ಭಾರತದ ನಾಲ್ಕು ಕಾರ್ಖಾನೆಗಳಲ್ಲಿ ದುರಂತಕ್ಕೆ ಇದೇನಾ ಕಾರಣ?
ನವದೆಹಲಿ, ಮೇ.08: ನೊವೆಲ್ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಲಾಗಿದೆ. ಕೇಂದ್ರ ಸರ್ಕಾರವು ಆರ್ಥಿಕತೆಗೆ ಶಕ್ತಿ ತುಂಬುವ ಉದ್ದೇಶದಿಂದ ಕೆಲವು ಕಾರ್ಖಾನೆಗಳ ಕಾರ್ಯಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ದೇಶದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಬೆನ್ನಲ್ಲೇ ಆರಂಭಗೊಂಡ ಕಾರ್ಖಾನೆಗಳಲ್ಲಿ ಭಾರಿ ದುರಂತಗಳೇ ಸಂಭವಿಸಿವೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಅನಿಲ ಸೋರಿಕೆ ದುರಂತ, ಛತ್ತೀಸ್ ಗಢ ಪೇಪರ್ ಮಿಲ್ ನಲ್ಲಿ ಅನಿಲ ಸೋರಿಕೆ, ತಮಿಳುನಾಡಿನ ಕುದ್ದಾಲೂರ್ ನಲ್ಲಿರುವ ಎನ್ಎಲ್ ಸಿ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ, ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಫಾರ್ಮಾ ಪ್ಯಾಕಿಂಗ್ ಫಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡ.
ಅನಿಲ ಸೋರಿಕೆಯಿಂದ ಮೃತಪಟ್ಟವರಿಗೆ 30 ಕೋಟಿ ಬಿಡುಗಡೆ ಮಾಡಿದ ಸಿಎಂ ಜಗನ್
ಕೇಂದ್ರ ಸರ್ಕಾರ ಮಾರ್ಚ್.24ರಂದು ಘೋಷಿಸಿದ ಭಾರತ ಲಾಕ್ ಡೌನ್ ಬಳಿಕ 40ಕ್ಕೂ ಹೆಚ್ಚು ದಿನ ಎಲ್ಲ ಕಾರ್ಖಾನೆಗಳು ಬಂದ್ ಆಗಿದ್ದವು. ಎರಡ್ಮೂರು ದಿನಗಳ ಹಿಂದೆಯಷ್ಟೇ ತೆರೆದ ಕಾರ್ಖಾನೆಗಳಲ್ಲಿ ನಡೆದ ದುರಂತ ಹಾಗೂ ಅವುಗಳ ಪ್ರಭಾವದ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ವಿಶಾಖಪಟ್ಟಣ ಎಲ್.ಜಿ.ಪಾಲಿಮರ್ಸ್ ಘಟಕದಲ್ಲಿ ಸೋರಿಕೆ
ಆಂಧ್ರ ಪ್ರದೇಶ ವಿಶಾಖಪಟ್ಟಣದ ಆರ್.ಆರ್.ವೆಂಕಟಾಪುರಂನಲ್ಲಿ ಇರುವ ದಕ್ಷಿಣ ಕೊರಿಯಾ ಮೂಲದ ಎಲ್.ಜಿ.ಕೆಮ್ ಕಂಪನಿ ಮಾಲೀಕತ್ವದ ಎಲ್.ಜಿ.ಪಾಲಿಮರ್ಸ್ ಘಟಕದಲ್ಲಿ ