ಬಿಎಸ್ಪಿ-ಎಸ್ಪಿ ಮೈತ್ರಿ : ಪ್ರಧಾನಿ ಮೋದಿ ವಿರುದ್ಧ ಪ್ರಬಲ ಸ್ಪರ್ಧಿ ಬಹುತೇಕ ಫೈನಲ್?
ಕೆಲವು ವರ್ಷಗಳ ಹಿಂದೆ ಹಾವು ಮುಂಗುಸಿಯಂತಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ, ಬಿಜೆಪಿ ಪ್ರಾಬಲ್ಯ ಮೆಟ್ಟಿನಿಲ್ಲಲು ಒಂದಾಗಿರುವುದು ಗೊತ್ತಿರುವ ವಿಚಾರ. ಎಸ್ಪಿಯ ಜವಾಬ್ದಾರಿ ಮುಲಾಯಂ ಹೆಗಲಿನಿಂದ, ಅಖಿಲೇಶ್ ಹೆಗಲಿಗೆ ಜಾರಿದ್ದು, ಇದಕ್ಕೆ ಕಾರಣ ಇದ್ದರೂ ಇರಬಹುದು.
ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಮೈತ್ರಿಯ ಪವರ್ ಅನ್ನು ಬಿಜೆಪಿಗೆ ತೋರಿಸಿರುವ ಈ ಎರಡು ಪಕ್ಷಗಳು ಈಗ ಮುಂಬರುವ ಲೋಕಸಭಾ ಚುನಾವಣೆಗೂ ಜಂಟಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.
ಕಳೆದ ಬಾರಿ ಹಿಂದೂಗಳ ಪುಣ್ಯ ಕ್ಷೇತ್ರ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಅಭೂತಪೂರ್ವ ಜಯಸಾಧಿಸಿದ್ದ ನರೇಂದ್ರ ಮೋದಿ, ಮತ್ತದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಾ ಅಥವಾ ದೇಶದ ಪೂರ್ವ ಕರಾವಳಿಯತ್ತ ಅವರ ಚಿತ್ತ ನೆಟ್ಟಿದೆಯೋ ಎನ್ನುವ ವಿಚಾರ ಇನ್ನೂ ಖಾತ್ರಿಯಾಗಬೇಕಷ್ಟೇ..
ಇಂಡಿಯಾ ಟುಡೆ ಸಮೀಕ್ಷೆ: ಕೇರಳದಲ್ಲಿ ಅರಳುತ್ತಿದೆ ಕಮಲ, ಆದರೆ ಪ್ರಧಾನಿ ರೇಸಲ್ಲಿ ಈಗಲೂ ಮುಂದೆ ರಾಹುಲ
ಈ ನಡುವೆ, ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ದ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಿದ್ದ ಮುಖಂಡರೊಬ್ಬರನ್ನು, ಬಿಎಸ್ಪಿ ಮತ್ತು ಎಸ್ಪಿ ತಮ್ಮ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಯುವ ಮುಖಂಡ
ಗುಜರಾತ್ ಚುನಾವಣೆಯ ವೇಳೆ, ಮೋದಿ ಸರಕಾರದ ವಿರುದ್ದ ಭಾರೀ ಹೋರಾಟ ನಡೆಸಿ, ಚುನಾವಣೆಗೆ ಸ್ವಲ್ಪದಿನದ ಮುನ್ನ, ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಯುವ ಮುಖಂಡನೋರ್ವರನ್ನು ಮೋದಿ ವಿರುದ್ದ ಕಣಕ್ಕಿಳಿಸಲು, ಮಾಯಾವತಿ ಮತ್ತು ಅಖಿಲೇಶ್ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಈ ಸಂಬಂಧ ಮಾತುಕತೆಯೂ ನಡೆದಿದೆ ಎನ್ನುವ ಸುದ್ದಿಯಿದೆ.
