ಮೋದಿಗಿಂತ ಅಖಿಲೇಶ್, ಮಾಯಾವತಿ ಹೆಚ್ಚು ಜನಪ್ರಿಯರಂತೆ; ಪ್ರಿಯಾಂಕಾ ಲೆಕ್ಕಕ್ಕೇ ಇಲ್ಲ!
ನವದೆಹಲಿ, ಮೇ 2: ರಾಜಕೀಯ ವ್ಯಕ್ತಿಗಳಲ್ಲಿ ಯಾರು ಹೆಚ್ಚು ಜನಪ್ರಿಯರು? ಈ ಪ್ರಶ್ನೆಗಳನ್ನು ಇಟ್ಟುಕೊಂಡು ನಿರಂತರ ಸಮೀಕ್ಷೆಗಳು ನಡೆದಿವೆ. ಕಾಲ ಮತ್ತು ಪ್ರಾದೇಶಿಕತೆಗೆ ತಕ್ಕಂತೆ ರಾಜಕೀಯ ವ್ಯಕ್ತಿಗಳ ಜನಪ್ರಿಯತೆಯ ಮಟ್ಟ ಬದಲಾಗುತ್ತದೆ. ಹೆಚ್ಚಿನ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಡೆಗೇ ಒಲವು ಇರುವುದನ್ನು ತೋರಿಸಿವೆ. ಆದರೆ, ಅವರ ಜನಪ್ರಿಯತೆಯ ಮಟ್ಟದಲ್ಲಿ ಏರುಪೇರಾಗಿದೆ ಎಂಬುದನ್ನೂ ವಿವರಿಸಿವೆ.
ಉತ್ತರ ಭಾರತದಲ್ಲಿನ ಬಹುತೇಕ ರಾಜ್ಯಗಳಲ್ಲಿ ನರೇಂದ್ರ ಮೋದಿ ಅವರ ಜನಪ್ರಿಯತೆ ಅಧಿಕವಾಗಿದೆ ಎನ್ನುತ್ತವೆ ಸಮೀಕ್ಷೆ. ಆದರೆ, ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯದಲ್ಲಿಯೂ ಈಗ ಅದೇ ಸನ್ನಿವೇಶ ಇಲ್ಲ. ಅಲ್ಲಿ ಮೋದಿ ಅವರ ಜನಪ್ರಿಯತೆ ಸಾಕಷ್ಟು ಕುಸಿದಿದೆ. ಹಾಗಾದರೆ ಅಲ್ಲಿ ಅತಿ ಹೆಚ್ಚು ಜನಪ್ರಿಯರಾದ ರಾಜಕೀಯ ನಾಯಕರು ಯಾರು? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ? ಅಥವಾ ಒಮ್ಮೆಲೆ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ ಪ್ರಿಯಾಂಕಾ ಗಾಂಧಿ?
ಅಲ್ಲ, ಸಮೀಕ್ಷೆಯೊಂದರ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಜನಪ್ರಿಯರಾದವರು ಮಾಜಿ ಮುಖ್ಯಮಂತ್ರಿಗಳಾದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ.
ಚುನಾವಣೆ ಹೊಸ್ತಿಲಿನಲ್ಲಿ ಮೋದಿ ಜನಪ್ರಿಯತೆ ಹೆಚ್ಚಿಸಿದ ಮೂರು ಅಂಶಗಳು: ಸಮೀಕ್ಷೆ
ರಾಜಕೀಯವಾಗಿ ಕಡು ವೈರಿಗಳಾಗಿದ್ದ ಇವರಿಬ್ಬರೂ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿದ್ದಾರೆ. ಬಿಜೆಪಿಯ ಪ್ರಭಾವಳಿ ತಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಅತ್ತ ಮಹಾಮೈತ್ರಿಕೂಟದ ಕನಸಿನೊಂದಿಗೆ ಸೀಟು ಹಂಚಿಕೆಗೆ ಬಯಸಿದ್ದ ಕಾಂಗ್ರೆಸ್ ಅನ್ನು ಮೂಲೆಗುಂಪಾಗಿದ್ದಾರೆ. ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಕನಸು ಕಾಣುತ್ತಿರುವ ಇಬ್ಬರೂ ನಾಯಕರು, ಆಗಾಗ ಕಾಂಗ್ರೆಸ್ ವಿರುದ್ಧವೂ ಹರಿಹಾಯುತ್ತಿದ್ದಾರೆ. ಮುಂಚೂಣಿಯಲ್ಲಿ ನಿಂತು ಮೋದಿ ಅವರ ವಿರುದ್ಧದ ನೇರ ಹೋರಾಟಕ್ಕೆ ಮುಂದಾಗಿರುವ ಕಾರಣ ಇವರ ಜನಪ್ರಿಯತೆ ಹೆಚ್ಚಿದೆ ಎನ್ನುತ್ತದೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿರುವ ಸಮೀಕ್ಷೆ.
ಸಮೀಕ್ಷೆ ಹೇಗೆ?
ದೆಹಲಿ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳ ಗುಂಪೊಂದು ಉತ್ತರ ಪ್ರದೇಶದಲ್ಲಿ ಇರುವ 80 ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 38,000 ಮತದಾರರನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ. ಮತದಾರರ ಮೂಡ್ ಮತ್ತು ಬಯಕೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ.
ಶೇಕಡಾ 50ಕ್ಕೂ ಹೆಚ್ಚು ಭಾರತೀಯರಿಗೆ ಆಡಳಿತದ ಬಗ್ಗೆ ಸಂತೋಷ: ಸಮೀಕ್ಷೆ
ಯಾರಿಗೆ ಎಷ್ಟು ಜನಪ್ರಿಯತೆ?
