ರಾಮಮಂದಿರದ ಬಗ್ಗೆ ನಿಲುವು ಸ್ಪಷ್ಟಪಡಿಸಿ: ಕಾಂಗ್ರೆಸ್ಗೆ ನಿರ್ಮಲಾ ಸವಾಲು
ನವದೆಹಲಿ, ಏಪ್ರಿಲ್ 9: ಬಿಜೆಪಿಯು ಸೋಮವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ರಾಮಮಂದಿರದ ಪ್ರಸ್ತಾಪ ಅಗಿರುವುದನ್ನು ಟೀಕಿಸಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದ ನಿಲುವೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ಗೆ ಸವಾಲು ಹಾಕಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಸಲುವಾಗಿ ಆದಷ್ಟು ಶೀಘ್ರವೇ ಪ್ರಕರಣ ಬಗೆಹರಿಸಲು ಬಿಜೆಪಿ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಪ್ರಣಾಳಿಕೆ : ಮತ್ತೆ ರಾಮ ಮಂದಿರ ನಿರ್ಮಾಣದ ಸಂಕಲ್ಪ
ರಾಮ ಮಂದಿರ ವಿವಾದ ಇನ್ನೂ ಸುಪ್ರೀಂಕೋರ್ಟ್ನಲ್ಲಿದೆ ಎಂಬುದನ್ನು ಯಾರಾದರೂ ನಿರಾಕರಿಸಲು ಸಾಧ್ಯವೇ? ನಾವು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆವು. ಅಲ್ಲದೆ, ವಿವಾದಿತ ಸ್ಥಳದಿಂದ ಆಚೆ ಇರುವ ಭೂಮಿಯನ್ನು ಮುಕ್ತಿಗೊಳಿಸಿ ಉಳಿದವರಿಗೆ ಕೆಲಸ ಆರಂಭಿಸಲು ಅವಕಾಶ ನೀಡಿ ಎಂದೂ ಹೇಳಿದ್ದೇವೆ. ಈ ವಿಚಾರದಲ್ಲಿ ಪರಿಹಾರ ಮಾರ್ಗಗಳನ್ನು ಆದಷ್ಟು ಬೇಗನೆ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ ಎಂಬುದಾಗಿ ನಿರ್ಮಲಾ ಹೇಳಿದರು.
ನಾನು ಕಾಂಗ್ರೆಸ್ ಪಕ್ಷವನ್ನು ಕೇಳಲು ಬಯಸುತ್ತೇನೆ, ಈ ವಿವಾದಗಳ ಬಗ್ಗೆ ಅವರು ಏನು ಮಾಡಲು ಇಚ್ಛಿಸಿದ್ದಾರೆ? ಈ ಬಿಕ್ಕಟ್ಟು ಮುಂದುವರಿಯುವುದನ್ನು ಅವರು ಬಯಸಿದ್ದಾರೆಯೇ? ಅವರು ರಾಮಮಂದಿರದ ಬಗ್ಗೆ ಆಸಕ್ತಿ ಹೊಂದಿಲ್ಲ ಎನ್ನಲು ಇಚ್ಛಿಸಿದ್ದಾರೆಯೇ? ಕಾಂಗ್ರೆಸ್ನ ನಿಲುವು ಏನು? ಬೇರೆಯವರ ಪ್ರಣಾಳಿಕೆಯನ್ನು ಜುಮ್ಲಾ (ಸುಳ್ಳು) ಎನ್ನುವ ಬದಲು ದೇವಸ್ಥಾನದ ಪರವಾಗಿ ಅಥವಾ ವಿರುದ್ಧವಾಗಿ ಇದ್ದೇವೆಯೇ ಎಂಬುದನ್ನು ಬಹಿರಂಗಪಡಿಸಲಿ ಎಂದರು.