ಮಾಯಾವತಿ- ಅಖಿಲೇಶ್ ಮುಂದಿನ ಪರೀಕ್ಷೆ ಕೈರಾನ ಉಪಚುನಾವಣೆ
ಲಖನೌ, ಮಾರ್ಚ್ 16: ಉತ್ತರಪ್ರದೇಶದ ಎರಡು ಲೋಕಸಭಾ ಸ್ಥಾನಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷದ ಮಾಯಾವತಿ ಮಧ್ಯ ಸುದೀರ್ಘ ಮಾತುಕತೆ ನಡೆದಿದೆ. ಈ ಎರಡೂ ಪಕ್ಷದ ಮಧ್ಯೆ ಮೈತ್ರಿ ಮುಂದುವರಿಯುವ ಬಗ್ಗೆ ಭಾರೀ ಸುದ್ದಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಒಟ್ಟಾಗಿ ಸೆಣೆಸುವ ಹಾಗೂ ಸ್ಥಾನಗಳನ್ನು ಸಮ-ಸಮವಾಗಿ ಹಂಚಿಕೊಳ್ಳುವ ಬಗ್ಗೆ ಎಸ್ ಪಿ- ಬಿಎಸ್ ಪಿ ಮಾತುಕತೆ ಆಗಿದೆ. ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಮಾಯಾವತಿ, ಉಪ ಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ನಿದ್ದೆ ಹೋದಂತಾಗಿದೆ. ಲೋಕಸಭೆ ಚುನಾವಣೆಯು ಅವಧಿಗೆ ಮುಂಚೆ ನಡೆಯುವ ಸಾಧ್ಯತೆಗಳಿವೆ ಎಂದಿದ್ದಾರೆ.
ನಮ್ಮ ಗೆಲುವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಣೆ: ಅಖಿಲೇಶ್
ಉತ್ತರಪ್ರದೇಶದಲ್ಲಿ ಒಟ್ಟು ಎಂಬತ್ತು ಲೋಕಸಭಾ ಸ್ಥಾನಗಳಿವೆ. ಇದೀಗ ಬಿಜೆಪಿ ಎರಡು ಸ್ಥಾನಗಳಲ್ಲಿ ಸೋತಿದ್ದರೂ ಎನ್ ಡಿಎ ಮೈತ್ರಿಕೂಟದ ಬಲ 71. ಅಂದಹಾಗೆ ಎಸ್ ಪಿ- ಬಿಎಸ್ ಪಿ ಮುಂದಿನ ದೃಷ್ಟಿ ನೆಟ್ಟಿರುವುದು ಪಶ್ಚಿಮ ಉತ್ತರಪ್ರದೇಶದ ಕೈರಾನ ಉಪ ಚುನಾವಣೆ ಮೇಲೆ.
ಬಿಜೆಪಿ ಸಂಸದ ಹುಕುಮ್ ಸಿಂಗ್ ನಿಧನದಿಂದ ಆ ಸ್ಥಾನ ತೆರವಾಗಿದೆ. ಇಲ್ಲಿ ಬಿಎಸ್ ಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದು, ಸಮಾಜವಾದಿ ಪಕ್ಷ ಬೆಂಬಲ ನೀಡಲಿದೆ. ಈಚೆಗಿನ ಎರಡು ಸ್ಥಾನಗಳ ಉಪ ಚುನಾವಣೆಯಲ್ಲಿ ಬಿಎಸ್ ಪಿಯಿಂದ ಎಸ್ ಪಿಗೆ ಬೆಂಬಲ ಘೋಷಿಸಿ, ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಉತ್ತರಪ್ರದೇಶದಲ್ಲಿನ ಉಪಚುನಾವಣೆ ಗೆಲುವನ್ನು ಅಖಿಲೇಶ್ ಯಾದವ್, ಒಗ್ಗಟ್ಟಿಗೆ ಸಿಕ್ಕ ಗೆಲುವು ಎಂದು ಕರೆದಿದ್ದಾರೆ. ಆದರೆ ಬರೀ ಲೆಕ್ಕಾಚಾರದ ಆಟದಿಂದ ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿಯನ್ನು ಬುಡಸಮೇತ ತೆಗೆದುಹಾಕುವುದಕ್ಕೆ ಬೇರೆಯದೇ ರೀತಿಯ ಆಟ ಬೇಕು ಎಂಬ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ.
ಯೋಗಿ-ಬಿಜೆಪಿ ಪತನಕ್ಕಾಗಿ ಕೈ ಜೋಡಿಸಿದ ಎಸ್ ಪಿ-ಬಿಎಸ್ಪಿ