ಮಾನವ ಕಳ್ಳಸಾಗಣೆ: ಕೇಂದ್ರದಿಂದ ಹೊಸ ಮಸೂದೆಯ ಚಾಟಿ
ನವದೆಹಲಿ, ಜುಲೈ 27: ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018ಗೆ ಲೋಕಸಭೆ ಗುರುವಾರ ಅನುಮೋದನೆ ನೀಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.
ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಮೂರನೇ ಅತಿ ದೊಡ್ಡ ಸಂಘಟಿತ ಅಪರಾಧವೆಂದರೆ ಮಾನವ ಕಳ್ಳಸಾಗಣೆ. ಈ ಅಪರಾಧವನ್ನು ತಡೆಯಲು ಇದುವರೆಗೂ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ.
ನವದೆಹಲಿ: ಮಾನವ ಕಳ್ಳ ಸಾಗಣೆ, 16 ಯುವತಿಯರ ರಕ್ಷಣೆ
ಲೋಕಸಭೆಯಲ್ಲಿ ಅಂಗೀಕರಿಸಲಾದ ಮಸೂದೆಯು ಅತ್ಯಂತ ವ್ಯಾಪಕ ಸಮಸ್ಯೆಯಾಗಿರುವ ಮಾನವ ಕಳ್ಳಸಾಗಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಮುಖ್ಯವಾಗಿ ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕಠಿಣ ನಿಯಮಗಳನ್ನು ಇದು ಒಳಗೊಂಡಿದೆ.
ಅಕ್ರಮ ವಲಸೆ: ಅಮೆರಿಕ ಗಡಿಯಲ್ಲಿ ನೂರಾರು ಭಾರತೀಯರು ವಶಕ್ಕೆ
ಈ ಮಸೂದೆಯು ಮಾನವ ಕಳ್ಳಸಾಗಣೆಯನ್ನು ಹತ್ತಿಕ್ಕುವ ವಿಚಾರದಲ್ಲಿ ದಕ್ಷಿಣ ಏಷ್ಯಾ ದೇಶಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿದೆ. ಮಾನವ ಕಳ್ಳಸಾಗಣೆಯು ಜಾಗತಿಕ ಸಮಸ್ಯೆಯಾದರೂ ದಕ್ಷಿಣ ಏಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ.
ಈ ಮಸೂದೆಯ ಪ್ರಮುಖ ಅಂಶಗಳು ಹೀಗಿವೆ
|
ವಿವಿಧ ಸ್ವರೂಪಗಳು
* ಮಾನವ ಕಳ್ಳಸಾಗಣೆಯನ್ನು ತಡೆಯುವ, ರಕ್ಷಿಸುವ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಕೋನದಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು.
* ಬಲವಂತದ ಕೂಲಿ ಉದ್ದೇಶದ ಸಾಗಣೆ, ಭಿಕ್ಷಾಟನೆ ಉದ್ದೇಶದ ಸಾಗಣೆ, ಮುಂಚಿನ ಲೈಂಗಿಕ ಪ್ರಬುದ್ಧತೆ ಮೂಡಿಸುವ ಉದ್ದೇಶದಿಂದ ವ್ಯಕ್ತಿಯ ಮೇಲೆ ರಾಸಾಯನಿಕ ಅಂಶಗಳು ಅಥವಾ ಹಾರ್ಮೋನುಗಳನ್ನು ಬಳಸುವ ಉದ್ದೇಶದ ಕಳ್ಳಸಾಗಣೆ, ಮದುವೆ ಉದ್ದೇಶದಿಂದ ಮಹಿಳೆ ಅಥವಾ ಮಗುವನ್ನು ಅಥವಾ ಮದುವೆ ನೆಪವೊಡ್ಡಿ ಅಥವಾ ಮದುವೆ ಬಳಿಕ ಕಳ್ಳಸಾಗಣೆ ಮಾಡುವ ಮಾನವ ಕಳ್ಳಸಾಗಣೆಯ ವಿವಿಧ ಸ್ವರೂಪಗಳನ್ನು ನಿಯಂತ್ರಿಸುವುದು.
|
ಮಾನವ ಕಳ್ಳಸಾಗಣೆ ಉತ್ತೇಜನಕ್ಕೂ ತಡೆ
* ಮಾನವ ಕಳ್ಳಸಾಗಣೆಗೆ ಕುಮ್ಮಕ್ಕು ನೀಡುವ ಯಾವುದೇ ಅಂಶಕ್ಕೆ ಶಿಕ್ಷೆ ನೀಡುವುದು. ಇದರಲ್ಲಿ ಮಾಹಿತಿಗಳ ಮುದ್ರಣ, ನಕಲಿ ಪ್ರಮಾಣಪತ್ರ ಸಿದ್ಧಪಡಿಸುವುದು, ಸರ್ಕಾರಿ ಅಗತ್ಯತೆಗಳನ್ನು ಒಳಗೊಂಡ ಪುರಾವೆಗಳಾಗಿ ನೋಂದಣಿ ಅಥವಾ ಸ್ಟಿಕ್ಕರ್ಗಳನ್ನು ಬಳಸುವುದು ಅಥವಾ ಸರ್ಕಾರಿ ಸಂಸ್ಥೆಗಳಿಂದ ಅನುಮತಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸುಳ್ಳು ಮಾಹಿತಿಗಳನ್ನು ನೀಡುವುದು ಮುಂತಾದವು ಒಳಗೊಂಡಿವೆ.
ಉತ್ತರ ಪ್ರದೇಶ: 26 ಬಾಲಕಿಯರನ್ನು ರಕ್ಷಿಸಿತು ಯುವಕನ ಒಂದು ಟ್ವೀಟ್!
|
ಸಂತ್ರಸ್ತರ ಗೋಪ್ಯತೆ ಕಾಪಾಡುವುದು
* ಸಂತ್ರಸ್ತರು/ಸಾಕ್ಷಿದಾರರು ಹಾಗೂ ದೂರುದಾರರ ಮಾಹಿತಿಯನ್ನು ಬಹಿರಂಗಪಡಿಸದೆ ಗೋಪ್ಯತೆ ಕಾಪಾಡುವುದು. ಸಂತ್ರಸ್ತರ ಹೇಳಿಕೆಯನ್ನು ವಿಡಿಯೋ ದಾಖಲೀಕರಣ ಮಾಡುವಾಗ ಅವರ ವೈಯಕ್ತಿಕ ಮಾಹಿತಿ ಗೋಪ್ಯತೆ ಕಾಪಾಡುವುದು.
* ಸಂತ್ರಸ್ತರ ವಿಚಾರಣೆ ಹಾಗೂ ಮರಳಿಸುವಿಕೆಗೆ ಕಾಲಮಿತಿ. ಪ್ರಕರಣವನ್ನು ಆದ್ಯತೆ ಮೇರೆಗೆ ಒಂದು ವರ್ಷದ ಅವಧಿಯೊಳಗೆ ವಿಚಾರಣೆ ಮುಗಿಸಬೇಕು.
ಮಧ್ಯಂತರ ಹಾಗೂ ಪೂರ್ಣ ಪರಿಹಾರ
* ಸಂತ್ರಸ್ತರನ್ನು ರಕ್ಷಿಸಿದ ಕೂಡಲೇ ಅವರಿಗೆ ಸೂಕ್ತ ಭದ್ರತೆ ಹಾಗೂ ಪುನರ್ವಸತಿ ಕಲ್ಪಿಸಬೇಕು. ಸಂತ್ರಸ್ತರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ತಪಾಸಣೆಗೆ ಅನುಕೂಲವಾಗುವಂತೆ 30 ದಿನಗಳ ಒಳಗೆ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು. ಮತ್ತು ದೋಷಾರೋಪ ಸಿದ್ಧಪಡಿಸಿದ 60 ದಿನಗಳ ಒಳಗೆ ಸೂಕ್ತ ಪರಿಹಾರ ಒದಗಿಸಬೇಕು.
* ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಆರೋಪಿ ಮೇಲೆ ನಡೆಯುವ ಅಪರಾಧ ತನಿಖೆ ಅಥವಾ ಅದರ ಫಲಿತಾಂಶದ ಮೇಲೆ ನಿಶ್ಚಯವಾಗಬಾರದು.
