ಏಳನೇ ಹಂತದ ಚುನಾವಣೆ: ಮೋದಿ ನೇತೃತ್ವದ ಬಿಜೆಪಿಗೆ ಬೆಟ್ಟದಷ್ಟು ಸವಾಲು
ನವದೆಹಲಿ, ಮೇ 13: ಸುದೀರ್ಘ ಒಂದು ತಿಂಗಳಿನಿಂದ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆ ಕೊನೆಗೂ ಅಂತಿಮ ಹಂತದತ್ತ ತಲುಪುತ್ತಿದೆ. ಇನ್ನು ಆರು ದಿನಗಳಲ್ಲಿ (ಮೇ 19) ಏಳನೆಯ ಮತ್ತು ಕೊನೆಯ ಹಂತದ ಚುನಾವಣೆ ಮುಗಿದರೆ ನಾಲ್ಕು ದಿನಗಳ ಬಳಿಕ ದೇಶದ ಮುಂದಿನ ರಾಜಕೀಯ ಚಿತ್ರಣದ ಹೊಸ ಕಥನ ಪ್ರಾರಂಭವಾಗಲಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆರು ಹಂತದ ಚುನಾವಣೆಗಳಲ್ಲಿ 543 ಕ್ಷೇತ್ರಗಳ ಲೋಕಸಭೆಯಲ್ಲಿ 483 ಕ್ಷೇತ್ರಗಳ ಮತಗಳು ಮತಯಂತ್ರಗಳಲ್ಲಿ ಭದ್ರವಾಗಿ ಕುಳಿತಿವೆ. ಕೊನೆಯ ಹಂತದಲ್ಲಿ 59 ಕ್ಷೇತ್ರಗಳಿಗೆ ಮತದಾನ ಬಾಕಿ ಇದೆ. ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ವಿಪರೀತ ಹಣ ಹಂಚಿಕೆ ನಡೆದಿದೆ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಅಲ್ಲಿನ ಚುನಾವಣೆಯನ್ನು ರದ್ದುಗೊಳಿಸಿತ್ತು. ಅದಕ್ಕೆ ಚುನಾವಣೆ ದಿನಾಂಗ ನಿಗದಿಯಾಗಬೇಕಿದೆ.
ಏಳನೆಯ ಹಂತದ ಚುನಾವಣೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧಪಕ್ಷಗಳೆರಡಕ್ಕೂ ಅತ್ಯಂತ ಮಹತ್ವದ್ದೆನಿಸಿವೆ. ಮೇ 23ರ ಬಳಿಕ ಯಾರು ಸರ್ಕಾರ ರಚನೆ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನಿರ್ಧರಿಸುವಲ್ಲಿ ಈ 59 ಕ್ಷೇತ್ರಗಳು ಮಹತ್ತರ ಪಾತ್ರ ನಿರ್ವಹಿಸಲಿವೆ. ಮುಖ್ಯವಾಗಿ ಈ ಹಂತ ಪ್ರಧಾನಿ ನರೇಂದ್ರ ಮೋದಿ ಅವರ ಸಾಮರ್ಥ್ಯವನ್ನು ಪರೀಕ್ಷೆಗೆ ಹಚ್ಚಲಿದೆ.
