ಬಿಜೆಪಿ ವಿರುದ್ಧ ನೇರಾನೇರ ಸ್ಪರ್ಧೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್
ಭಾರತೀಯ ಜನತಾ ಪಕ್ಷವನ್ನು ಕಿತ್ತುಬಿಸಾಡಿ ಅಧಿಕಾರ ಸ್ಥಾಪಿಸುವ ಹಗಲು ಕನಸು ಕಾಣುತ್ತಿದ್ದ ಕಾಂಗ್ರೆಸ್, ಇಡೀ ದೇಶದಾದ್ಯಂತ ಗೆಲ್ಲುತ್ತಿರುವ 50ರ ಆಸುಪಾಸಿನಲ್ಲಿ ಮಾತ್ರ. ಆದರೆ, ತನ್ನ ಬದ್ಧ ಎದುರಾಳಿ ಬಿಜೆಪಿ ವಿರುದ್ಧ ಯಾವ ರೀತಿಯ ಹೀನಾಯ ಸೋಲು ಕಾಣುತ್ತಿದೆಯೆಂದರೆ, ಬಿಜೆಪಿ ವಿರುದ್ಧ ಇದ್ದ ನೇರಾನೇರ ಸ್ಪರ್ಧೆಯಲ್ಲೆಲ್ಲ ಸೋತು ಸುಣ್ಣವಾಗಿದೆ.
ಸುಮಾರು 6 ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. 188 ಸೀಟುಗಳಲ್ಲಿ 174 ಸೀಟುಗಳನ್ನು ಭಾರತೀಯ ಜನತಾ ಪಕ್ಷ ಕಬಳಸಿದೆ. ಉಳಿದವು ಮಾತ್ರ ಕಾಂಗ್ರೆಸ್ ಪಾಲಾಗಿವೆ. ಇದು ಕಾಂಗ್ರೆಸ್ ತನ್ನನ್ನು ತಾನು ಸಂಪೂರ್ಣವಾಗಿ ಪರಾಮರ್ಶಿಸುವ ಸಮಯ. ದೇಶದಲ್ಲಿ ನಡೆದ ಅತೀದೊಡ್ಡ ಚುನಾವಣೆಯಲ್ಲಿಯೇ ಸೋತಿರುವುದು ಅತಿ ಪುರಾತನ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಇಂಥ ಅಭೂತಪೂರ್ವ ಗೆಲುವನ್ನು ಭಾರತೀಯ ಜನತಾ ಪಕ್ಷವೂ ನಿರೀಕ್ಷಿಸಿರಲಿಲ್ಲ, ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ ಕೂಡ ಇಂಥ ಸೋಲನ್ನು ನಿರೀಕ್ಷಿಸಿರಲಿಲ್ಲ. 543ರಲ್ಲಿ ಚುನಾವಣೆ ನಡೆದ 542 ಕ್ಷೇತ್ರಗಳಲ್ಲಿ (ವೆಲ್ಲೋರ್ ಚುನಾವಣೆ ಕ್ಯಾನ್ಸಲ್ ಆಗಿದೆ) ಬಿಜೆಪಿ ಏಕಾಂಗಿಯಾಗಿ 300ರ ಗಡಿ ದಾಟಿ ಐತಿಹಾಸಿಕ ಗೆಲುವು ದಾಖಲಿಸಿದೆ. ಎನ್ಡಿಎ ಜೊತೆ ಜಂಟಿಯಾಗಿ 355 ಸೀಟುಗಳನ್ನು ಕಬಳಿಸಿದೆ. ಇನ್ನು ಯುಪಿಎ ಮತ್ತು ಅಂಗ ಪಕ್ಷಗಳು ಗೆದ್ದಿದ್ದು ಕೇವಲ 90 ಮಾತ್ರ. 97 ಕ್ಷೇತ್ರಗಳು ಇತರ ಪಕ್ಷಗಳ ಪಾಲಾಗಿವೆ.
ಮೋದಿ ಅಲೆ ಇಲ್ಲವೇ ಇಲ್ಲ ಎನ್ನುತ್ತಿದ್ದುರವ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. 2014ರ ಲೋಕಸಭಾ ಚುನಾವಣೆಗಿಂತ ಉತ್ತಮ ಸಾಧನೆಯನ್ನು ಬಿಜೆಪಿ ಮಾಡಿದೆ. ದೇಶದೆಲ್ಲೆಲ್ಲೂ ಕೇಸರಿ ಬಾವುಟಗಳು ಧೂಳೆಬ್ಬಿಸಿವೆ, ಪಟಾಕಿಗಳು ಕಿವಿಗಡಚಿಕ್ಕುವಂತೆ ಆರ್ಭಟಿಸುತ್ತಿವೆ, ಕೇಸರಿ ಮೋತಿಚೂರ್ ಲಾಡು ದೇಶದ ಜನರ ಬಾಯಿ ಸಿಹಿ ಮಾಡಿದೆ. ಕಾಂಗ್ರೆಸ್ ಮಾತ್ರ ಕರೆಂಟ್ ಹೊಡೆದಿರುವವರ ಹಾಗೆ ತಣ್ಣಗೆ ಕುಳಿತಿದೆ.
