ಈ ಬಾರಿ ಅಚ್ಚರಿಯ ಫಲಿತಾಂಶ: ಕೆ. ಚಂದ್ರಶೇಖರ ರಾವ್ ಭವಿಷ್ಯ
ನವದೆಹಲಿ, ಏಪ್ರಿಲ್ 4: ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರಾದೇಶಿಕ ಮಟ್ಟಕ್ಕೆ ಉಳಿಯದೆ ತಮ್ಮ ಪಕ್ಷವನ್ನು ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯವಾಗಿ ರಾಷ್ಟ್ರೀಯ ಪಕ್ಷವನ್ನು ರಚಿಸುವ ಅಭಿಲಾಷೆ ಹೊಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಜತೆಗೂಡಿ ರಾಷ್ಟ್ರೀಯ ಪಕ್ಷ ಸ್ಥಾಪಿಸುವ ಮೂಲಕ ಅಧಿಕಾರಕ್ಕೆ ಬರುವ ಮಹತ್ವದ ಗುರಿ ಅವರದು. ಅದಕ್ಕಾಗಿ ಕಳೆದ ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮುಂತಾದವರನ್ನು ಭೇಟಿ ಮಾಡಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ಸೇತರ ತೃತೀಯ ಶಕ್ತಿಯನ್ನು ಸ್ಥಾಪಿಸುವ ಅವರ ಬಯಕೆ ಇದುವರೆಗೂ ಈಡೇರಿಲ್ಲ.
ವ್ಯಕ್ತಿಚಿತ್ರ : ತೆಲಂಗಾಣ ಸಿಎಂ ಹೋರಾಟಗಾರ ಕೆ ಚಂದ್ರಶೇಖರ ರಾವ್
ಚುನಾವಣಾಪೂರ್ವ ಮೈತ್ರಿಗಳ ಮೂಲಕ ಬಿಜೆಪಿಯೇತರ ವಿರೋಧ ಪಕ್ಷಗಳು ಕಾಂಗ್ರೆಸ್ ಜತೆಗೂಡಿ ಮಹಾಘಟಬಂಧನ್ ರೂಪಿಸಿಕೊಂಡಿವೆ. ಆದರೆ, ಕೆ.ಸಿ ಚಂದ್ರಶೇಖರ ರಾವ್ ಈ ಮೈತ್ರಿಕೂಟಗಳಿಂದ ದೂರವೇ ಇದ್ದಾರೆ. ತಾವು ರಾಷ್ಟ್ರೀಯ ಪಕ್ಷಗಳ ಬಳಿಗೆ ಹೋಗುವ ಬದಲು, ರಾಷ್ಟ್ರೀಯ ಪಕ್ಷಗಳೇ ತಮ್ಮ ಬಳಿ ಬರುವ ಸಂದರ್ಭ ಎದುರಾಗಲಿದೆ ಎನ್ನುವುದು ಅವರ ವಿಶ್ವಾಸ.
ಚುನಾವಣೆಯ ಸಂದರ್ಭದಲ್ಲಿ ಅವರು 'ಎನ್ಡಿಟಿವಿ'ಯ ಪ್ರಣಯ್ ರಾಯ್ ಅವರೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಆಡಿದ ಮಾತುಗಳ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
ಅಚ್ಚರಿ ಫಲಿತಾಂಶ
ದೇಶದಲ್ಲಿ ಯಾವುದೇ ಒಂದು ಪಕ್ಷ ಸರ್ಕಾರ ರಚಿಸುವುದಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ. ಫಲಿತಾಂಶ ಅಚ್ಚರಿದಾಯಕವಾಗಿರುತ್ತದೆ. ಚುನಾವಣೋತ್ತರ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳು ಜತೆಗೂಡಿ ಅಧಿಕಾರಕ್ಕೆ ಬರುವಂತಾಗುತ್ತದೆ. ಇದರಿಂದ ದೇಶಕ್ಕೆ ಲಾಭವಾಗಲಿದೆ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ.
* ಬಿಜೆಪಿಯು ಎಲ್ಲ ರಾಜ್ಯಗಳಲ್ಲಿಯೂ ಕಳೆದ ಚುನಾವಣೆಯಲ್ಲಿ ಪಡೆದುಕೊಂಡ ಸೀಟುಗಳನ್ನು ಕಳೆದುಕೊಳ್ಳಲಿದೆ. 2014ಕ್ಕಿಂತ 2019 ಸಂಪೂರ್ಣ ವಿಭಿನ್ನವಾಗಿ ಇರಲಿದೆ.
