ದಲಿತ-ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ
ಬೆಂಗಳೂರು, ಮೇ 23: ಕೇಂದ್ರ ಸರ್ಕಾರದ ವಿರುದ್ಧ ದಲಿತರು ಮತ್ತು ಅಲ್ಪಸಂಖ್ಯಾತರ ಆಕ್ರೋಶ ಈ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎನ್ನುವುದು ಸುಳ್ಳಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತ ಮುಸ್ಲಿಮರು ಇರುವ ಕ್ಷೇತ್ರಗಳಲ್ಲಿಯೇ ಬಿಜೆಪಿ ಭರ್ಜರಿ ಮುನ್ನಡೆ ಪಡೆದುಕೊಂಡಿದೆ.
ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ 49 ಕ್ಷೇತ್ರಗಳಲ್ಲಿ ಬಿಜೆಪಿ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಪ್ರದೇಶಗಳಲ್ಲಿ ಯುಪಿಎ ಕೇವಲ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ 47ರಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ ಕೇವಲ 14ರಲ್ಲಿ ಮುನ್ನಡೆ ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಹುಟ್ಟಿದ ಒಂದು ವರ್ಷದ ದಿನವೇ ಮಹಾಘಟಬಂಧನ್ ಅವಸಾನ!
ಮೀರತ್ನಲ್ಲಿ ದಲಿತರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬಿಜೆಪಿಯ ರಾಜೇಂದ್ರ ಅಗರವಾಲ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯು ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ವಿರೋಧಪಕ್ಷಗಳು ಸತತವಾಗಿ ಆರೋಪ ಮಾಡುತ್ತಾ ಬಂದಿದ್ದವು. ಅಲ್ಲದೆ, ಗೋಹತ್ಯಾ ನಿಷೇಧ, ಗೋರಕ್ಷಕರ ದಾಳಿ, ತ್ರಿವಳಿ ತಲಾಖ್ ನಿಷೇಧ ಮಸೂದೆ ಮುಂತಾದ ನಡೆಗಳು ಮುಸ್ಲಿಂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಅಸ್ತ್ರಗಳಾಗಿದ್ದವು.
ಉತ್ತರ ಪ್ರದೇಶದ ರಾಮಪುರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಸಮಾಜವಾದಿ ಪಕ್ಷದ ಅಜಂ ಖಾನ್ ವಿರುದ್ಧ ಮುಸ್ಲಿಮರು ಆಕ್ರೋಶಗೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ರಾಮಪುರ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬಿಜೆಪಿಗೆ ಅಡ್ಡಿಯಾಗಲಿಲ್ಲ ಆರೋಪಗಳು
ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಮುಂತಾದೆಡೆ ಗೋವುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಅವರು ಮೃತಪಟ್ಟ ಅನೇಕ ಘಟನೆಗಳು ವರದಿಯಾಗಿದ್ದವು. ಅಲ್ಲದೆ, ವಿವಿಧೆಡೆ ಹಿಂದೂ ಮುಸ್ಲಿಂ ವೈಷಮ್ಯ ಇನ್ನಷ್ಟು ಹೆಚ್ಚಾಗಿತ್ತು. ಇದೆಲ್ಲವೂ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ನೀಡಲಿವೆ ಎಂದು ಭಾವಿಸಲಾಗಿತ್ತು. ಮುಸ್ಲಿಮರು ಮತ್ತು ದಲಿತರಲ್ಲಿ ಬಿಜೆಪಿ ವಿರೋಧ ಮನೋಭಾವ ಮೂಡಿದೆ. ಹೀಗಾಗಿ ಅವರ ಮತಗಳು ಬಿಜೆಪಿ ವಿರುದ್ಧವಾಗಿಯೇ ಇರಲಿದೆ ಎಂದು ಭಾವಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಲೆಕ್ಕಾಚಾರಗಳು ಉಲ್ಟಾ ಆಗಿವೆ. ಮುಸ್ಲಿಂ, ದಲಿತ ಬಾಹುಳ್ಯದ ಪ್ರದೇಶಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ.
ಮುನ್ನಡೆಯಲ್ಲಿ ಬಿಜೆಪಿ; ಫಲಿತಾಂಶಕ್ಕೆ ಮುನ್ನವೇ ವಿಜಯೋತ್ಸವ
|
ಕಾಂಗ್ರೆಸ್ ಸ್ವತಃ ಕಾರಣ
ಕಾಂಗ್ರೆಸ್ ಹಿನ್ನಡೆಗೆ ಸ್ವತಃ ಕಾಂಗ್ರೆಸ್ ಕಾರಣವೇ ಹೊರತು ಬೇರಾರೂ ಅಲ್ಲ ಎಂದು ಅನೇಕರು ಟೀಕಿಸಿದ್ದಾರೆ. ಕಾಂಗ್ರೆಸ್ ದಲಿತರು ಮತ್ತು ಮುಸ್ಲಿಮರ ವಿಚಾರದಲ್ಲಿ ರಾಜಕೀಯ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯರೂ ಒಂದೇ ಎನ್ನುವ ಬದಲು ದೇಶದ ಸಂಪನ್ಮೂಲದಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಇದೆ ಎಂದು ಡಾ. ಮನಮೋಹನ್ ಸಿಂಗ್ ಹೇಳಿದ್ದರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ನ ಪರ್ಯಾಯವಾಗಿ ಬಿಜೆಪಿಯನ್ನು ಜನ ಕಂಡುಕೊಂಡಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.
ದಲಿತ ವಿರೋಧಿ ಎನ್ನಲು ಹೇಗೆ ಸಾಧ್ಯ?
ಬಿಜೆಪಿಯು ದಲಿತ ಮತ್ತು ಮುಸ್ಲಿಂ ವಿರೋಧಿ ಎಂದು ಹೇಗೆ ಹೇಳಲು ಸಾಧ್ಯ? ಭಾರತ ಈ ಐದು ವರ್ಷಗಳಲ್ಲಿ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಮುಸ್ಲಿಮರು ಮತ್ತು ದಲಿತರು ಮತಚಲಾಯಿಸಿದ್ದರಿಂದಲೇ ಬಿಜೆಪಿ ಇಷ್ಟು ದೊಡ್ಡ ಲೀಡ್ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಲಿತರ ಮತಕ್ಕೆ ಬೇಸರ
ನಾವು ಮಾತನಾಡುವ ಜಾತಿ ರಾಜಕಾರಣ ಯಾವುದು? ಬಿಜೆಪಿ ನಿಜಕ್ಕೂ ದಲಿತವಿರೋಧಿ. ಅಲ್ಲದೆ ಅದಕ್ಕೆ ಮೀಸಲಾತಿಯಲ್ಲಿ ನಂಬಿಕೆ ಇಲ್ಲ. ನಾವಿಲ್ಲಿ ಯಾವ ಜಾತಿ ರಾಜಕೀಯವನ್ನು ನೋಡುತ್ತಿದ್ದೇವೆ ಎಂದು ಕೆಲವರು ಬಿಜೆಪಿ ಮುನ್ನಡೆ ಹಾಗೂ ಅವರಿಗೆ ದಲಿತ ಮತಗಳು ಚಲಾವಣೆಯಾದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.