ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ
ನವದೆಹಲಿ, ಮೇ 17: ಪ್ರಮುಖ ಸುದ್ದಿವಾಹಿನಿಗಳು ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕ ನೀಡಿವೆ. ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ನೇತೃತ್ವ ಎನ್ಡಿಎ ಮಿತ್ರಪಕ್ಷಗಳು ಲೀಡ್ ಪಡೆದುಕೊಳ್ಳಲಿವೆ ಎನ್ನುತ್ತವೆ ಸಮೀಕ್ಷೆಗಳು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇದರಿಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬರಬೇಕು ಎನ್ನುವ ವಿರೋಧಪಕ್ಷಗಳ ಮಹಾಘಟಬಂಧನದ ಕೂಟಕ್ಕೆ ತೀವ್ರ ನಿರಾಸೆಯಾಗಿದೆ. ಆದರೂ ಮೇ 23ರ ಅಂತಿಮ ಫಲಿತಾಂಶ ಹೊರಬೀಳುವವರೆಗೂ ಕಾಯಬೇಕು ಎಂದು ಫಲಿತಾಂಶದಲ್ಲಿ ಪವಾಡಗಳು, ಅಚ್ಚರಿಗಳು ಎದುರಾಗಬಹುದು ಎನ್ನುವ ನಿರೀಕ್ಷೆಯಲ್ಲಿವೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮಾತ್ರವಲ್ಲ, ಬಹುಮತಕ್ಕೆ ಬೇಕಾದ ಸೀಟುಗಳನ್ನು ಕೂಡ ಗೆದ್ದುಕೊಂಡಿತ್ತು. ಆದರೆ, ಈ ಬಾರಿ ಕಮಲ ಪಕ್ಷ ಅಷ್ಟೊಂದು ಸಾಧ್ಯಗಳನ್ನು ಗೆದ್ದುಕೊಳ್ಳಲಾರದು. ಅದಕ್ಕೆ ಸರ್ಕಾರ ರಚಿಸಲು ಇತರೆ ಪಕ್ಷಗಳ ನೆರವು ಅತ್ಯಗತ್ಯ. ಹೀಗಾಗಿ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಚುನಾವಣೆಗೆ ಮೊದಲೇ ಹೊಂದಾಣಿಕೆ ಮಾಡಿಕೊಂಡು, ಮಹಾಘಟಬಂಧನಕ್ಕೆ ಸವಾಲು ಎಸೆದಿತ್ತು. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಇತರೆ ಮೈತ್ರಿಕೂಟಗಳನ್ನು ಬಿಜೆಪಿ ಏಕಾಂಗಿಯಾಗಿಯೇ ಎದುರಿಸಿದೆ.
Exit Poll 2019: ದಕ್ಷಿಣದಲ್ಲಿ ಎನ್ಡಿಎಗಿಂತ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ
ಕಾಂಗ್ರೆಸ್ ಅಥವಾ ಅದರ ಬೆಂಬಲದೊಂದಿಗೆ ರಚನೆಯಾಗಿರುವ ಸರ್ಕಾರವಿರುವ ರಾಜ್ಯಗಳಲ್ಲಿಯೂ ಬಿಜೆಪಿ ತನ್ನ ಪ್ರಭಾವಳಿ ಪ್ರದರ್ಶಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಕೂಡ ಬಿಜೆಪಿ ತನ್ನ ಹಳೆಯ ವರ್ಚಸ್ಸು ಬೀರಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಎಕ್ಸಿಟ್ ಪೋಲ್ಗಳು ಹೇಳಿವೆ. ತನ್ನ ಪ್ರಭಾವವೇ ಇಲ್ಲದ ರಾಜ್ಯಗಳಲ್ಲಿಯೂ ಕಮಲ ಅರಳಿಸುವುದು ಖಚಿತ ಎನ್ನಲಾಗಿದೆ. ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಹಲವು ಅಚ್ಚರಿಗಳನ್ನು ನೀಡಲಿದೆ. ಆ ಅಚ್ಚರಿಗಳು ಯಾವುದು ನೋಡೋಣ...
