ಅದ್ಯಾಕೋ.. ಜೀವಕ್ಕೆ ಕೊರೊನಾ ಕುತ್ತು, ಜೀವನಕ್ಕೆ ಮಿಡತೆ ಆಪತ್ತು!?
ನವದೆಹಲಿ, ಮೇ.27: ಬರಗಾಲದಲ್ಲಿ ಅಧಿಕ ಮಾಸ. ಉರಿಯುವ ಬೆಂಕಿಗೆ ತುಪ್ಪ ಸುರಿಯೋದು. ಇಂಥ ಗಾದೆಮಾತುಗಳು ಇದೀಗ ಭಾರತವು ಎದುರಿಸುತ್ತಿರುವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಆಗಿ ಬಿಟ್ಟಿವೆ. ಇಂಥ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿರುವುದೇ ಮಿಡತೆಗಳ ಹಾವಳಿ.
Recommended Video
ಭಾರತದಲ್ಲಿ ಕೊರೊನಾ ವೈರಸ್ 4,500ಕ್ಕೂ ಅಧಿಕ ಮಂದಿ ಜೀವವನ್ನು ಬಲಿ ತೆಗೆದುಕೊಂಡಿದ್ದರೆ, ಇದರ ಬೆನ್ನಲ್ಲೇ ನಡೆದಿರುವ ಮಿಡತೆಗಳ ದಾಳಿ ಪ್ರತಿನಿತ್ಯ 35,000ಕ್ಕೂ ಅಧಿಕ ಜನರ ಜೀವನಕ್ಕೆ ಆಪತ್ತು ತಂದೊಡ್ಡಿವೆ. ದೇಶದ ಉತ್ತರ ಭಾಗದಲ್ಲಿರುವ ರಾಜ್ಯಗಳಲ್ಲಿ ಮಿಡತೆಗಳ ದಾಳಿ ಹೊಸ ಸವಾಲನ್ನು ತಂದೊಡ್ಡಿದೆ.
ಕೊರೊನಾ ವೈರಸ್ ಅಲ್ಲ ಭಾರತಕ್ಕೆ ಮಿಡತೆಗಳೇ ದೊಡ್ಡ ಸವಾಲು!
ರಾಜಸ್ಥಾನ್, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಹಾಗೂ ಗುಜರಾತ್ ಸೇರಿದಂತೆ ಉತ್ತರ ಭಾಗದಲ್ಲಿರುವ ರಾಜ್ಯಗಳಲ್ಲಿ ಅವಧಿಗೂ ಪೂರ್ವದಲ್ಲೇ ಮಿಡತೆಗಳ ದಾಳಿ ಶುರುವಾಗಿದ್ದು, ಬೆಳೆದ ಬೆಳೆಯಲ್ಲೇ ರೈತರ ಕೈ ಸೇರುವಷ್ಟರಲ್ಲೇ ಹಾಳಾಗುತ್ತಿದೆ.
ಮಿಡತೆ ದಾಳಿ ಭೀಕರತೆ 30 ವರ್ಷಗಳಲ್ಲೇ ಮೊದಲು!
ಭಾರತದಲ್ಲಿ ಮಿಡತೆ ದಾಳಿ ಪ್ರತಿವರ್ಷ ರೈತರು ಎದುರಿಸುತ್ತಿರುವ ಸವಾಲು. ಆದರೆ ಈ ಬಾರಿ ದೇಶದಲ್ಲಿ ನಡೆದಿರುವ ಮಿಡತೆಗಳ ದಾಳಿ ಕಳೆದ ಮೂರ ದಶಕಗಳಲ್ಲೇ ಮೊದಲು ಎನ್ನಲಾಗಿದೆ. 30 ವರ್ಷಗಳಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಿಡತೆಗಳು ದಾಳಿ ನಡೆಸಿರಲಿಲ್ಲ ಎಂದು ವನ್ಯಜೀವಿ ಮತ್ತು ಪರಿಸರ ಸಚಿವಾಲಯದ ಇನ್ಸ್ ಪೆಕ್ಟರ್ ಜನರಲ್ ಸೌಮಿತ್ರ ದಾಸಗುಪ್ತಾ ತಿಳಿಸಿದ್ದಾರೆ.
ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳುವುದೇನು?
