎಂದಿನಂತೆ ಮುಂದುವರಿಯುತ್ತದೆ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಭರವಸೆ ನೀಡಿದ್ದರು. ವಿವಾದಿತ ಮೂರು ಕಾಯ್ದೆಗಳನ್ನು ರದ್ದುಗೊಳಿಸಲು ವಿಶೇಷ ಅಧಿವೇಶನ ನಡೆಸುವಂತೆ ರೈತ ಮುಖಂಡರು ಆಗ್ರಹಿಸಿದರು. ಇದರಿಂದ ಮತ್ತೆ ಸಂಧಾನ ಸಭೆ ವಿಫಲವಾಯಿತು.
5ನೇ ಸುತ್ತು: ಡಿಸೆಂಬರ್.05, 2020
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಆಗುತ್ತದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳುವಂತೆ ಆಗ್ರಹಿಸಿ ರೈತ ಮುಖಂಡರು ಮೌನ ಪ್ರತಿಭಟನೆ ಆರಂಭಿಸಿದರು. ಕೇಂದ್ರ ಸರ್ಕಾರದ ನಾಯಕರು ರಾಜಕೀಯದ ಆಟವನ್ನು ಬಿಟ್ಟು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸುವಂತೆ ಎಚ್ಚರಿಕೆ ನೀಡಿದರು. ಸಂಧಾನ ಮಾತುಕತೆ ಮುರಿದು ಬೀಳುತ್ತಿದ್ದಂತೆ ಡಿಸೆಂಬರ್.08ರಂದು ಭಾರತ್ ಬಂದ್ ನಡೆಸುವಂತೆ ರೈತ ಸಂಘಟನೆಗಳು ಕರೆ ಕೊಟ್ಟವು.
6ನೇ ಸುತ್ತಿನ ಸಂಧಾನ ಮಾತುಕತೆಗೆ ನಿಗದಿಯಾದ ದಿನಾಂಕಕ್ಕೂ ಒಂದು ದಿನ ಮೊದಲು ರೈತ ಸಂಘಟನೆ ಮುಖಂಡರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ಮಾಡಿದರು. ದೆಹಲಿಯ ಪುಸಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿಯೇ ರೈತ ಸಂಘಟನೆ ಮುಖಂಡರು ಕೃಷಿ ಕಾಯ್ದೆಯಲ್ಲಿನ ಲೋಪದೋಷಗಳನ್ನು ವಿವರವಾಗಿ ಪ್ರಸ್ತುತಪಡಿಸಿದರು. ಆದರೆ ಕೇಂದ್ರ ಸರ್ಕಾರ ಮತ್ತೆ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ. ಅದರ ಬದಲಿಗೆ ಕೆಲವು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು. ಅಲ್ಲಿಂದ ಮುಂದೆ ಈ ನಿಟ್ಟಿನಲ್ಲಿ ಯಾವುದೇ ರೀತಿ ಬೆಳವಣಿಗೆಗಳು ನಡೆಯಲಿಲ್ಲ.
6ನೇ ಸುತ್ತು: ಡಿಸೆಂಬರ್.30, 2020
ನಾಲ್ಕು ಅಂಶಗಳ ಪ್ರಸ್ತಾಪವನ್ನು ಇಟ್ಟುಕೊಂಡು ರೈತ ಸಂಘಟನೆ ಮುಖಂಡರು ಸಂಧಾನಕ್ಕೆ ಮುಂದೆ ಬಂದರು. ಈ ಪೈಕಿ ಕೇಂದ್ರ ಸರ್ಕಾರವು ಕೇವಲ ಎರಡು ಅಂಶಗಳಿಗೆ ಸಮ್ಮತಿ ಸೂಚಿಸಿತು. ಬೆಳೆ ಸುಡುವುದನ್ನು ನಿರಪರಾಧಿಕರಣ ಮತ್ತು ವಿದ್ಯುತ್ ಬಳಕೆಗೆ ವಿನಾಯಿತಿ ನೀಡುವುದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ಸೂಚಿಸಿದ್ದರು. ಆದರೆ, ಕೃಷಿ ಕಾಯ್ದೆ ರದ್ದು ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರಕ್ಕೆ ಸ್ಪಷ್ಟ ನಿರ್ಧಾರ ಹೊರಬೀಳಲಿಲ್ಲ. ಇದರಿಂದ ಮತ್ತೆ ಸಂಧಾನ ಸಭೆಯು ವಿಫಲಗೊಂಡಿತು.