ದೀದಿ ತವರಲ್ಲಿ ಕಮಲದ ಸಿಂಗಾರ
ಪಶ್ಚಿಮ ಬಂಗಾಳದಲ್ಲಿ ಬಲಪಂಥೀಯ ವಿಚಾರಧಾರೆಯೇ ಇಲ್ಲ ಎನ್ನುವ ಮಟ್ಟಿಗೆ ಅದನ್ನು ಎಡಪಂಥೀಯ ಚಿಂತನೆಗಳು ಆವರಿಸಿಕೊಂಡಿತ್ತು. ಹೀಗಾಗಿ ಬಿಜೆಪಿ ಅಲ್ಲಿ ರಾಜಕೀಯ ಅಸ್ತಿತ್ವವನ್ನು ಕಂಡುಕೊಳ್ಳುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ಇತ್ತು. 2014ರ ಚುನಾವಣೆ ಈ ನಂಬಿಕೆಯನ್ನು ಹುಸಿಮಾಡಿತು. ಮಮತಾ ಬ್ಯಾನರ್ಜಿ ಸರ್ಕಾರವಿರುವ ಪಶ್ಚಿಮ ಬಂಗಾಳದಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. 'ಈ ಬಾರಿ ಬಾಂಗ್ಲಾ' ಎಂಬ ಘೋಷಣೆಯೊಂದಿಗೆ ದೀದಿ ಕೋಟೆಗೆ ನುಗ್ಗಿರುವ ಬಿಜೆಪಿ ಇಲ್ಲಿ ಎರಡಂಕಿ ಗಡಿ ದಾಟಲಿದೆಯೇ? ಹೌದು ಎನ್ನುತ್ತವೆ ಸಮೀಕ್ಷೆಗಳು. ಆರು ಸಮೀಕ್ಷೆಗಳಲ್ಲಿ ಐದರ ಪ್ರಕಾರ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಹತ್ತಕ್ಕೂ ಅಧಿಕ ಸೀಟುಗಳನ್ನು ಗಳಿಸಲಿದೆ. ಎಲ್ಲ ಸಮೀಕ್ಷೆಗಳೂ ಹೇಳಿರುವುದು ರಾಜ್ಯವನ್ನು 30ಕ್ಕೂ ಹೆಚ್ಚು ವರ್ಷ ಆಳಿದ ಎಡಪಕ್ಷ ಸಿಪಿಎಂ ಒಂದೇ ಒಂದು ಸೀಟನ್ನು ಅಲ್ಲಿ ಗೆಲ್ಲುವುದಿಲ್ಲ ಎಂದು!
ದೆಹಲಿಯಲ್ಲಿ 2014ರ ಫಲಿತಾಂಶ ಮತ್ತೆ ರಿಪೀಟ್, ಕಮಲ ಕ್ಲೀನ್ ಸ್ವೀಪ್
ಕರ್ನಾಟಕದಲ್ಲಿ ಕಮಲದ ಕಂಪು
2018ರ ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸುವ ಪ್ರಯತ್ನಗಳಲ್ಲಿ ವಿಫಲವಾದ ಬಿಜೆಪಿ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿದೆ. ಇಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಯಾಗಿ ಚುನಾವಣೆ ಎದುರಿಸಿವೆ. ಆದರೆ, ಮೈತ್ರಿಪಕ್ಷಗಳ ಜಂಟಿ ಕಾರ್ಯಾಚರಣೆ ಫಲಕೊಡುವುದಿಲ್ಲ ಎನ್ನುತ್ತವೆ ಸಮೀಕ್ಷೆಗಳು. ಕಳೆದ ಚುನಾವಣೆಯಲ್ಲಿ 28ರಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಪ್ರಸಕ್ತ ಸಾಲಿನಲ್ಲಿ ಬಿಜೆಪಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿಲ್ಲ. ಅಂದರೆ 27 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆರರಲ್ಲಿ ನಾಲ್ಕು ಸಮೀಕ್ಷೆಗಳ ಪ್ರಕಾರ ಬಿಜೆಪಿ 20ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದುಕೊಳ್ಳಲಿದೆ. ಇನ್ನುಳಿದ ಎರಡು ಸಮೀಕ್ಷೆಗಳು ಕೂಡ ಬಿಜೆಪಿಯೇ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಿವೆ.
