ಸಂಸದೀಯ ಸಮಿತಿಗಳ ಪುನಾರಚನೆ: ರಾಜ್ಯದ ಸಂಸದರಿಗೆ ಸ್ಥಾನ
ನವದೆಹಲಿ, ಸೆಪ್ಟೆಂಬರ್ 14: ಕೇಂದ್ರಸರ್ಕಾರವು ಸಂಸದೀಯ ಸಮಿತಿಗಳನ್ನು ಪುನರಾಚನೆ ಮಾಡಿದೆ. ಸಮಿತಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ರಾಜ್ಯದ ಅನೇಕ ಸಂಸದರು ಸ್ಥಾನ ಪಡೆದುಕೊಂಡಿದ್ದಾರೆ.
ಆದರೆ, ಸಮಿತಿಯ ಸದಸ್ಯತ್ವದಲ್ಲಿನ ಬದಲಾವಣೆಯ ಕ್ರಮ ವಿವಾದಕ್ಕೂ ಎಡೆಮಾಡಿಕೊಟ್ಟಿದೆ. ಇದುವರೆಗೆ ಇದ್ದ ಸಂಪ್ರದಾಯದಂತೆ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವು ಲೋಕಸಭೆಯಲ್ಲಿನ ವಿರೋಧಪಕ್ಷದ ಸಂಸದನಿಗೆ ನೀಡಲಾಗುತ್ತಿತ್ತು. ಅದನ್ನು ಮುರಿದಿರುವ ಕೇಂದ್ರ ಸರ್ಕಾರ ತಮ್ಮದೇ ಸರ್ಕಾರದ ಸಂಸದರಿಗೆ ಆದ್ಯತೆ ನೀಡಿದೆ.
ಈ ಯುವ ಸಂಸದನ ಭಾಷಣ ಕೇಳಿರೆಂದು ಖುದ್ದು ಮೋದಿಯೇ ಹೇಳಿದ್ದಾರೆ!
ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಅಧ್ಯಕ್ಷಗಿರಿಯಲ್ಲಿದ್ದ ಸಮಿತಿಗಳಿಗೆ ಬಿಜೆಪಿ ಸಂಸದರನ್ನು ನೇಮಿಸಲಾಗಿದೆ. ಮುಖ್ಯವಾಗಿ ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿದ್ದ ಹಣಕಾಸು ಸಮಿತಿಗೆ ಜಯಂತ್ ಸಿನ್ಹಾ ಅವರನ್ನು ನೇಮಿಸಲಾಗಿದೆ. ಹಾಗೆಯೇ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷಗಿರಿ ಶಶಿ ತರೂರ್ ಅವರ ಕೈತಪ್ಪಿದ್ದು, ಅವರ ಸ್ಥಾನಕ್ಕೆ ಪಿಪಿ ಚೌಧರಿ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಮಾಹಿತಿ ತಂತ್ರಜ್ಞಾನ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಗದ್ದಿಗೌಡರ್ ಕೃಷಿ ಸಮಿತಿ ಅಧ್ಯಕ್ಷ
ಸಂಸದೀಯ ಸಮಿತಿಗಳ ಪೈಕಿ ಕೃಷಿ ಸಮಿತಿಯ ಅಧ್ಯಕ್ಷ ಸ್ಥಾನ ಬಾಗಲಕೋಟೆ ಬಿಜೆಪಿ ಸಂಸದ ಪಿಸಿ ಗದ್ದಿಗೌಡರ್ ಅವರಿಗೆ ಒಲಿದಿದೆ. ಈ ಸಮಿತಿಗಳಲ್ಲಿ ಅಧ್ಯಕ್ಷ ಸ್ಥಾನ ಪಡೆದ ರಾಜ್ಯದ ಏಕೈಕ ಸಂಸದರಾಗಿದ್ದಾರೆ. ಈ ಸಮಿತಿಯಲ್ಲಿ ಬೀದರ್ ಬಿಜೆಪಿ ಸಂಸದ ಭಗವಂತ್ ಖೂಬಾ ಅವರೂ ಸದಸ್ಯರಾಗಿದ್ದಾರೆ.
ನಿಮಗೆ ಗೊತ್ತೇ? 370 ವಿಧಿ ರದ್ದತಿಗೆ 1964ರಲ್ಲಿ ಕಾಂಗ್ರೆಸ್ ಸಂಸದರೂ ಒತ್ತಾಯಿಸಿದ್ದರು
ಸಂಸ್ಕೃತಿ ಸಮಿತಿಗೆ ಸುಮಲತಾ ಅಂಬರೀಷ್
ಮಂಡ್ಯದಿಂದ ಆಯ್ಕೆಯಾದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಸಾರಿಗೆ, ಪ್ರವಾಸ ಮತ್ತು ಸಂಸ್ಕೃತಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಮಿತಿಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಿವಮೊಗ್ಗ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಆಯ್ಕೆಯಾಗಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಮಿತಿಯಲ್ಲಿ ಸೂರ್ಯ
ಮಾಹಿತಿ ತಂತ್ರಜ್ಞಾನ ಸಮಿತಿಯಲ್ಲಿ ಬೆಂಗಳೂರು ದಕ್ಷಿಣದಿಂದ ಮೊದಲ ಬಾರಿಗೆ ಆಯ್ಕೆಯಾದ ತೇಜಸ್ವಿ ಸೂರ್ಯ ಸದಸ್ಯರಾಗಿ ನೇಮಕವಾಗಿದ್ದಾರೆ. ಅವರಲ್ಲದೆ ರಾಜ್ಯಸಭೆ ಸದ್ಯರಾದ ಡಿ. ಕುಪೇಂದ್ರ ರೆಡ್ಡಿ ಮತ್ತು ಸೈಯದ್ ನಾಸಿರ್ ಹುಸೇನ್ ಕೂಡ ಈ ಸಮಿತಿಯಲ್ಲಿದ್ದಾರೆ.
ಲೋಕಸಭೆಯಲ್ಲಿ ಕಾಶ್ಮೀರ ವಿಭಜನೆ ಮಸೂದೆ ಅಂಗೀಕಾರ: ಬಿದ್ದ ಮತಗಳೆಷ್ಟು?
ಜಲಸಂಪನ್ಮೂಲ ಸಮಿತಿಯಲ್ಲಿ ಪ್ರಜ್ವಲ್ ರೇವಣ್ಣ
ಜಲಸಂಪನ್ಮೂಲ ಸಮಿತಿಯಲ್ಲಿ ಹಾಸನದಿಂದ ಮೊದಲ ಬಾರಿಗೆ ಗೆದ್ದಿರುವ ಜೆಡಿಎಸ್ನ ಪ್ರಜ್ವಲ್ ರೇವಣ್ಣ ಹಾಗೂ ರಾಜ್ಯದಿಂದ ಕಾಂಗ್ರೆಸ್ನ ಏಕೈಕ ಪ್ರತಿನಿಧಿ ಡಿಕೆ ಸುರೇಶ್ ಸದಸ್ಯರಾಗಿದ್ದಾರೆ. ಚಿತ್ರದುರ್ಗದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾದ ಆನೇಕಲ್ನ ಎ. ನಾರಾಯಣ ಸ್ವಾಮಿ ಅವರೂ ಈ ಸಮಿತಿಯಲ್ಲಿದ್ದಾರೆ. ಡಿಕೆ ಸುರೇಶ್, ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ
ರಕ್ಷಣಾ ಸಮಿತಿಯಲ್ಲಿ ಪ್ರತಾಪ್ ಸಿಂಹ
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಶಂಕರ್ ಜೊಲ್ಲೆ ರಕ್ಷಣಾ ಸಮಿತಿಯ ಸದಸ್ಯರಾಗಿದ್ದಾರೆ. ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ವಾಣಿಜ್ಯ ಸಮಿತಿಯ ಸದಸ್ಯರಾಗಿದ್ದಾರೆ. ಹಣಕಾಸು ಸಮಿತಿಯಲ್ಲಿ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಇದ್ದಾರೆ.
ಪಿಸಿ ಮೋಹನ್ಗೆ ಎರಡು ಸಮಿತಿ
ಪಿ.ಸಿ. ಮೋಹನ್ (ಬಿಜೆಪಿ- ಬೆಂಗಳೂರು ಕೇಂದ್ರ)- ವಿದೇಶಾಂಗ ವ್ಯವಹಾರ ಮತ್ತು ನಗರಾಭಿವೃದ್ಧಿ ಸಮಿತಿ.
ಜಿಎಸ್ ಬಸವರಾಜ್ (ಬಿಜೆಪಿ-ತುಮಕೂರು)- ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆ ಸಮಿತಿ.
ಬಿಎಸ್ ಬಚ್ಚೇಗೌಡ (ಬಿಜೆಪಿ-ಚಿಕ್ಕಬಳ್ಳಾಪುರ ), ಉಮೇಶ್ ಜಾಧವ್ (ಬಿಜೆಪಿ-ಕಲಬುರಗಿ), ಆಸ್ಕರ್ ಫರ್ನಾಂಡಿಸ್ (ರಾಜ್ಯಸಭೆ)- ಕಾರ್ಮಿಕ ಸಮಿತಿ.
ಡಾ. ರಾಜೀವ್ ಗೌಡ (ರಾಜ್ಯಸಭೆ)- ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ.
ಇಂಧನ ಸಮಿತಿಯಲ್ಲಿ ಶೋಭಾ, ಉದಾಸಿ
ಶೋಭಾ ಕರಂದ್ಲಾಜೆ (ಬಿಜೆಪಿ-ಉಡುಪಿ), ಸಿಎಂ ಉದಾಸಿ (ಬಿಜೆಪಿ-ಗದಗ), ಬಿಕೆ ಹರಿಪ್ರಸಾದ್ ಮತ್ತು ಪ್ರಭಾಕರ ಕೋರೆ (ರಾಜ್ಯಸಭೆ) - ಇಂಧನ ಖಾತೆ ಸಮಿತಿ.
ಡಾ. ಎಲ್ ಹನುಮಂತಯ್ಯ (ರಾಜ್ಯಸಭೆ)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿ.
ಕೆಸಿ ರಾಮಮೂರ್ತಿ (ರಾಜ್ಯಸಭೆ)- ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಕಾನೂನು ಮತ್ತು ನ್ಯಾಯ ಸಮಿತಿ.
ರಾಜಾ ಅಮರೇಶ್ವರ ನಾಯ್ಕ್ (ಬಿಜೆಪಿ- ರಾಯಚೂರು) ಗೃಹ ವ್ಯವಹಾರ ಸಮಿತಿ.
ಅನಂತ್ ಕುಮಾರ್ ಹೆಗ್ಡೆ ವಿಜ್ಞಾನ ಮತ್ತು ತಂತ್ರಜ್ಞಾನ
ಅನಂತ್ ಕುಮಾರ್ ಹೆಗ್ಡೆ (ಬಿಜೆಪಿ-ಉತ್ತರ ಕನ್ನಡ) ಮತ್ತು ಜೈರಾಂ ರಮೇಶ್ (ರಾಜ್ಯಸಭೆ)- ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ.
ವೈ ದೇವೇಂದ್ರಪ್ಪ (ಬಿಜೆಪಿ-ಬಳ್ಳಾರಿ) ಮತ್ತು ವಿ. ಶ್ರೀನಿವಾಸ್ ಪ್ರಸಾದ್ (ಬಿಜೆಪಿ-ಚಾಮರಾಜನಗರ)- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ.
ರಮೇಶ್ ಜಿಗಜಿಣಗಿ (ಬಿಜೆಪಿ-ಬಿಜಾಪುರ) ಮತ್ತು ಜಿಸಿ ಚಂದ್ರಶೇಖರ್ (ರಾಜ್ಯಸಭೆ)- ರಾಸಾಯನಿಕ ಮತ್ತು ರಸಗೊಬ್ಬರ ಸಮಿತಿ.