ಒಟ್ಟು 37,439 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 13,974 ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅಂದರೆ ಶೇ 37ರಷ್ಟು ಬಿಜೆಪಿ ಜನಪ್ರಿಯತೆ ಹೊಂದಿದೆ. 16341 ಮಂದಿ (ಶೇ 44) ಎಸ್ಪಿ-ಬಿಎಸ್ಪಿ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಉಳಿದ 7,124 ಮಂದಿಯಲ್ಲಿ (ಶೇ 19) ಕಾಂಗ್ರೆಸ್ ಬಗ್ಗೆ ಶೇ 15ರಷ್ಟು ಮಂದಿ ಮಾತ್ರ ಒಲವು ಪ್ರದರ್ಶಿಸಿದ್ದರೆ, ಉಳಿದವರು ಪ್ರಾದೇಶಿಕ ಹಾಗೂ ಸ್ವತಂತ್ರ ಅಭ್ಯರ್ಥಿಗಳೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಿಜೆಪಿ ಆಂತರಿಕ ಸಮೀಕ್ಷೆ: ಬೆಚ್ಚಿಬಿದ್ದ ಅಮಿತ್ ಶಾ!
ಪಶ್ಚಿಮ ಭಾಗದಲ್ಲಿ ಮೈತ್ರಿಯ ಅಲೆ
ಸಹರಾನ್ಪುರ, ಮುಜಫ್ಫರ್ಪುರ, ಕೈರಾನಾ, ಬದೌನ್ ಮತ್ತು ಪಿಲಿಭಿಟ್ ಗಳನ್ನು ಒಳಗೊಂಡ ಪಶ್ಚಿಮ ಉತ್ತರ ಪ್ರದೇಶದಲ್ಲಿ ಶೇ 51ರಷ್ಟು ಮಂದಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಈ ಭಾಗಗಳಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದವರು ಶೇ 29ರಷ್ಟು ಮಂದಿ ಮಾತ್ರ. ಈ ಭಾಗದಲ್ಲಿ ಚುನಾವಣೆಯು ಮೊದಲ ಮೂರು ಹಂತದಲ್ಲಿ ಮುಕ್ತಾಯವಾಗಿದೆ.
ಕೇಂದ್ರಭಾಗದಲ್ಲಿಯೂ ಮುನ್ನಡೆ
ರಾಜಧಾನಿ ಲಕ್ನೋ, ಫರ್ರೂಕಾಬಾದ್ ಮತ್ತು ರಾಯ್ ಬರೇಲಿಯನ್ನು ಒಳಗೊಂಡ ಕೇಂದ್ರ ಉತ್ತರ ಪ್ರದೇಶದಲ್ಲಿ ಶೇ 46ರಷ್ಟು ಮಂದಿ ಮೈತ್ರಿಕೂಟದ ಪರವಾಗಿದ್ದರೆ, ಶೇ 33ರಷ್ಟು ಜನರಿಗೆ 'ಕಮಲ'ದ ಮೇಲೆ ಪ್ರೀತಿಯಿದೆ. ಇಲ್ಲಿ ಉಳಿದಿರುವ ಮೂರು ಹಂತಗಳಲ್ಲಿ ಚುನಾವಣೆ ನಡೆಯಬೇಕಿದೆ. ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಅವರ ಮತಗಳು ಒಡೆಯದಂತೆ ನೋಡಿಕೊಳ್ಳುವ ಸಲುವಾಗಿ ಮೈತ್ರಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಪೂರ್ವದಲ್ಲಿ ಬಿಜೆಪಿಯದ್ದೇ ಅಲೆ
ರಾಜ್ಯದ ಪೂರ್ವ ಭಾಗವು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುವ ವಾರಣಾಸಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೋರಕ್ಪುರ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿಗೆ ಶೇ 50ರಷ್ಟು ಬೆಂಬಲ ವ್ಯಕ್ತವಾಗಿದೆ. ಮೈತ್ರಿಪಕ್ಷಗಳಿಗೆ ಶೇ 36ರಷ್ಟು ಬೆಂಬಲವಿದೆ. 2018ರಲ್ಲಿ ನಡೆದ ಗೋರಕ್ಪುರ ಉಪ ಚುನಾವಣೆಯಲ್ಲಿ ಬಿಜೆಪಿಯು ಎಸ್ಪಿ-ಬಿಎಸ್ಪಿ ಮೈತ್ರಿ ಎದುರು ಸೋಲು ಕಂಡಿತ್ತು.
ಪರಿಣಾಮಕಾರಿಯಾಗದ ಪ್ರಿಯಾಂಕಾ
ಉತ್ತರ ಪ್ರದೇಶದ 80 ಸೀಟುಗಳ ಪೈಕಿ ಬಿಜೆಪಿ 71 ಸೀಟುಗಳನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಅಮೇಥಿ ಮತ್ತು ರಾಯ್ ಬರೇಲಿಗಳಲ್ಲಿ ಮಾತ್ರ ಗೆಲುವು ಕಂಡಿತ್ತು. ಚುನಾವಣೆಗೆ ಮುನ್ನವೇ ಪೂರ್ವ ಉತ್ತರ ಪ್ರದೇಶಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ಅವರನ್ನು ನೇಮಿಸಲಾಗಿತ್ತು. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಪ್ರಿಯಾಂಕಾ ಗಾಂಧಿ ಸತತ ಪ್ರವಾಸ ನಡೆಸಿ ಪ್ರಚಾರ ಮಾಡಿದ್ದರು. ಆದರೆ, ಇದು ಯಾವ ಪರಿಣಾಮವನ್ನೂ ಬೀರಿಲ್ಲ ಎಂದು ಸಮೀಕ್ಷೆ ತಿಳಿಸಿದೆ.