ಕೊನೆಯ ಹಂತದಲ್ಲಿ ಉತ್ತರ ಪ್ರದೇಶದ 13 ಕ್ಷೇತ್ರಗಳು, ಪಂಜಾಬ್ನ ಎಲ್ಲ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9, ಬಿಹಾರದ 8, ಮಧ್ಯಪ್ರದೇಶದ 8, ಹಿಮಾಚಲ ಪ್ರದೇಶದ 4, ಜಾರ್ಖಂಡ್ 3 ಮತ್ತು ಚಂಡೀಗಡದ 1 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಓಬಿಸಿಯಿಂದಾಗಿ ಬಿಜೆಪಿಗೆ ಹೆಚ್ಚಿನ ಬಲ
2014ರಲ್ಲಿ ಉತ್ತರ ಮತ್ತು ಪೂರ್ವ ರಾಜ್ಯಗಳಲ್ಲಿ ಮೋದಿ ಅಲೆ ದೂಳೆಬ್ಬಿಸಿತ್ತು. ಈ 59 ಕ್ಷೇತ್ರಗಳಲ್ಲಿ ಬಿಜೆಪಿ 33ರಲ್ಲಿ ಜಯಭೇರಿ ಭಾರಿಸಿತ್ತು. ಬಿಜೆಪಿ 282 ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಪಡೆಯುವ ಮೂಲಕ 30 ವರ್ಷಗಳಲ್ಲಿಯೇ ಸಂಪೂರ್ಣ ಬಹುಮತ ಪಡೆದ ಏಕೈಕ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬಿಜೆಪಿ ಮಿತ್ರಪಕ್ಷಗಳ ಏಳು ಸೀಟುಗಳು ಇಲ್ಲಿ ಗೆಲ್ಲುವ ಮೂಲಕ ಎನ್ಡಿಎ ಬಲವನ್ನು ಒಟ್ಟು 40ಕ್ಕೆ ಏರಿಸಿದ್ದವು.
ಎದುರಾಳಿ ಪಂಗಡದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 9, ಆಮ್ ಆದ್ಮಿ ಪಕ್ಷ 4, ಕಾಂಗ್ರೆಸ್ 3, ಜಾರ್ಖಂಡ್ ಮುಕ್ತಿ ಮೋರ್ಚಾ 2 ಮತ್ತು ಜೆಡಿಯು ಒಂದು ಸೀಟುಗಳನ್ನು ಗೆದ್ದಿದ್ದವು.
2014ಕ್ಕೂ 2019ರ ರಾಜಕೀಯ ಸನ್ನಿವೇಶಕ್ಕೂ ಭಾರಿ ಬದಲಾವಣೆಗಳಾಗಿವೆ. ಅದರಲ್ಲಿಯೂ ಈಗ ಚುನಾವಣೆ ಬಾಕಿ ಉಳಿದಿರುವ ರಾಜ್ಯಗಳಲ್ಲಿ ರಾಜಕೀಯ ಮಗ್ಗಲುಗಳನ್ನು ಬದಲಿಸಿದೆ. ಆಗ ಪಂಜಾಬ್ನಲ್ಲಿ ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಅಧಿಕಾರದಲ್ಲಿತ್ತು. 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಅಧಿಕಾರವನ್ನು ಮರಳಿ ಪಡೆದುಕೊಂಡಿದೆ. ಇನ್ನು ಮಧ್ಯಪ್ರದೇಶದಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ, 2018ರಲ್ಲಿ ಅದನ್ನು ಕಾಂಗ್ರೆಸ್ಗೆ ಒಪ್ಪಿಸಿದೆ.
ಕಳೆದ ಸಂಸತ್ ಚುನಾವಣೆ ಬಳಿಕ ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಅಲ್ಲದೆ, ಜೆಡಿಯು ಮಹಾಘಟಬಂಧನದೊಂದಿಗಿನ ಮೈತ್ರಿ ಮುರಿದು ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚಿಸಿತ್ತು. ಈಗ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿರೋಧಿ ಅಲೆ ಎದುರಿಸುತ್ತಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಕೂಡ ಬಿಜೆಪಿಗೆ ಇರುವ ಸವಾಲು ಚಿಕ್ಕದ್ದೇನಲ್ಲ.
ಉತ್ತರ ಪ್ರದೇಶದಲ್ಲಿ ಬಲ ಕಳೆದುಕೊಂಡ ಬಿಜೆಪಿ
ಉತ್ತರ ಪ್ರದೇಶದ 13 ಕ್ಷೇತ್ರಗಳಲ್ಲಿ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಈ ಎಲ್ಲ ಕ್ಷೇತ್ರಗಳೂ ಕಳೆದ ಚುನಾವಣೆಯಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದವು. 12 ಕ್ಷೇತ್ರಗಳು ಬಿಜೆಪಿಯದ್ದಾಗಿದ್ದರೆ, ಒಂದು ಕ್ಷೇತ್ರದಲ್ಲಿ ಅದರ ಮಿತ್ರ ಪಕ್ಷ ಅಪ್ನಾ ದಳ್ ಗೆಲುವು ಸಾಧಿಸಿತ್ತು.