ಪುನರ್ವಸತಿ ನಿಧಿ ಸ್ಥಾಪನೆ
* ಮೊದಲ ಬಾರಿಗೆ ಪುನರ್ವಸತಿ ನಿಧಿ ಸ್ಥಾಪಿಸುವುದು. ಇದನ್ನು ಸಂತ್ರಸ್ತರ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಒಳಿತಿನ ದೃಷ್ಟಿಯಿಂದ ಬಳಸುವುದು. ಇದರಲ್ಲಿ ಅವರ ಶಿಕ್ಷಣ, ಕೌಶಲ ಅಭಿವೃದ್ಧಿ, ಆರೋಗ್ಯ/ಮಾನಸಿಕ ನೆರವು, ಕಾನೂನು ನೆರವು ಮತ್ತು ಸುರಕ್ಷಿತ ವಸತಿ ಒದಗಿಸಲು ಬಳಸುವುದು.
ವಿಶೇಷ ನ್ಯಾಯಾಲಯಗಳ ಸ್ಥಾಪನೆ
* ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿಯೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದು
* ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಮಾನವ ಕಳ್ಳಸಾಗಣೆ ಪ್ರಕರಣದ ಕುರಿತು ಕ್ರಮ ತೆಗೆದುಕೊಳ್ಳಲು ಸಂಸ್ಥೆಗಳನ್ನು ಸ್ಥಾಪಿಸುವುದು.
ಇವು ಮಾನವ ಕಳ್ಳಸಾಗಣೆಯ ತಡೆ, ರಕ್ಷಣೆ ತನಿಖೆ ಹಾಗೂ ಪುನರ್ವಸತಿ ಕೆಲಸಗಳ ಹೊಣೆಗಾರಿಕೆ ನಿಭಾಯಿಸಬೇಕು. ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗೃಹಸಚಿವಾಲಯದ ಅಡಿಯಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ತಂಡವಾಗಿ ಕೆಲಸ ಮಾಡಲಿದೆ.
|
ಕನಿಷ್ಠ 10 ವರ್ಷ ಜೈಲು
* ಕನಿಷ್ಠ 10 ವರ್ಷ ಜೈಲುವಾಸದಿಂದ 1 ಲಕ್ಷ ರೂ.ಗೆ ಕಡಿಮೆ ಇಲ್ಲದ ದಂಡ ವಿಧಿಸುವಂತಹ ಕಠಿಣ ಶಿಕ್ಷೆಗಳನ್ನು ನೀಡುವುದು.
* ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಚನಾತ್ಮಕ ಸಂಪರ್ಕವನ್ನು ಕಡಿತಗೊಳಿಸುವುದು, ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು.
|
ಎನ್ಐಎಗೆ ಹೆಚ್ಚಿನ ಹೊಣೆಗಾರಿಕೆ
* ಮಾನವ ಕಳ್ಳಸಾಗಣೆ ನಿಗ್ರಹ ದಳವು ಅಂತರ್ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯನ್ನು ಸಹ ನಿಭಾಯಿಸಬೇಕು. ವಿದೇಶಿ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆ ಸಂವಹನ ನಡೆಸುವ ಕಾರ್ಯವನ್ನು ಮಾಡಲಿದೆ.
ಜತೆಗೆ ತನಿಖೆಗೆ ಅಂತಾರಾಷ್ಟ್ರೀಯ ನೆರವು, ಅಂತರ್ರಾಜ್ಯ ಹಾಗೂ ಗಡಿಯಾಚೆಗಿನ ಪುರಾವೆ ಮತ್ತು ವಸ್ತುಗಳ ಹಸ್ತಾಂತರ, ಸಾಕ್ಷಿದಾರರು ಹಾಗೂ ಇನ್ನಿತರೆ ನೆರವುಗಳನ್ನು ಅದು ಪಡೆದುಕೊಳ್ಳುವ ಕೆಲಸ ಮಾಡಲಿದೆ. ಜತೆಗೆ ನ್ಯಾಯಾಂಗ ಕಲಾಪಗಳ ಅಂತರ್ ರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿಡಿಯೋ ಪ್ರಸಾರದ ಚಟುವಟಿಕೆ ನಿಭಾಯಿಸಲಿದೆ.