7ನೇ ಸುತ್ತು: ಜನವರಿ.04, 2021
ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆ ಮುಖಂಡರು ತಮ್ಮ ನಿಲುವಿಗೆ ಬದ್ಧರಾದ ಹಿನ್ನೆಲೆ ಸಂಧಾನ ಮಾತುಕತೆಗಳು ಫಲ ನೀಡಲಿಲ್ಲ. ಇದರಿಂದ ಕೆರಳಿದ ರೈತ ಸಂಘಟನೆಗಳು "ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ನಂತರವೇ ಮನೆಗೆ ವಾಪಸ್ ಹೋಗುತ್ತೇವೆ" ಹೊಸ ಘೋಷವಾಕ್ಯವನ್ನು ಹೊರಡಿಸಿದರು. ನಂತರ ಕೇಂದ್ರ ಸಚಿವರು ಮತ್ತು ರೈತರ ನಡುವೆ ಯಾವುದೇ ಸಭೆಗಳು ನಡೆಯಲಿಲ್ಲ. ಈ ಬೆಳವಣಿಗೆ ಬಳಿಕ ಮತ್ತೆ ಸಂಧಾನ ಸಭೆಗೆ ರೈತ ಸಂಘಟನೆ ಮುಖಂಡರು ಒಪ್ಪಿಗೆ ಸೂಚಿಸಿದರು.
8ನೇ ಸುತ್ತು: ಜನವರಿ.08, 2021
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತ ಸಂಘಟನೆ ಮುಖಂಡರು ಒತ್ತಡ ಹೇರಿದರು. ಕೇಂದ್ರಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಈ ಬಗ್ಗೆ ಸುಪ್ರೀಂಕೋರ್ಟ್ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿದರು.
ಕೃಷಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ:
ಕಳೆದ ಜನವರಿ.11ರಂದು ಕೃಷಿ ಕಾಯ್ದೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿತು. ರೈತರ ವಿರೋಧಕ್ಕೆ ಕಾರಣವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ತಡೆಯಾಜ್ಞೆ ಹೊರಡಿಸಿತು. ಉಭಯ ಕಡೆಗಳಲ್ಲಿ ಚರ್ಚಿಸಿ ಅಂತಿಮ ವರದಿಯನ್ನು ಸಲ್ಲಿಸುವುದಕ್ಕಾಗಿ ನಾಲ್ಕು ಮಂದಿ ಸದಸ್ಯರ ಸಮಿತಿ ರಚಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಆದರೆ ರೈತ ಸಂಘಟನೆ ಮುಖಂಡರು ಕೋರ್ಟ್ ವಿಚಾರಣೆಯನ್ನು ಬಹಿಷ್ಕರಿಸಿದರು.
9ನೇ ಸುತ್ತು: ಜನವರಿ.15, 2021
ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಬಳಿಕ ಸಮಿತಿ ರಚಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಕೋರ್ಟ್ ನೀಡಿದ ಸಲಹೆಯನ್ನು ರೈತ ಸಂಘಟನೆ ಮುಖಂಡರು ಬಹಿಷ್ಕರಿಸಿದರು. ಕೃಷಿ ಕಾಯ್ದೆಗಳನ್ನು ಸಂಸತ್ ನಲ್ಲಿ ಅಂಗೀಕರಿಸಲಾಗಿದ್ದು, ಅದೇ ಸಂಸತ್ ಅಧಿವೇಶನದಲ್ಲೇ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಇದರ ಮಧ್ಯೆ ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಜನರ ಮೇಲೆ ಎನ್ಐಎ ಮತ್ತು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುವುದಕ್ಕೆ ಕೇಂದ್ರ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.