ನರೇಂದ್ರ ಮೋದಿ-ಅಮಿತ್ ಶಾ ಜೋಡಿಯನ್ನು ಶ್ಲಾಘಿಸಿದ ಓಮರ್ ಅಬ್ದುಲ್ಲಾ
ಶ್ರೀನಗರ, ಮೇ 23 : ಎಕ್ಸಿಟ್ ಪೋಲ್ ಫಲಿತಾಂಶ ನಿಜವಾಗಿದೆ. ಅದ್ಭುತ ಸಾಧನೆ ತೋರಿದ್ದಕ್ಕಾಗಿ ಬಿಜೆಪಿ ಮತ್ತು ಎನ್ಡಿಎಗೆ ಶುಭಾಶಯ ಕೋರುವುದು ಬಿಟ್ಟು ಬೇರೇನೂ ಉಳಿದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಬಿಜೆಪಿಯನ್ನು ಶ್ಲಾಘಿಸಿದ್ದಾರೆ.
ಹುಟ್ಟಿದ ಒಂದು ವರ್ಷದ ದಿನವೇ ಮಹಾಘಟಬಂಧನ್ ಅವಸಾನ!
ಲೋಕಸಭೆ ಚುನಾವಣೆಯ ಸಂಪೂರ್ಣ ಫಲಿತಾಂಶ ಇನ್ನೂ ಬಂದಿಲ್ಲವಾದರೂ, ಈಗಿರುವ ಟ್ರೆಂಡ್ ನೋಡುತ್ತಿದ್ದರೆ, ಚುನಾವಣೋತ್ತರ ಸಮೀಕ್ಷೆಗಳು ನುಡಿದಂತೆ, ಫಲಿತಾಂಶ ಹೆಚ್ಚೂಕಡಿಮೆ ನಿಜವಾಗಿದೆ. ಎಕ್ಸಿಟ್ ಪೋಲ್ ಫಲಿತಾಂಶ ಸಂಪೂರ್ಣ ಉಲ್ಟಾಪುಲ್ಟಾ ಆಗುತ್ತದೆ ಎಂದಿದ್ದ ಕಾಂಗ್ರೆಸ್ ಅನಿಸಿಕೆ ಸಂಪೂರ್ಣ ಸುಳ್ಳಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸಾಬಿಬ್ ಮತ್ತು ಅಮಿತ್ ಶಾ ಅವರಿಗೆ ಈ ಅಭೂತಪೂರ್ವ ಗೆಲುವಿನ ಪೂರ್ತಿ ಶ್ರೇಯಸ್ಸು ಹೋಗಬೇಕು. ಅವರಿಬ್ಬರೂ ಒಟ್ಟಿಗೆ ಗೆಲ್ಲಬಲ್ಲಂಥ ಮೈತ್ರಿ ಮಾಡಿಕೊಂಡಿದ್ದರು ಮತ್ತು ಅತ್ಯಂತ ವೃತ್ತಿಪರತೆಯಿಂದ ಪ್ರಚಾರ ಮಾಡಿದ್ದರು. ಮುಂದಿನ ಐದು ವರ್ಷ ಚೆನ್ನಾಗಿ ಆಡಳಿತ ನೀಡಿ ಎಂದು ಓಮರ್ ಅಬ್ದುಲ್ಲಾ ಅವರು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದಾರೆ.
So the exit polls were correct. All that’s left is to congratulate the BJP & NDA for a stellar performance. Credit where credit is due PM Modi Sahib & Mr Amit Shah put together a winning alliance & a very professional campaign. Bring on the next five years.
— Omar Abdullah (@OmarAbdullah) May 23, 2019
ನರೇಂದ್ರ ಮೋದಿ ಮತ್ತು ಅವರ ಸರಕಾರದ ಟೀಕಾಕಾರರಲ್ಲಿ ಮೊದಲಿಗರಾಗಿದ್ದ ಓಮರ್ ಅಬ್ದುಲ್ಲಾ ಅವರು, ತಮ್ಮ ಕಹಿ ಅನಿಸಿಕೆಗಳನ್ನೆಲ್ಲಾ ಬದಿಗಿಟ್ಟು, ಉತ್ತಮ ಸಾಧನೆ ತೋರಿರುವ ನರೇಂದ್ರ ಮೋದಿಯವರ ಬೆನ್ನು ತಟ್ಟಿದ್ದಾರೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ.
ಪುಲ್ವಾಮಾ ದಾಳಿ ನಡೆದ ನಂತರ, ಬಾಲಕೋಟ್ ನಲ್ಲಿ ಪಾಕ್ ಉಗ್ರರ ಮೇಲೆ ಏರ್ ಸ್ಟ್ರೈಕ್ ಆದ ನಂತರ, ಸಂವಿಧಾನದ ಅನುಚ್ಛೇದ 370 ಅನ್ನು ತೆಗೆದುಹಾಕುವುದಾಗಿ ನರೇಂದ್ರ ಮೋದಿ ಹೇಳಿದ್ದ ನಂತರ ಓಮರ್ ಅಬ್ದುಲ್ಲಾ ಅವರು ಕೇಂದ್ರದ ವಿರುದ್ಧ ತಿರುಗಿಬಿದ್ದಿದ್ದರು ಮತ್ತು ಟೀಕಾಪ್ರಹಾರ ಮಾಡಿದ್ದರು.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಅವರ ಈ ನಡೆಗೆ, ಟ್ವಿಟ್ಟರ್ ನಲ್ಲಿಯೂ ಶ್ಲಾಘನೆ ಕಂಡುಬಂದಿದೆ. ಅತ್ಯಂತ ಪ್ರಾಮಾಣಿಕತೆಯಿಂದ ವಿರೋಧಿಗಳನ್ನು ಶ್ಲಾಘಿಸುವವರಲ್ಲಿ ನೀವು ಮೊದಲಿಗರು. ಯಾವ ರಾಜಕಾರಣಿ ವಿನಮ್ರರಾಗಿರುತ್ತಾರೋ ಅಂಥವರನ್ನು, ಗಲಾಟೆ ಬಯಸದ ಇಂದಿನ ಯುವಪೀಳಿಗೆ ಮೆಚ್ಚಿಕೊಳ್ಳುತ್ತದೆ ಎಂದು ಓಮರ್ ಅವರನ್ನು ಟ್ವಿಟ್ಟಿಗರೋರ್ವರು ಶ್ಲಾಘಿಸಿದ್ದಾರೆ.
ನೀವು ರಾಹುಲ್ ಗಾಂಧಿ ಅವರಿಗಿಂತ ಉತ್ತಮ ನಾಯಕ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಆಡಳಿತದಲ್ಲಿ ನಿಮ್ಮಂಥ ನಾಯಕರ ಅವಶ್ಯಕತೆಯಿದೆ. ನೀವು ಕೂಡ ಎನ್ಡಿಎ ಜೊತೆ ಸೇರಿಕೊಂಡು ಉತ್ತಮ ಆಡಳಿತ ನೀಡಿ. ಭಾರತಕ್ಕೆ ನಿಮ್ಮಂಥ ಉತ್ತಮ ನಾಯಕರ ಅವಶ್ಯಕತೆಯಿದೆ ಎಂದು ಹಲವಾರು ಜನರು ಅವರ ಮಾತನ್ನು ಮೆಚ್ಚಿಕೊಂಡಿದ್ದಾರೆ.