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಈ ಕ್ಷೇತ್ರಗಳಲ್ಲಿ ಹೆಚ್ಚು ಪೈಪೋಟಿ ನೀಡಿದ್ದು ಬಿಎಸ್ಪಿ. ಈ 13ರಲ್ಲಿ ಎಂಟರಲ್ಲಿ ಬಿಎಸ್ಪಿ ಎರಡನೆಯ ಸ್ಥಾನ ಪಡೆದುಕೊಂಡಿದ್ದರೆ, ಮೂರು ಕ್ಷೇತ್ರಗಳಲ್ಲಿ ಎಸ್ಪಿ ಎರಡನೆಯ ಸ್ಥಾನದಲ್ಲಿತ್ತು. ಕಾಂಗ್ರೆಸ್ ಮತ್ತು ಎಎಪಿ ತಲಾ ಒಂದು ಸ್ಥಾನಗಳಲ್ಲಿ ಬಿಜೆಪಿ ನಂತರದ ಸ್ಥಾನ ಪಡೆದುಕೊಂಡಿದ್ದವು.
ಈ ಬಾರಿ ಬಿಜೆಪಿಯ ಅಬ್ಬರವನ್ನು ತಡೆಯಲು ಎಸ್ಪಿ ಮತ್ತು ಬಿಎಸ್ಪಿ ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಮಿಗಿಲಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಗೋರಖ್ಪುರ ಮತ್ತು ಫುಲ್ಪುರ್ ಲೋಕಸಭಾ ಕ್ಷೇತ್ರಗಳು ಹಾಗೂ ಕೈರಾನಾ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಮಹಾ ಮೈತ್ರಿಕೂಟದ ಎದುರು ಬಿಜೆಪಿ ಮುಗ್ಗರಿಸಿತ್ತು.
ಇನ್ನು ಕಾಂಗ್ರೆಸ್ ಉತ್ತರ ಪ್ರದೇಶದ ಈ ಯಾವ ಕ್ಷೇತ್ರಗಳಲ್ಲಿಯೂ ಪ್ರಬಲ ಪೈಪೋಟಿ ನೀಡುವ ಸ್ಥಿತಿಯಲ್ಲಿಲ್ಲ. ಬಿಜೆಪಿಯ ಮತಗಳನ್ನು ಒಡೆಯುವ ಸಲುವಾಗಿಯಷ್ಟೇ ಅಭ್ಯರ್ಥಿಗಳನ್ನು ನಿಲ್ಲಿಸಿರುವುದಾಗಿ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದರು.
ಹೆಂಡತಿ ಬಿಟ್ಟ ಮೋದಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ: ಮಾಯಾವತಿ
ಬದಲಾದ ಮಿತ್ರಪಕ್ಷಗಳು
ಬಿಹಾರದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖಂಡ ಉಪೇಂದ್ರ ಖುಶ್ವಾಹ ಅವರು ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ಅವರೀಗ ಬಿಜೆಪಿಯೊಂದಿಗಿಲ್ಲ. ಬದಲಾಗಿ ಆರ್ಜೆಡಿ-ಕಾಂಗ್ರೆಸ್ ಮಹಾಮೈತ್ರಿಕೂಟದೊಂದಿಗೆ ಕೈಜೋಡಿಸಿದ್ದಾರೆ. ಇಲ್ಲಿನ ಏಳು ಸೀಟುಗಳಲ್ಲಿ ಐದು ಸೀಟುಗಳು ಬಿಜೆಪಿ-ಮಿತ್ರಪಕ್ಷಕ್ಕೆ ಸೇರಿದ್ದವು. ಜೆಡಿಯು ನಲಂದಾ ಕ್ಷೇತ್ರದಲ್ಲಿ ಗೆದ್ದಿತ್ತು.
ಆರ್ಎಲ್ಎಸ್ಪಿ ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಳೆದ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಜೆಡಿಯು ಈಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ.
ಮುಖ್ಯವಾಗಿ, ಪಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಗೆದ್ದಿದ್ದ ಶತ್ರುಘ್ನ ಸಿನ್ಹಾ, ಪಕ್ಷ ತೊರೆದು ಕಾಂಗ್ರೆಸ್ ಪಾಳಯಕ್ಕೆ ಜಿಗಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ 2.20 ಲಕ್ಷ ಮತ ಬಂದಿದ್ದರೆ, ಶತ್ರುಘ್ನ ಸಿನ್ಹಾ ಅವರಿಗಿಂತ 2.65 ಲಕ್ಷ ಹೆಚ್ಚು ಮತಗಳನ್ನು ಪಡೆದಿದ್ದರು. ಈ ಸಲ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಎದುರಾಳಿಯಾಗಿದ್ದಾರೆ.
ಪ್ರಧಾನಿ ವಿರುದ್ದ ಮತ್ತೆ ಖರ್ಗೆ ಏಕವಚನ ಪ್ರಯೋಗ: ಮೋದಿ ನೇಣು ಹಾಕೋತಾನಾ?
ಬಿಜೆಪಿ-ಕಾಂಗ್ರೆಸ್ ಯಾರದ್ದು ಮೆಲುಗೈ?
ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿರುವ ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ರುಚಿ ಸವಿದಿತ್ತು. ಆ ಚುನಾವಣೆ ವೇಳೆ ಇಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಆಡಳಿತ ಕಾಂಗ್ರೆಸ್ ಪಾಲಾಗಿದೆ.
ಬಿಜೆಪಿಗೆ ಈ ಬಾರಿಯ ಚುನಾವಣೆ ಸುಲಭದ್ದಲ್ಲ ಎಂಬುದಕ್ಕೆ 2015ರಲ್ಲಿ ಝಬುವಾ-ರತ್ಲಾಂ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯೇ ಸೂಚನೆಯಾಗಿತ್ತು. ಅದರಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದ್ದರು.
2013ರ ವಿಧಾನಸಭೆ ಚುನಾವಣೆಯಲ್ಲಿ ಮಾಲ್ವಾ-ನಿಮಾರ್ ಪ್ರದೇಶದ 66ರಲ್ಲಿ 56 ಸೀಟುಗಳು ಬಿಜೆಪಿಗೆ ಸಿಕ್ಕಿದ್ದವು. ಆದರೆ 2೦18ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಗೆದ್ದಿದ್ದು 21ರಲ್ಲಿ ಮಾತ್ರ. ಅದೇ ರೀತಿ ಕೇವಲ ಒಂಬತ್ತು ಸೀಟುಗಳಲ್ಲಿ ಗೆದ್ದಿದ್ದ ಕಾಂಗ್ರೆಸ್, ಅದರ ಬಲವನ್ನು 2018ರಲ್ಲಿ 35ಕ್ಕೆ ಏರಿಸಿಕೊಂಡಿತ್ತು.
ಈ ಪ್ರದೇಶವು ದೇಶದ ಜನಪ್ರಿಯ ವಾತಾವರಣವನ್ನು ಪ್ರತಿನಿಧಿಸುತ್ತದೆ ಎಂಬ ಮಾತಿದೆ. 2009ರಲ್ಲಿ ಕಾಂಗ್ರೆಸ್ ಎಂಟರಲ್ಲಿ ಆರು ಸೀಟುಗಳನ್ನು ಇಲ್ಲಿ ಗೆದ್ದಿತ್ತು. ಆಗ ಕೇಂದ್ರದಲ್ಲಿ ಸರ್ಕಾರ ರಚಿಸಿತ್ತು. ಬಿಜೆಪಿ ಎರಡು ಸೀಟುಗಳನ್ನು ಮಾತ್ರ ಗೆದ್ದಿತ್ತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇಲ್ಲಿನ ಆಡಳಿತ ವಿರೋಧಿ ಅಲೆಯನ್ನು ಗ್ರಹಿಸಿರುವ ಬಿಜೆಪಿ ಈ ಭಾಗದಲ್ಲಿ ಐವರು ಹಾಲಿ ಸಂಸದರ ಬದಲು ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ದೀದಿ ರಾಜ್ಯದಲ್ಲಿ ಅರಳಿತೇ ಕಮಲ
ಪಶ್ಚಿಮ ಬಂಗಾಳದ ಡುಂಡುಂ, ಬರಾಸತ್, ಬಸಿರ್ಹಾತ್, ಜಯನಗರ್, ಮಾತುರ್ಪುರ್, ಡೈಮಂಡ್ ಹಾರ್ಬರ್, ಕೋಲ್ಕತಾ ಉತ್ತರ, ಕೋಲ್ಕತಾ ದಕ್ಷಿಣ ಮತ್ತು ಜಾಧವಪುರಗಳಲ್ಲಿ ಚುನಾವಣೆ ನಡೆಯಲಿದೆ. ಈ ಒಂಬತ್ತೂ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಪ್ರಭಾವಳಿ ದಟ್ಟವಾಗಿದೆ.
ಕೋಲ್ಕತಾ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೆಯ ಸ್ಥಾನ ಪಡೆದುಕೊಂಡಿತ್ತು ಎನ್ನುವುದು ಗಮನಾರ್ಹ. 42 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಿರುಸಿನ ಪ್ರಚಾರ ನಡೆಸಿದೆ. 21 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿಯ ದೆಸೆ ಬದಲಾಗುವುದೇ ನೋಡಬೇಕು.
ಸಿಖ್ ರಾಜ್ಯದಲ್ಲಿ ಕಾಂಗ್ರೆಸ್ ಪಾರುಪತ್ಯ
ಪಂಜಾಬ್ ಮತ್ತು ಚಂಡೀಗಡದ ಎಲ್ಲ 13 ಕ್ಷೇತ್ರಗಳಿಗೂ ಕೊನೆಯ ಹಂತದಲ್ಲಿ ಚುನಾವಣೆ ನಡೆಯಲಿದೆ. 2014ರಲ್ಲಿ ಎನ್ಡಿಎ ಇಲ್ಲಿ ಆರು ಸೀಟುಗಳನ್ನು ಗೆದ್ದುಕೊಂಡಿತ್ತು. ಆ ಸಂದರ್ಭದಲ್ಲಿ ಅದು ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿತ್ತು. ಬಿಜೆಪಿಯ ಕಿರಣ್ ಖೇರ್ ಚಂಡೀಗಡ ಕ್ಷೇತ್ರದಿಂದ ಜಯಗಳಿಸಿದ್ದರು.
2017ರಲ್ಲಿ ಬಿಜೆಪಿ ಮೈತ್ರಿ ಸರ್ಕಾರವನ್ನು ಬಡಮೇಲು ಮಾಡಿ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಈಗ ಅದು ಲೋಕಸಭೆಗೆ ಹೆಚ್ಚಿನ ಸದಸ್ಯರನ್ನು ಕಳುಹಿಸುವ ಗುರಿ ಹೊಂದಿದೆ. ಎಎಪಿ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ, ಈ ಬಾರಿ ಸ್ಥಳೀಯ ಘಟಕದಲ್ಲಿ ಪಕ್ಷದಲ್ಲಿ ಕಿತ್ತಾಟ ಜೋರಾಗಿದೆ. ಅದು ಚುನಾವಣೆ ಮೇಲೆ ಪರಿಣಾಮ ಬೀರಬಹುದು.
ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್
ಹಿಮಾಚಲ ಪ್ರದೇಶದ ಎಲ್ಲ ನಾಲ್ಕು ಸ್ಥಾನಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿತ್ತು. ಆಗ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿತ್ತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಜಾರ್ಖಂಡ್ನಲ್ಲಿ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಬಿಜೆಪಿ ಒಂದರಲ್ಲಿ ಗೆದ್ದಿತ್ತು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ ಎರಡು ಸೀಟುಗಳನ್ನು ಗೆದ್ದುಕೊಂಡಿತ್ತು.