ಎಕ್ಸಿಟ್ ಪೋಲ್ ಭವಿಷ್ಯ: ರಾಜ್ಯ ಬಿಜೆಪಿ ನಾಯಕರಲ್ಲಿ ಸಂಭ್ರಮ
ನಡೆಯದ ಪ್ರಿಯಾಂಕಾ ಆಟ
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಈ ಬಾರಿ ಭಾರಿ ದೊಡ್ಡ ಸವಾಲು ಎದುರಾಗಿತ್ತು. ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿಕೂಟ ಭರ್ಜರಿ ಅಲೆ ಎಬ್ಬಿಸಿತ್ತು. 2014ರ ಚುನಾವಣೆಯಲ್ಲಿ 80 ಸೀಟುಗಳ ಪೈಕಿ 71ರನ್ನು ಬಿಜೆಪಿಯೇ ಬಾಚಿಕೊಂಡಿತ್ತು. ಅದರ ಮಿತ್ರಪಕ್ಷ ಅಪ್ನಾ ದಳ್ ಎರಡು ಸೀಟುಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಷ್ಟು ಕ್ಷೇತ್ರಗಳಲ್ಲಿ ಗೆಲ್ಲವುದು ಕಷ್ಟ. ಮೈತ್ರಿಕೂಟ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಬಿಜೆಪಿ 20-30ರ ಆಸುಪಾಸಿನಲ್ಲಿ ಗೆಲುವು ಸಾಧಿಸಬಹುದು. ಆದರೆ, ಮೈತ್ರಿಕೂಟವಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ಗೆ ಈ ಬಾರಿಯೂ ಅಲ್ಲಿ ಹೀನಾಯ ಸೋಲು ಎದುರಾಗಲಿದೆ. ಅದರಲ್ಲಿಯೂ ಇಡೀ ದೇಶದ ಚಿತ್ತವನ್ನು ತನ್ನತ್ತ ಸೆಳೆದುಕೊಂಡು ಪ್ರಚಾರಕ್ಕೆ ಇಳಿದಿದ್ದ ಪ್ರಿಯಾಂಕಾ ಗಾಂಧಿ ಅಪಾರ ಪ್ರಭಾವ ಬೀರಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಕಾಂಗ್ರೆಸ್ ಎರಡು ಸೀಟುಗಳನ್ನು ಮಾತ್ರ ಗೆಲ್ಲಲಿದೆ ಎನ್ನುತ್ತವೆ ಸಮೀಕ್ಷೆಗಳು. ಅದು ಅಮೇಥಿ ಮತ್ತು ರಾಯ್ ಬರೇಲಿ ಎಂದು ಹೇಳಲಾಗಿದೆ.
ತ.ನಾಡಿನಲ್ಲಿ ಡಿಎಂಕೆ ಅಬ್ಬರ
ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಹಲವು ದಶಕಗಳ ಬಳಿಕ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲದೆಯೇ ಚುನಾವಣೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಡಿಎಂಕೆ 39 ಸೀಟುಗಳಲ್ಲಿ ಒಂದನ್ನೂ ಗೆದ್ದಿರಲಿಲ್ಲ. ಈ ಸಲ 38 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ತಮಿಳುನಾಡಿನಲ್ಲಿ ಸ್ವೀಪ್ ಮಾಡಲಿದೆ. ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಶೂನ್ಯ ಸಾಧನೆ ಮಾಡಲಿದೆ ಎನ್ನಲಾಗಿದೆ.
