ದೇಶದ ಮುಂದಿನ ಐದು ವರ್ಷದ ಭವಿಷ್ಯ ನಾಳೆ ನಿರ್ಧಾರ
ಬೆಂಗಳೂರು, ಮೇ 22: ದೇಶದ ಮುಂದಿನ ಐದು ವರ್ಷದ ಭವಿಷ್ಯ ನಾಳೆ ನಿರ್ಧಾರವಾಗಲಿದೆ. 2019ರ ಲೋಕಸಭೆ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದ್ದು, ಐದು ವರ್ಷದ ದೇಶದ ಗದ್ದುಗೆ ಮೇಲೆ ಯಾರು ಕೂತು ಆಳ್ವಿಕೆ ನಡೆಸಲಿದ್ದಾರೆ ಎಂಬುದು ನಾಳೆ ಗೊತ್ತಾಗಲಿದೆ.
ಕೇಂದ್ರ ಸರಕಾರ ರಚನೆಯಲ್ಲಿ ನಾನಾ ಬಿಕ್ಕಟ್ಟು ಅಂತಾರೆ ವಾರಾಣಸಿ ಜ್ಯೋತಿಷಿಗಳು
ನಾಳೆ ಬೆಳಿಗ್ಗೆ 8 ಗಂಟೆಗೆ ದೇಶದ ಬಹುತೇಕ ಕಡೆ ಮತ ಎಣಿಕೆ ಪ್ರಾರಂಭವಾಗಲಿದೆ. ಸುಪ್ರಿಂ ಆದೇಶದಂತೆ ಈ ಬಾರಿ ಇವಿಎಂ ಜೊತೆಗೆ ಕೆಲವು ವಿವಿಪ್ಯಾಟ್ಗಳ ತಾಳೆ ನೋಡಬೇಕಾಗಿರುವುದರಿಂದ ಫಲಿತಾಂಶ ಎಲ್ಲಾ ಕಡೆ ಕೆಲವು ಗಂಟೆ ತಡವಾಗಲಿದೆ.
ಲೋಕಸಭಾ ಚುನಾವಣೆ: 2014ಕ್ಕಿಂತ ಮೂರು ಪಟ್ಟು ಹೆಚ್ಚು ಹಣ, ಹೆಂಡ ವಶ
ದೇಶದ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ನಾಳೆ ಎಲ್ಲಾ ಕ್ಷೇತ್ರದ ಮತ ಎಣಿಕೆ ಒಟ್ಟಾಗಿಯೇ ನಡೆಯಲಿದೆ. ಜೊತೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ, ಒಡಿಸ್ಸಾ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವೂ ನಾಳೆಯೇ ಹೊರಬೀಳಲಿದೆ.
ಬಿಜೆಪಿ vs ಕಾಂಗ್ರೆಸ್ ಮತ್ತು ಮಹಾಘಟಬಂಧನ್
ಈ ಚುನಾವಣೆಯನ್ನು ಪ್ರಮುಖವಾಗಿ ಬಿಜೆಪಿ vs ಕಾಂಗ್ರೆಸ್ ಮತ್ತು ಮಹಾಘಟಬಂಧನ್ ಎಂದೇ ವಿಶ್ಲೇಷಿಸಲಾಗಿತ್ತು, ಎಕ್ಸಿಟ್ ಪೋಲ್ ಪ್ರಕಾರ ಎನ್ಡಿಎ ಸ್ಪಷ್ಟ ಬಹುಮತ ಪಡೆಯುತ್ತಿದೆಯಾದರೂ ನಿಖರ ಮಾಹಿತಿ ನಾಳೆಯೇ ಗೊತ್ತಾಗಲಿದೆ. ನಾಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಹುಪಾಲು ಫಲಿತಾಂಶ ಹೊರಬೀಳಲಿದ್ದು, ಯಾರಿಗೆ ಜಯ, ಯಾರಿಗೆ ಅಪಜಯ ಎಂಬುದು ಗೊತ್ತಾಗಿಬಿಡಲಿದೆ.
ಕರ್ನಾಟಕದತ್ತ ದೇಶದ ಕಣ್ಣು
ಕರ್ನಾಟಕದಲ್ಲಿ ಸಹ 28 ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದ್ದು, ಅದರ ಜೊತೆಗೆ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆಯೂ ನಡೆಯಲಿದೆ. ಈ ಲೋಕಸಭಾ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ, ಎಚ್ಚರಿಕೆಯಿಂದ ಮೂರೂ ಪ್ರಮುಖ ಪಕ್ಷಗಳು ಫಲಿತಾಂಶದತ್ತ ದೃಷ್ಟಿ ನೆಟ್ಟಿವೆ.
ಭಾರಿ ಭದ್ರತೆ ನಿಯೋಜನೆ
ದೇಶದಾದ್ಯಂತ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಅರೆ ಸೇನಾ ಪಡೆ, ಬಿಎಸ್ಎಫ್ ಯೋಧರನ್ನು ಬಳಸಿಕೊಳ್ಳಲಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಬಿಹಾರ, ಕೇರಳ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ ಇನ್ನೂ ಕೆಲವು ಸೂಕ್ಷ್ಮ ರಾಜ್ಯಗಳಲ್ಲಿ ಅತ್ಯಂತ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ.
ಮಾರ್ಚ್ 10ಕ್ಕೆ ಆರಂಭವಾಗಿದ್ದ ಚುನಾವಣೆ
ಮಾರ್ಚ್ 10 ಕ್ಕೆ ಆರಂಭವಾಗಿದ್ದ ಚುನಾವಣೆ ಹಬ್ಬ ನಾಳೆಗೆ ಅಂತಿಮ ಹಂತಕ್ಕೆ ತಲುಪಲಿದ್ದು, ಹೊಸ ಲೋಕಸಭೆ ರಚನೆಯಾದ ಬಳಿಕ ಚುನಾವಣೆ ನೀತಿ ಸಂಹಿತೆ ವಿಸರ್ಜನೆ ಆಗಲಿದೆ.