ನರೇಂದ್ರ ಮೋದಿ ಮತ್ತೆ ಗೆದ್ದಿದ್ದೇಕೆ? 5 ಕಾರಣಗಳು
ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಈ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆ ಎಂದು ಮೇಲ್ನೋಟಕ್ಕೆ ತಿಳಿದುಬಂದರೂ, ಇಲ್ಲಿ ಸ್ಪರ್ಧೆ ಇದ್ದಿದ್ದು ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ನಡುವೆ. ಇಲ್ಲಿ ಯಾರು ಯಾರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ, ಮೋದಿಯೆದಿರುವ ರಾಹುಲ್ ಮಂಡಿಯೂರಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಗುಜರಾತ್ ನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್
ಗುಜರಾತ್ ನಲ್ಲಿ ಇರುವ 26 ಕ್ಷೇತ್ರಗಳೆಲ್ಲವನ್ನೂ ಭಾರತೀಯ ಜನತಾ ಪಕ್ಷ ಬಾಚಿಕೊಂಡು ಕಾಂಗ್ರೆಸ್ಸಿಗೆ ಬಿಗ್ ಬೋಂಡಾವನ್ನು ಕಾಣಿಕೆಯಾಗಿ ನೀಡಿದೆ. ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ್ದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಾದರೂ ಉತ್ತಮ ಸಾಧನೆ ತೋರುತ್ತದೆಂದು ನಿರೀಕ್ಷಿಸಲಾಗಿತ್ತು. 2014ರಲ್ಲಿ ಕೂಡ ಇಂಥದೇ ಕಳಪೆ ಪ್ರದರ್ಶನವನ್ನು ಕಾಂಗ್ರೆಸ್ ಮಾಡಿತ್ತು. ಅಮಿತ್ ಶಾ ಮತ್ತು ನರೇಂದ್ರ ಮೋದಿಯೆದಿರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ನಡೆಸಿದ ಹೋರಾಟ ಯಾವುದೇ ಫಲ ನೀಡಿಲ್ಲ.
ರಾಜಸ್ಥಾನದಲ್ಲಿ ಬಿಜೆಪಿಗೆ ರಾಜಮರ್ಯಾದೆ
ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಕನಿಷ್ಠಪಕ್ಷ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ, ಇರುವ 25 ಕ್ಷೇತ್ರಗಳಲ್ಲಿ ಬಿಜೆಪಿ 24 ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರೆ, ಕಾಂಗ್ರೆಸ್ ಏದುಸಿರು ಬಿಡುತ್ತ ಗೆದ್ದಿರುವುದು ಒಂದೇ ಸೀಟು. 2014ರಲ್ಲಿ ಭಾರತೀಯ ಜನತಾ ಪಕ್ಷ ಎಲ್ಲ 25 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಇದರಿಂದ ಲೋಕಸಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಯಾವ ರೀತಿಯಲ್ಲೂ ಸಮವಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಸರ್ವಶ್ರೇಯ ನರೇಂದ್ರ ಮೋದಿಯವರಿಗೇ ಸಲ್ಲಬೇಕು.
ಲೋಕ ಚುನಾವಣೆ ಸೋಲಿನ ಬಗ್ಗೆ ರಾಹುಲ್ ಹೇಳಿದ್ದೇನು?
ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಒಲಿಯದ ದೇವರು
ಮಧ್ಯ ಪ್ರದೇಶದಲ್ಲಿ ರಾಜಸ್ಥಾನಕ್ಕಿಂತ ಸ್ಥಿತಿ ಭಿನ್ನವಾಗಿಲ್ಲ. 29 ಕ್ಷೇತ್ರಗಳಲ್ಲಿ ಬಿಜೆಪಿ 28 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಗಹಗಹಿಸಿ ನಕ್ಕಿದೆ. ಕಮಲ್ ನಾಥ್, ದಿಗ್ವಿಜಯ್ ಸಿಂಗ್, ಜ್ಯೋತಿರಾಧಿತ್ಯ ಸಿಂಧಿಯಾರಂಧ ದಿಗ್ಗಜ ನಾಯಕರಿದ್ದರೂ, ರಾಹುಲ್ ಗಾಂಧಿ ಸೇರಿ ಎಲ್ಲ ನಾಯಕರು ಗುಡಿಗುಡಿ ಎಡತಾಕಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ನಾಯಕರ ಟೆಂಪಲ್ ರನ್ ಫಲ ನೀಡಿಲ್ಲ. ಕಾಂಗ್ರೆಸ್ ನಾಯಕರು ಮಾಡಿದ ಹೋಮಹವನ ಕೂಡ ಕೈಹಿಡಿದಿಲ್ಲ. ಬಿಜೆಪಿ ಇಲ್ಲಿ ಕಾಂಗ್ರೆಸ್ಸನ್ನು ಯಾವ ಪರಿ ಸದೆಬಡಿದೆಯೆಂದರೆ, ರಾಜ್ಯ ಸರಕಾರ ಕೂಡ ಅಲುಗಾಡುವಂತಾಗಿದೆ. 2014ರಲ್ಲಿ 27 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈಗ ಇನ್ನೆರಡು ಸೀಟುಗಳನ್ನು ಹೆಚ್ಚಿಸಿಕೊಂಡಿದೆ.
ಛತ್ತೀಸ್ ಗಢದಲ್ಲಿ ಸೇಡು ತೀರಿಸಿಕೊಂಡ ಬಿಜೆಪಿ
ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆದ ಸೋಲಿನ ಅವಮಾನದ ಸೇಡನ್ನು ಭಾರತೀಯ ಜನತಾ ಪಕ್ಷ ಲೋಕಸಭೆಯಲ್ಲಿ ತೀರಿಸಿಕೊಂಡಿದೆ. 11 ಕ್ಷೇತ್ರಗಳಲ್ಲಿ 9 ಸೀಟುಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ ಕೇವಲ 1 ಸೀಟ್ ಮಾತ್ರ ಗೆದ್ದಿದೆ. 2014ರಲ್ಲಿ ಕೂಡ ಭಾರತೀಯ ಜನತಾ ಪಕ್ಷ 11ರಲ್ಲಿ 10 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆಗ ಕೂಡ ಕಾಂಗ್ರೆಸ್ 1 ಸೀಟಿಗೆ ಮಾತ್ರ ತೃಪ್ತಿ ಪಟ್ಟುಕೊಂಡಿತ್ತು.
ಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳು
ಉತ್ತರಾಖಂಡ್ ನಲ್ಲಿ ಅರಳಿದ ಕಮಲ
ಉತ್ತರಾಖಂಡ್ ದಲ್ಲಿ ಕೂಡ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಇಲ್ಲಿ ಕಮಲ ಸಂಪೂರ್ಣವಾಗಿ ಅರಳಿದ್ದು, ರಾಜ್ಯದ ಜನರು 'ಕೈ'ಗೆ ಬರೆ ಹಾಕಿದ್ದಾರೆ. ಇರುವ ಎಲ್ಲ 5 ಕ್ಷೇತ್ರಗಳನ್ನು ಭಾರತೀಯ ಜನತಾ ಪಕ್ಷ ತನ್ನ ಜೋಳಿಗೆಗೆ ಹಾಕಿಕೊಂಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಎಲ್ಲ ಐದನ್ನೂ ಗೆದ್ದು ಕಮಲದ ನಗೆ ಬೀರಿತ್ತು.
ಹಿಮಾಚಲ ಪ್ರದೇಶದಲ್ಲಿ ಹೂತುಹೋದ ಕಾಂಗ್ರೆಸ್
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮಂಜುಗಡ್ಡೆಯಲ್ಲಿ ಹೂತುಹೋದಂತಾಗಿದೆ. ಎಲ್ಲ ನಾಲ್ಕೂ ಕ್ಷೇತ್ರಗಳನ್ನು ಭಾರತೀಯ ಜನತಾ ಪಕ್ಷ ತನ್ನದಾಗಿಸಿಕೊಂಡಿದ್ದು, ರಾಜ್ಯದ ಜನರು ಕಾಂಗ್ರೆಸ್ಸಿಗೆ ಮತ್ತೆ ಮಂಗಳಾರತಿ ಮಾಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲೂ ಇದೇ ಕಥೆ ಆಗಿತ್ತು. ಈ ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ ಯಾವುದೇ ರೀತಿಯಲ್ಲೂ ಸರಿಸಾಟಿಯಲ್ಲ ಎಂಬುದು ಮತ್ತೆ ಸಾಬೀತಾಗಿದೆ.