ರಾಷ್ಟ್ರೀಯ ಪಕ್ಷ ಸ್ಥಾಪನೆ ಅಗತ್ಯ
ದೇಶದ ಅಭಿವೃದ್ಧಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶೋಚನೀಯ ವೈಫಲ್ಯ ಕಂಡಿವೆ. ಈಗ ಹೊಸ ಪರ್ಯಾಯದ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಸಮಾನ ಮನೋಭಾವದ ಪಕ್ಷಗಳು ಸೇರಿಕೊಂಡು ಅಗತ್ಯ ಬಿದ್ದರೆ ಒಂದು ರಾಷ್ಟ್ರೀಯ ಪಕ್ಷ ಸ್ಥಾಪಿಸಬೇಕು ಎಂದು ನಾನು ಪ್ರಸ್ತಾಪಿಸುತ್ತಿರುವುದು. ಇದು ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
* ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಮುಖ್ಯವಲ್ಲ. ಯಾರು ಬಹುಮತ ಪಡೆದುಕೊಳ್ಳುತ್ತಾರೆ ಎನ್ನುವುದೇ ಮುಖ್ಯ. ಪ್ರಾದೇಶಿಕ ಪಕ್ಷಗಳು ಬಹುಮತ ಪಡೆದುಕೊಳ್ಳುತ್ತವೆ.
ಸಿಬಿಐ v/s ಮಮತಾ ವಿವಾದ: ಮೌನವೇ ಆಭರಣ ಎಂದ ಟಿಆರ್ ಎಸ್
ಬಿಜೆಪಿ ಸರ್ಕಾರ ವಿಫಲ
ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ಸ್ವತಂತ್ರವಾಗಿ ರಚನೆಯಾಗಿತ್ತು. ಆದರೆ ಅದು ದಯನೀಯವಾಗಿ ವಿಫಲವಾಯಿತು. ಅವರು ರೈತರಿಗೆ, ದಲಿತರಿಗೆ ಅಥವಾ ನಿರುದ್ಯೋಗಿಗಳಿಗೆ ಏನನ್ನೂ ಮಾಡಲಿಲ್ಲ. ರಾಜಕೀಯವಾಗಿ ಮೋದಿ ವಿಫಲರಾಗಿದ್ದಾರೆ.
ಪ್ರಾದೇಶಿಕ ಪಕ್ಷಗಳ ಬಳಿ ಬರಲಿ
ಪ್ರಾದೇಶಿಕ ಪಕ್ಷಗಳು ಬಿಜೆಪಿ ಅಥವಾ ಕಾಂಗ್ರೆಸ್ಗೆ ಬೆಂಬಲ ನೀಡುವುದು ಫ್ಯಾಶನ್ ಆಗಿತ್ತು. ಈಗ ಆ ಕಾಲ ಹೋಯಿತು. ಅದರ ಮತ್ತೊಂದು ಮಗ್ಗಲು ಇರುತ್ತದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಬಾರದೇಕೆ?
ನಮ್ಮ ಸೋಲಿಗಾಗಿ ಕೆಸಿಆರ್-ಜಗನ್ ಒಂದಾಗಿದ್ದಾರೆ: ಟಿಡಿಪಿ ಆರೋಪ
ಪ್ರಧಾನಿಯಾಗುವುದು ಉದ್ದೇಶವಲ್ಲ
ಪ್ರಧಾನಿಯಾಗುವುದು ನನ್ನ ಉದ್ದೇಶವಲ್ಲ ಮತ್ತು ನನ್ನ ಗುರಿಯೂ ಅಲ್ಲ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಪ್ರಾದೇಶಿಕ ಪಕ್ಷಗಳತ್ತ ಬರುವುದನ್ನು ನಾವು ಬಯಸುತ್ತೇವೆ.
* ದುರದೃಷ್ಟವಶಾತ್ ನಾವು ದೇಶದಲ್ಲಿನ ನಾಯಕ ಕೇಂದ್ರಿತ, ವ್ಯಕ್ತಿ ಕೇಂದ್ರಿತ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಅದು ವಿಷಯ ಕೇಂದ್ರಿತವಾಗಬೇಕು.
ವ್ಯಕ್ತಿತ್ವಗಳ ಬಣ್ಣನೆ
ರಾಹುಲ್ ಗಾಂಧಿಗಿಂತ ಸೋನಿಯಾ ಎಷ್ಟೋ ಉತ್ತಮರು. ಅವರಿಗೆ ತಾಳ್ಮೆಯಿದೆ ಮತ್ತು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು.
* ಮಮತಾ ದೀದಿ ತುಂಬಾ ದುಡುಕಿನ ವ್ಯಕ್ತಿತ್ವದವರು. ಆದರೆ, ಹೆಚ್ಚು ಅರ್ಥಮಾಡಿಕೊಳ್ಳುತ್ತಾರೆ.
ಬಿಜೆಪಿಯವರ ಮೇಲೆ ದಾಳಿ ಏಕಿಲ್ಲ
ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲ ಸದಸ್ಯರ ಮನೆಗಳ ಮೇಲೆ ಐಟಿ ದಾಳಿಗಳಾಗುತ್ತವೆ. ಒಬ್ಬನೇ ಒಬ್ಬ ಬಿಜೆಪಿ ಸದಸ್ಯರ ಮೇಲೆ ದಾಳಿಯಾಗುವುದಿಲ್ಲ. ಇದು ಹೇಗೆ ಸಾಧ್ಯ?