ಒಡಿಶಾದಲ್ಲಿ ಕಮಲದ ಪರಿಮಳ
ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರವಿರುವ ಒಡಿಶಾದಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟಾಗಿಲ್ಲ. ಹಾಗೆಂದು ಈ ಚುನಾವಣೆಯಲ್ಲಿ ಅದು ಸೋಲುತ್ತದೆ ಎನ್ನುವಂತಿಲ್ಲ. ಅಚ್ಚರಿಯ ರೀತಿಯಲ್ಲಿ ಅದು ಕಾಂಗ್ರೆಸ್ ಮತ್ತು ಬಿಜೆಡಿಗೆ ಆಘಾತ ನೀಡಲಿದೆ. 21 ಸೀಟುಗಳಿರುವ ಒಡಿಶಾದಲ್ಲಿ ಬಿಜೆಪಿ ಕಳೆದ ಬಾರಿ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು. ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ಇಲ್ಲಿ 5-8 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದಿವೆ. ಇಂಡಿಯಾ ಟುಡೆ-ಆಕ್ಸಿಸ್ ಪೋಲ್ ಪ್ರಕಾರ ಬಿಜೆಪಿ ಇಲ್ಲಿ 15-19 ಸೀಟುಗಳನ್ನು ಗೆಲ್ಲಲಿದೆ. 19 ವರ್ಷದಿಂದ ಇಲ್ಲಿ ಆಡಳಿತ ನಡೆಸುತ್ತಿರುವ ಬಿಜೆಡಿ ಕಳೆದ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆದ್ದಿತ್ತು.
ರಾಜಸ್ಥಾನದಲ್ಲಿ ಮತ್ತೆ ಮೋದಿ ಅಲೆ
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಸುಂಧರಾ ರಾಜೇ ನೇತೃತ್ವದ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅಧಿಕಾರ ಹಿಡಿದಿರುವ ರಾಜಸ್ಥಾನದಲ್ಲಿ ಮೋದಿ ಅಲೆ ಕಡಿಮೆಯಾಗಿಲ್ಲ. ವಿಧಾನಸಭೆ ಚುನಾವಣೆ ನಡೆದು ಐದೇ ತಿಂಗಳಾಗಿದ್ದರೂ ಬಿಜೆಪಿ ಜನಪ್ರಿಯತೆ ತಗ್ಗಿಲ್ಲ. ಕಳೆದ ಚುನಾವಣೆಯಲ್ಲಿ ಇಲ್ಲಿನ ಎಲ್ಲ 25 ಸೀಟುಗಳನ್ನು ಬಿಜೆಪಿ ಗೆದ್ದಿತ್ತು. ಈ ಬಾರಿಯೂ ಅದು ಬಹುತೇಕ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಎಲ್ಲ ಆರೂ ಸಮೀಕ್ಷೆಗಳು ಹೇಳಿವೆ.
ಆಮ್ ಆದ್ಮಿಗೆ ಸಂಕಷ್ಟ?
ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ನಾಲ್ಕು ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಆ ಗೆಲುವು ಸಿಕ್ಕಿದ್ದು ಆಡಳಿತವಿರುವ ದೆಹಲಿಯಲ್ಲಿ ಅಲ್ಲ. ದೆಹಲಿಯ ಎಲ್ಲ ಏಳು ಸೀಟುಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಈ ಚುನಾವಣೆಯಲ್ಲಿ ದೇಶದ ಯಾವುದೇ ಭಾಗದಲ್ಲಿಯೂ ಎಎಪಿ ಒಂದೂ ಸ್ಥಾನ ಗೆಲ್ಲುವುದು ಸಾಧ್ಯವಾಗುವುದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ. ಹೆಚ್ಚಿನ ಸಮೀಕ್ಷೆಗಳು ಎಎಪಿ ಗೆದ್ದರೂ ದೆಹಲಿಯ ಒಂದು ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಹೇಳಿವೆ.