ಲೋಕಸಭೆ ಚುನಾವಣೆ 2019: ಮೇ 12ಕ್ಕೆ 6ನೇ ಹಂತದ ಮತದಾನ
ನವದೆಹಲಿ, ಮೇ 11: ನಾಳೆ (ಮೇ 12) ರಂದು ದೇಶದ ಏಳು ರಾಜ್ಯಗಳಲ್ಲಿ 59 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆ 2019 ರ ಆರನೇ ಹಂತದ ಮತದಾನ ನಡೆಯಲಿದೆ.
ಮೇ 12 ರಂದು ಉತ್ತರ ಪ್ರದೇಶದ 14 ಕ್ಷೇತ್ರ, ಹರಿಯಾಣದ 10 ಲೋಕಸಭಾ ಕ್ಷೇತ್ರ, ಪಶ್ಚಿಮ ಬಂಗಾಳ, ಬಿಹಾರ ಮಧ್ಯ ಪ್ರದೇಶದ ಎಂಟು ಕ್ಷೇತ್ರ, ದೆಹಲಿಯ ಏಳು ಮತ್ತು ಜಾರ್ಖಂಡ್ನ ನಾಲ್ಕು ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ.
ಈಗಾಗಲೇ ಐದು ಹಂತಗಳು ಮುಗಿದಿದ್ದು ಶೇ 70 ರಷ್ಟು ಮತದಾರರು ತಮ್ಮ ಆಯ್ಕೆಗೆ ಮತಚಲಾಯಿಸಿದ್ದಾರೆ, ಇನ್ನೆರಡು ಹಂತಗಳಲ್ಲಿ ಉಳಿದ 30% ಮತದಾರರು ಮತಚಲಾವಣೆ ಮಾಡಲಿದ್ದಾರೆ.
ಮಾಮೂಲಿನಂತೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ, ಜಾರ್ಖಂಡ್ ಮತ್ತು ಬಿಹಾರದ ಕೆಲವೆಡೆ ಭದ್ರತೆ ದೃಷ್ಠಿಯಿಂದ ನಾಲ್ಕು ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಲಿದೆ.
ನಾಳೆ ನಡೆಯಲಿರುವ 59 ಕ್ಷೇತ್ರಗಳ ಚುನಾವಣೆಯಲ್ಲಿ ಕೆಲವು ಮರುಮತದಾನವೂ ಇವೆ. ಒಟ್ಟು 169 ಮತಕೇಂದ್ರಗಳಲ್ಲಿ ನಾಳೆ ಮರುಮತದಾನ ನಡೆಯಲಿದೆ. ಈ ಮತಕೇಂದ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಮತಕೇಂದ್ರ ವಶಪಡಿಸಿಕೊಳ್ಳುವುದು, ಮತಯಂತ್ರಕ್ಕೆ ಹಾನಿ, ಹಿಂಸೆ ಮತ್ತಿತರೆ ಕಾರಣಗಳಿಂದ ಮತದಾನ ನ್ಯಾಯಯುತವಾಗಿ ಆಗಿಲ್ಲವೆಂದು ಆಯೋಗ ಹೇಳಿದೆ.
ನಾಳಿನ ಮತದಾನದಲ್ಲಿ ಬಹುತೇಕದ ಕಣ್ಣು ದೆಹಲಿಯ ಮೇಲಿದೆ. 'ದೆಹಲಿ ಗೆದ್ದವರು ದೇಶ ಆಳುತ್ತಾರೆ' ಎಂಬ ನಂಬಿಕೆ ಇರುವುದರಿಂದ ದೆಹಲಿಯ ಚುನಾವಣೆಯ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ. ಗೌತಮ್ ಗಂಭೀರ್, ಶೀಲಾ ದೀಕ್ಷಿತ್, ಬಾಕ್ಸರ್ ವಿಜಯೇಂದರ್ ಸಿಂಗ್, ಕೇಂದ್ರ ಮಂತ್ರಿ ಹರ್ಷ ವರ್ಧನ್, ಎಎಪಿಯ ಆತಿಶಿ ಇನ್ನೂ ಹಲವು ಖ್ಯಾತ ನಾಮರ ರಾಜಕೀಯ ಭವಿಷ್ಯ ನಾಳೆ ಇವಿಎಂಗಳಲ್ಲಿ ಭದ್ರವಾಗಲಿದೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮೇನಕಾ ಗಾಂಧಿ ಅವರುಗಳು ನಾಳಿನ ಮತದಾನದಲ್ಲಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ.
ಮಧ್ಯ ಪ್ರದೇಶದಲ್ಲಿ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್, ದಿಗ್ವಿಜಯ್ ಸಿಂಗ್ ಅವರುಗಳ ಭವಿಷ್ಯ ನಾಳೆ ಭದ್ರವಾಗಲಿದೆ. ಇದರ ಜೊತೆಗೆ ಜ್ಯೋತಿರಾದಿತ್ಯ ಸಿಂಧ್ಯಾ, ಕೇಂದ್ರ ಮಂತ್ರಿ ನರೇಂದ್ರ ಸಿಂಗ್ ತೋಮರ್ ಅವರ ಭವಿಷ್ಯವೂ ನಾಳೆ ಭದ್ರವಾಗಲಿದೆ.