ಮತ್ತಷ್ಟು ರಾಜ್ಯಗಳಲ್ಲಿ ಮಿಡತೆ ಸೈನ್ಯ ದಾಳಿ ಭೀತಿ: ಪಂಜಾಬ್ನಲ್ಲಿ ಹೈಅಲರ್ಟ್
ನವದೆಹಲಿ, ಮೇ 28: ಬೆಳೆಯನ್ನು ಸಂಪೂರ್ಣವಾಗಿ ನಾಶಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿರುವ ಮರುಭೂಮಿ ಮಿಡತೆ ಮತ್ತಷ್ಟು ರಾಜ್ಯಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದ್ದು ಪಂಜಾಬ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಭಾರಿ ಪ್ರಮಾಣದ ಬೆಳೆ ನಾಶಮಾಡಿರುವ ಮಿಡತೆ ಸೈನ್ಯ ಬುಧವಾರ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಗೆ ದಾಳಿಯಿಟ್ಟಿದೆ.
ಮಿಡತೆ ದಾಳಿ ತಡೆಗೆ ರೈತರಿಗೆ ಕೃಷಿ ಇಲಾಖೆ ಸಲಹೆಗಳು
ಅಲ್ಲದೆ, ಮುಂದಿನ ದಿನಗಳಲ್ಲಿ ಮಿಡತೆ ಸೈನ್ಯವು ಕೊರೊನಾ ಸಂಕಷ್ಟದಿಂದ ಹೈರಾಣಾಗಿರುವ ಮಹಾರಾಷ್ಟ್ರದ ಮತ್ತಷ್ಟು ಪ್ರದೇಶಗಳಿಗೆ ಮುನ್ನುಗ್ಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ರಾಜಸ್ಥಾನ ಮತ್ತು ಗುಜರಾತ್ ಭಾಗಗಳಲ್ಲಿ ಮಿಡತೆಗಳಿಗೆ ಸೇವಿಸಲು ಕೀಟಗಳು ಲಭ್ಯವಾಗುತ್ತಿಲ್ಲ. ಹೀಗಾಗಿ, ಭಾರಿ ಗಾಳಿ ಜೊತೆ ಮಿಡತೆಗಳು ಭಾರತದ ಇತರೆ ಭಾಗಗಳಿಗೆ ಪ್ರವೇಶಿಸುತ್ತಿದೆ.
ಈಗಾಗಲೇ 40 ಸಾವಿರ ಹೆಕ್ಟೇರ್ ಪ್ರದೇಶವನ್ನು ಹಾಳುಗೆಡವಿರುವ ಈ ಕೀಟಗಳಿಂದ ಭತ್ತ, ಧಾನ್ಯಗಳು ಮತ್ತು ಎಣ್ಣೆ ಬೀಜಗಳ ಬೆಳೆಗೆ ಹಾನಿಯಾಗಿಲ್ಲ. ಆದರೆ ಖಾರಿಫ್ ಬೆಳೆಗಳಿಗೆ ಹಾನಿಯಾಗಲಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಪ್ರಧಾನ ನಿರ್ದೇಶಕ ತ್ರಿಲೋಚನ ಮೋಹಪಾತ್ರ ತಿಳಿಸಿದ್ದಾರೆ.
ಈವರೆಗೂ ಮಿಡತೆ ದಾಳಿಗೆ ಸಿಲುಕದೇ ಬಚಾವಾಗುತ್ತಿದ್ದ ಪಂಜಾಬ್ ಸಹ ಈ ಬಾರಿ ಮಿಡತೆಗಳ ದಾಳಿಗೆ ಸಿಲುಕಬಹುದು ಎಂದು ಹೇಳಲಾಗಿದೆ.ಈ ಮೂಲಕ ದೇಶವು ಕಳೆದ 26 ವರ್ಷಗಳಲ್ಲೇ ಕಂಡು ಕೇಳರಿಯದ ಮಿಡತೆ ದಾಳಿಗೆ ತುತ್ತಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.