'ಮೋದಿ ಏನೂ ವಾಜಪೇಯಿ ಅಲ್ಲ, ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ'
ಮೋದಿ ವಿರುದ್ದ ಹಾರ್ದಿಕ್ ಪಟೇಲ್
ಪಟೇಲ್ ಸಮುದಾಯದ ಮೀಸಲು ಹೋರಾಟದ ನೇತೃತ್ವವನ್ನು ವಹಿಸಿಕೊಂಡು, ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ, ಅದೇ ಸಮುದಾಯದ ಹಾರ್ದಿಕ್ ಪಟೇಲ್ ಅವರನ್ನು, ಮೋದಿ ವಿರುದ್ದ ಕಣಕ್ಕಿಳಿಸಲು ಮಾತುಕತೆ ನಡೆದಿದೆ. ವಾರಣಾಸಿಯಾಗಲಿ ಅಥವಾ ಉತ್ತರಪ್ರದೇಶದ ಯಾವುದೇ ಕ್ಷೇತ್ರದಿಂದ ಪ್ರಧಾನಿ ಸ್ಪರ್ಧಿಸಿದರೂ, ಮೋದಿ ವಿರುದ್ದ ಹಾರ್ದಿಕ್ ಪಟೇಲ್ ಕಣಕ್ಕಿಳಿಸುವ ನಿರ್ಧಾರವನ್ನು ಬಹುತೇಕ ಎಸ್ಪಿ-ಬಿಎಸ್ಪಿ ತೆಗೆದುಕೊಂಡಿದೆ.
ಹಾರ್ದಿಕ್ ಪಟೇಲ್ ಅವರ ಅಂತಿಮ ನಡೆ
2014ರಲ್ಲಿ ಇದ್ದಷ್ಟು ಮೋದಿ ಹವಾ ಈ ಬಾರಿ ಇಲ್ಲದೇ ಇರುವುದರಿಂದ, ವಾರಣಾಸಿ ಕ್ಷೇತ್ರವಾಗಲಿ ಅಥವಾ ಉತ್ತರಪ್ರದೇಶದ ಯಾವುದೇ ಕ್ಷೇತ್ರವನ್ನು ಮೋದಿ ಫೈನಲ್ ಮಾಡಿದರೆ, ಹಾರ್ದಿಕ್ ಪಟೇಲ್, ಅವರನ್ನು ತಮ್ಮ ಸ್ಪರ್ಧಿಯನ್ನಾಗಿ ಮಾಡುವ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿಯಿದೆ. ಈ ಸಂಬಂಧ, ಹಾರ್ದಿಕ್ ಪಟೇಲ್ ಅವರ ಅಂತಿಮ ನಡೆಯನ್ನು ಬಿಎಸ್ಪಿ-ಎಸ್ಪಿ ಎದುರು ನೋಡುತ್ತಿದೆ.
ಮೋದಿಯನ್ನು ಸೋಲಿಸುವ ಇರಾದೆ
ಉತ್ತಮ ವಾಗ್ಮಿಯಾಗಿರುವ ಹಾರ್ದಿಕ್ ಪಟೇಲ್ ಅವರನ್ನು ಮುಂಚಿತವಾಗಿಯೇ, ಮೋದಿ ವಿರುದ್ದ ತಮ್ಮ ಅಭ್ಯರ್ಥಿಯಾಗಿ ಘೋಷಿಸಿ, ವ್ಯವಸ್ಥಿತ ಪ್ರಚಾರ ನಡೆಸುವ ಮೂಲಕ, ಮೋದಿಯನ್ನು ಸೋಲಿಸುವ ಇರಾದೆಯನ್ನು ಮಾಯಾ-ಅಖಿಲೇಶ್ ಹೊಂದಿದ್ದಾರೆ ಎನ್ನುವ ಸುದ್ದಿ ದೆಹಲಿ ಮತ್ತು ಲಕ್ನೋದಲ್ಲಿ ಹರಿದಾಡುತ್ತಿದೆ.
ಒರಿಸ್ಸಾದ ಕರಾವಳಿ ನಗರ ಪುರಿ
ಆದರೆ, ಪ್ರಧಾನಿ ಮೋದಿ, ಒರಿಸ್ಸಾದ ಕರಾವಳಿ ನಗರ ಪುರಿಯಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ವಾರಣಾಸಿಯಲ್ಲಿ ಸೋಲುವ ಭೀತಿ ಇಲ್ಲದಿದ್ದರೂ, ಪೂರ್ವ ಭಾಗದಲ್ಲಿ ಪಕ್ಷಕ್ಕೆ ಇನ್ನಷ್ಟು ಅಡಿಪಾಯ ಹಾಕಲು, ಆ ಭಾಗದಿಂದ ಮೋದಿಯನ್ನು ಕಣಕ್ಕಿಳಿಸುವ, ಅಮಿತ್ ಶಾ ತಂತ್ರಗಾರಿಕೆ ಇದು ಎನ್ನಲಾಗುತ್ತಿದೆ.