ಎರಡು ದಶಕಗಳ ಹಿಂದೆ ವಾಜಪೇಯಿ ಆಡಿದ ಮಾತು ನಿಜವಾಯಿತು
Recommended Video
ಬೆಂಗಳೂರು, ಮೇ 23: ಸತತ ಎರಡನೆಯ ಬಾರಿಗೆ ದೇಶದಲ್ಲಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ಭರ್ಜರಿ ಬಹುಮತದೊಂದಿಗೆ ಸತತ ಎರಡನೆಯ ಬಾರಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು 22 ವರ್ಷದ ಹಿಂದೆ ಸಂಸತ್ನಲ್ಲಿ ಕಾಂಗ್ರೆಸ್ ಸಂಸದರ ಎದುರು ಎದೆಯೊಡ್ಡಿ ಆಡಿದ್ದ ವೀರಾವೇಶದ ಮಾತುಗಳು ನಿಜವಾಗಿವೆ.
ಗ್ಯಾಲರಿ: ಭರ್ಜರಿ ಜಯದೊಂದಿಗೆ ಸಂಭ್ರಮಾಚರಣೆಯಲ್ಲಿ ಬಿಜೆಪಿ
2014ರ ಲೋಕಸಭೆ ಚುನಾವಣೆಯಲ್ಲಿ 44 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಅದನ್ನು 50ಕ್ಕೆ ಹೆಚ್ಚಿಸಿಕೊಂಡಿದ್ದೇ ಸಾಧನೆಯಾಗಿದೆ. ಆದರೆ, ಅತ್ತ ಕಳೆದ ಚುನಾವಣೆಯಲ್ಲಿ 282 ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಅದನ್ನು 305ಕ್ಕೆ ಹೆಚ್ಚಿಸಿಕೊಂಡಿದೆ. ಇನ್ನು ಎನ್ಡಿಎ ಮೈತ್ರಿಪಕ್ಷಗಳನ್ನು ಸೇರಿಸಿಕೊಂಡರೆ ಇದರ ಸಂಖ್ಯೆ 350ಕ್ಕೆ ತಲುಪುತ್ತದೆ.
ದೇಶದ ಅತ್ಯಂತ ಪುರಾತನ ಪಕ್ಷ ಎನಿಸಿರುವ ಕಾಂಗ್ರೆಸ್ ಪುನಃ ಹೀನಾಯ ಸೋಲು ಕಂಡಿದೆ. ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಮತ್ತು ವಿರೋಧಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಬಿಜೆಪಿಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸಪಟ್ಟಿದ್ದವು. ರಫೇಲ್ ಡೀಲ್ ವಿವಾದ, ನಿರುದ್ಯೋಗ, ಅಪನಗದೀಕರಣ, ರೈತರ ಸಮಸ್ಯೆ ಹೀಗೆ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕಸರತ್ತುಗಳು ವಿಫಲವಾಗಿವೆ.
'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು
ಕಾಂಗ್ರೆಸ್ನ ಈ ಹೀನಾಯ ಸ್ಥಿತಿ 1997ರಲ್ಲಿ ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಆಡಿದ ಮಾತುಗಳ ಪ್ರತಿಬಿಂಬದಂತಿದೆ.
ವಾಜಪೇಯಿಯನ್ನು ಅಣಕಿಸಿದ್ದ ಕಾಂಗ್ರೆಸ್
1996ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 161 ಸೀಟುಗಳನ್ನು ಗೆದ್ದಿತ್ತು. ಅತಿ ದೊಡ್ಡ ಪಕ್ಷವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಲಾಗಿತ್ತು. ಇದು ಕೇಂದ್ರದಲ್ಲಿ ಬಿಜೆಪಿಯ ಮೊಟ್ಟಮೊದಲ ಸರ್ಕಾರವಾಗಿತ್ತು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಕೇವಲ 13 ದಿನಗಳಲ್ಲಿ ಸರ್ಕಾರ ಪತನಗೊಂಡಿತ್ತು. ಆಗ ಬಿಜೆಪಿ ಸಂಸದರ ಸಂಖ್ಯೆಯನ್ನು ಕಂಡು ಕಾಂಗ್ರೆಸ್ ಅಣಕವಾಡಿತ್ತು. ಒಬ್ಬ ಸಂಸದನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಗೇಲಿ ಮಾಡಿತ್ತು.
