ಮತ್ತೆ ಬರ್ತಾರಾ ಅಥವಾ ಸೋಲ್ತಾರಾ ಮೋದಿ; ಏನಂತಾರೆ ಪಾಕಿಸ್ತಾನಿ ಮಂದಿ?
ಗುರುವಾರದಂದು ಭಾರತದ ಲೋಕಸಭಾ ಚುನಾವಣೆಯ ಮತ ಎಣಿಕೆ ದಿನ. ಫಲಿತಾಂಶ ಏನಾಗಬಹುದು ಎಂದು ಪಕ್ಕದ ಪಾಕಿಸ್ತಾನದಲ್ಲಿ ಕೂಡ ಎದುರು ನೋಡಲಾಗುತ್ತಿದೆ. ಎರಡು ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಏರ್ಪಡಬಹುದಾ ಎಂಬುದಕ್ಕಿಂತ ಪರಸ್ಪರ ದೇಶಗಳಲ್ಲಿ ಇರುವ ಕುಟುಂಬದವರನ್ನು ಭೇಟಿ ಆಗುವುದಕ್ಕೆ ಸಾಧ್ಯವಾಗುವಂಥ ಸನ್ನಿವೇಶ ಸೃಷ್ಟಿ ಆಗಬಹುದಾ ಎಂಬ ಆತಂಕ ಇದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಭಾರತೀಯ ವಾಯು ಸೇನೆಯಿಂದ ಬಾಲಾಕೋಟ್ ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಬಹುತೇಕ ಪಾಕಿಸ್ತಾನೀಯರು ಭಯ ವ್ಯಕ್ತಪಡಿಸಿದ್ದು, ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲ್ಲ ಎಂಬ ಆಶಾವಾದದಲ್ಲೇ ಇದ್ದಾರೆ.
"ಅವರು ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಲ್ಲ" ಎಂದು ಲಾಹೋರ್ ಮೂಲದ ಶಾಹಿ ಆಲಂ ಪಾಕಿಸ್ತಾನದ ಟೀವಿ ಚಾನಲ್ ಗೆ ತಿಳಿಸಿದ್ದಾರೆ.
ಮತ್ತೊಬ್ಬ ವ್ಯಕ್ತಿ ಅಜೀಜ್ ಎಂಬಾತ ಮಾತನಾಡಿ, ಬಹುಮತದೊಂದಿಗೆ ಮೋದಿ ಅಧಿಕಾರಕ್ಕೆ ಏರುವುದು ಅನುಮಾನ. ಪೂರ್ಣ ಬಹುಮತ ಅವರಿಗೆ ಸಿಗಲ್ಲ. ಅದರಿಂದ ಪಾಕಿಸ್ತಾನಕ್ಕೆ ಒಳ್ಳೆಯದು ಎಂದಿದ್ದಾರೆ.
ಕೆಲ ತಿಂಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಜಯ ಗಳಿಸಿದರೆ ಶಾಂತಿ ಮಾತುಕತೆಗೆ ಅನುಕೂಲ ಎಂದು ಹೇಳಿದ್ದರು.
ಬಿಜೆಪಿ ಗೆದ್ದರೆ ಅನುಕೂಲ: ಅಚ್ಚರಿ ಮೂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ
ಲಂಡನ್ ನಲ್ಲಿರುವ ಪಾಕಿಸ್ತಾನದ ಉದ್ಯಮಿಯೊಬ್ಬರು ಮಾಧ್ಯಮವೊಂದರ ಜತೆ ಮಾತನಾಡಿ, ಪಾಕಿಸ್ತಾನದಲ್ಲೇ ವಾಸ ಇರುವವರಿಗಿಂತ ಹೊರಗೆ ಇರುವ ಪಾಕಿಸ್ತಾನಿಗಳ ದೃಷ್ಟಿಕೋನ ಬೇರೆ ಇದೆ. ಮೋದಿ ಮತ್ತೆ ಭಾರತದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಆಗ ಪಾಕಿಸ್ತಾನದ ನೆಲದಿಂದ ಕಾರ್ಯಾಚರಣೆ ನಡೆಸುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜತೆಗೆ ನಮ್ಮ ತಾಯ್ನೆಲವಾದ ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ಸರಕಾರದ ಮೇಲೆ ಒತ್ತಡ ಹಾಕಲು ಸಾಧ್ಯವಾಗುತ್ತದೆ ಎಂದಿದ್ದಾರೆ.