ಲೋಕಸಭೆಯಲ್ಲಿ ಸಂಸದರ ಶೇ.30ರಷ್ಟು ವೇತನ ಕಡಿತದ ಮಸೂದೆ ಅಂಗೀಕಾರ
ನವದೆಹಲಿ, ಸಪ್ಟೆಂಬರ್.15: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಭಾಯಿಸುವ ಉದ್ದೇಶದಿಂದ ಸಂಸದರ ಒಂದು ವರ್ಷದ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸುವ ಪ್ರಸ್ತಾವನೆಯನ್ನು ಲೋಕಸಭೆಯಲ್ಲಿ ಮಂಗಳವಾರ ಸರ್ವಾನುಮತಗಳಿಂದ ಅಂಗೀಕರಿಸಲಾಯಿತು.
ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ, 2020 ಅನ್ನು ಲೋಕಸಭೆಯ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಸೆ.14ರ ಸೋಮವಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಲಾಗಿತ್ತು.
ನೀವು ಲೆಕ್ಕ ಮಾಡಿಲ್ಲ ಅಂದರೆ ಯಾವ ಕಾರ್ಮಿಕನೂ ಸತ್ತಿಲ್ಲವೇ: ರಾಹುಲ್ ಗರಂ
ಕೇಂದ್ರ ಸರ್ಕಾರವು ಇದಕ್ಕೂ ಮೊದಲು 2020ರ ಮಂತ್ರಿಗಳ ವೇತನ ಮತ್ತು ಭತ್ಯೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಈ ವರ್ಷದ ಏಪ್ರಿಲ್.1ರಿಂದ ಪ್ರಾರಂಭದಿಂದ ಒಂದು ವರ್ಷದ ಅವಧಿಗೆ ಪ್ರತಿ ಸಚಿವರಿಗೆ ಪಾವತಿಸಬೇಕಾದ ಸಂಪೂರ್ಣ ಭತ್ಯೆಯಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗುತ್ತದೆ.
ಏಪ್ರಿಲ್.5ರಂದೇ ಸಚಿವರ ಭತ್ಯೆ ಕಡಿತದ ತೀರ್ಮಾನ:
ಕಳೆದ ಏಪ್ರಿಲ್.05ರಂದು ನಡೆದ ಕೇಂದ್ರ ಸಚಿವರ ಸಂಪುಟ ಸಭೆಯಲ್ಲಿ ಸಂಸದರು ಮತ್ತು ಸಚಿವರ ವೇತನ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸಲಾಗಿತ್ತು. ಸಚಿವರ ಭತ್ಯೆ, ಪಿಂಚಣಿಯನ್ನು ಶೇ.30ರಷ್ಟು ಕಡಿತಗೊಳಿಸುವ ತೀರ್ಮಾನಿಸಲಾಗಿತ್ತು. ಸಂಸದರ ಪ್ರಾದೇಶಿಕ ಅಭಿವೃದ್ಧಿ ಯೋಜನೆಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲು ಮತ್ತು ಮೊತ್ತವನ್ನು ಸರ್ಕಾರದ ಏಕೀಕೃತ ನಿಧಿಗೆ ವರ್ಗಾಯಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.