ಅತ್ಯಪರೂಪದ ರಾಜಕಾರಣಿ ಅಟಲ್ ಜೀ ಅವರ ಅಪರೂಪದ ಚಿತ್ರಗಳು
ನನ್ನ ಮಾತು ಬರೆದಿಟ್ಟುಕೊಳ್ಳಿ
1997ರಲ್ಲಿ ಸಂಸತ್ನಲ್ಲಿ ಮಾತನಾಡಿದ್ದ ಅಟಲ್ ಬಿಹಾರಿ ವಾಜಪೇಯಿ, 'ನನ್ನ ಮಾತು ಬರೆದಿಟ್ಟುಕೊಳ್ಳಿ. ಇಂದು ನೀವು (ಕಾಂಗ್ರೆಸ್) ಕಡಿಮೆ ಸಂಸದ/ಶಾಸಕರನ್ನು ಹೊಂದಿರುವುದಕ್ಕೆ ನಮ್ಮತ್ತ ನೋಡಿ ನಗುತ್ತಿದ್ದೀರಿ. ಆದರೆ, ಭಾರತದಾದ್ಯಂತ ನಾವು ಅತ್ಯಧಿಕ ಸಂಖ್ಯೆಯ ಸಂಸದರು/ಶಾಸಕರ ಮೂಲಕ ನಮ್ಮದೇ ಸರ್ಕಾರ ರಚಿಸುವ ದಿನ ಬರುತ್ತದೆ. ಆ ದಿನ ಈ ದೇಶ ನಿಮ್ಮತ್ತ ನೋಡಿ ನಗುತ್ತಾರೆ. ನಿಮ್ಮ ಬಗ್ಗೆ ಹಾಸ್ಯ ಮಾಡುತ್ತಾರೆ' ಎಂದಿದ್ದರು.
40 ತಿಂಗಳೂ ಇರಲಾರರು
ಹೊರಗಿನ ಶಕ್ತಿಯಾಗಿ ಇರುವುದು ಕಾಂಗ್ರೆಸ್ಗೆ ಬಹಳ ಕಷ್ಟ. ಅವರು ಮರಳಿ ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡುತ್ತಾರೆ. ನಾವು ಹಾಗಲ್ಲ. ನಾವು ವಿರೋಧಪಕ್ಷದಲ್ಲಿ 40 ವರ್ಷಗಳನ್ನು ಕಳೆದಿದ್ದೇವೆ. ಅಗತ್ಯಬಿದ್ದರೆ ಇನ್ನೂ 40 ವರ್ಷ ಇರುತ್ತೇವೆ. ಆದರೆ, ಕಾಂಗ್ರೆಸ್ ಪಕ್ಷ ಹಾಗಲ್ಲ. ಅಧಿಕಾರವನ್ನು ಮರುವಶಪಡಿಸಿಕೊಳ್ಳುವ ಪ್ರಯತ್ನಿಸಲು ರಾಜಕೀಯ ಆಟವಾಡದೆ ಕಾಂಗ್ರೆಸ್ 40 ತಿಂಗಳು ಕೂಡ ಇರಲಾರದು. ಏಕೆಂದರೆ ಅಧಿಕಾರವಿಲ್ಲದಿದ್ದರೆ ಅವರು ಏನೂ ಅಲ್ಲ ಎಂದು ವಾಜಪೇಯಿ ಹೇಳಿದ್ದರು.
2025ರವರೆಗೂ ಬರುವುದಿಲ್ಲ
2014ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಾತನಾಡಿದ್ದ ನರೇಂದ್ರ ಮೋದಿ, 2025ರವರೆಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ನನ್ನ ಮಾತು ನೆನಪಿಟ್ಟುಕೊಳ್ಳಿ ಎಂದಿದ್ದರು. ಈ ದೇಶದ ಜನರು ಸಾಕಪ್ಪಾ ಸಾಕು ಎಂದು ಘೋಷಿಸುವುದು ಹಾಗೂ ಕಾಂಗ್ರೆಸ್ ಆಡಳಿತಕ್ಕೆ ಗುಡ್ಬೈ ಹೇಳುವುದು ಮುಖ್ಯವಾಗಿದೆ ಎಂದು ಹೇಳಿದ್ದರು.
ಈ ದೇಶ ಜಾತ್ಯತೀತವಾಗಿದೆ
'ಈ ದೇಶ ಜಾತ್ಯತೀತವಾದುದು. ಇದು ಎಂದೆಂದಿಗೂ ಜಾತ್ಯತೀತವಾಗಿ ಇರಲಿದೆ. ಮುಂದೆಯೂ ಹೀಗೆಯೇ ಮುಂದುವರಿಯಲಿದೆ. ಇದರ ಬಗ್ಗೆ ಜನರು ಇಲ್ಲಿ ಚರ್ಚಿಸಬೇಕು ಎನ್ನುವುದು ವಿಷಯವಲ್ಲ. ಇದು ದೇಶದ ಸ್ವಭಾವ. ಇದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಇದರ ಭಾಗವಾಗಿರುವ ಬಿಜೆಪಿಗೆ ದೇಶದ ಜಾತ್ಯತೀಯ ಗುಣವನ್ನು ಬದಲಿಸುವ ಉದ್ದೇಶವಿಲ್ಲ ಮತ್ತು ಯಾವುದೇ ಪ್ರಯತ್ನವನ್ನೂ ನಡೆಸುವುದಿಲ್ಲ' ಎಂದು ವಾಜಪೇಯಿ ಹೇಳಿದ್ದರು.