ಭಾರತದ ಪಶ್ಚಿಮ ಭಾಗದಿಂದ ಉತ್ತರ ಭಾಗಕ್ಕೆ ಅನಿರೀಕ್ಷಿತವಾಗಿ ಬಿರುಗಾಳಿ ಬೀಸುತ್ತಿದೆ. ಇದು ಉತ್ತರ ಭಾರತದ ಪ್ರದೇಶಗಳಲ್ಲಿ ಆತಂಕ ಹುಟ್ಟಿಸಿದೆ. ರಾಜಸ್ಥಾನದಿಂದ ಬೀಸುತ್ತಿರುವ ಬಿರುಗಾಳಿಯು ದೆಹಲಿಯತ್ತ ಮುಖ ಮಾಡುತ್ತಿದ್ದು, ಮಿಡತೆಗಳ ದಾಳಿ ರಾಷ್ಟ್ರ ರಾಜಧಾನಿಯತ್ತ ಹೊರಳುತ್ತಿದೆ. ಮೇ.28ರ ನಂತರದಲ್ಲಿ ಬಿರುಗಾಳಿಯು ಮಾರ್ಗ ಬದಲಿಸುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಗುಣಲಕ್ಷಣಗಳನ್ನೇ ಬದಲಾಯಿಸಿಕೊಂಡವಾ ಮಿಡತೆಗಳು?
ಉತ್ತರ ಭಾರತದಲ್ಲಿ ಅವಧಿಗೂ ಮೊದಲೇ ದಾಳಿ ನಡೆಸಿರುವ ಮಿಡತೆಗಳು ಈ ಮೊದಲಿನಂತಿಲ್ಲ. ತಮ್ಮ ಗುಣಲಕ್ಷಣಗಳನ್ನೇ ಬದಲಿಸಿಕೊಂಡಿರುವ ಮಿಡತೆಗಳು 6 ಕಿಲೋ ಮೀಟರ್ ಎತ್ತರ ಹಾಗೂ 1 ಕಿಲೋ ಮೀಟರ್ ಅಗಲದಲ್ಲಿ ಹಾರಾಟ ನಡೆಸುತ್ತಿದ್ದು, ಇವುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಇದರ ನಡುವೆಯೂ ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಬಿ.ಆರ್.ಕದ್ವಾ ತಿಳಿಸಿದ್ದಾರೆ.
ನೆರೆರಾಷ್ಟ್ರ ಪಾಕ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಪಾಕಿಸ್ತಾನದಲ್ಲಿ ಅಟ್ಟಹಾಸ ತೋರುತ್ತಿರುವ ಮಿಡತೆಗಳ ಪೈಕಿ ಶೇ.38ರಷ್ಟು ಮಿಡತೆಗಳಿಗೆ ಬಲೂಚಿಸ್ತಾನ್, ಸಿಂಧ್ ಹಾಗೂ ಪಂಜಾಬ್ ಪ್ರದೇಶವು ಸಂತಾನೋತ್ಪತ್ತಿಯ ಕೇಂದ್ರವಾಗಿವೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ತಿಳಿಸಿದೆ. ಕಳೆದ ಎರಡು ದಶಕಗಳನ್ನೇ ಮೀರಿಸುವ ಮಟ್ಟಿಗೆ ಈ ಬಾರಿ ಮಿಡತೆಗಳು ದಾಳಿ ನಡೆಸಿದ್ದು ಫೆಬ್ರವರಿ ತಿಂಗಳಿನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇನ್ನು, ಪಾಕಿಸ್ತಾನ ರೈತರ ಪ್ರಕಾರ ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಈ ರೀತಿ ಮಿಡತೆಗಳ ದಾಳಿ ನಡೆದಿರಲಿಲ್ಲ ಎಂದು ತಿಳಿದು ಬಂದಿದೆ.
ಮಿಡತೆ ಸಮೂಹದ ದಾಳಿಯಿಂದ 35,000 ಆಹಾರ ಬೆಳೆಗೆ ಹಾನಿ
ಒಂದೇ ದಿನದಲ್ಲಿ ಒಂದು ಮಿಡತೆಗಳ ಸಮೂಹವು 35,000ಕ್ಕೂ ಅಧಿಕ ಜನರು ಸೇವಿಸುವ ಆಹಾರವನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಕೊರೊನಾ ವೈರಸ್ ಭೀತಿ ನಡುವೆಯೂ ಅಲ್ಲಲ್ಲಿ ಬೆಳೆದ ಬೆಳೆಯು ಇದೀಗ ಮಿಡತೆಗಳ ಪಾಲಾಗುತ್ತಿದ್ದು, ರೈತರಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟು ಹಾಕಿದೆ.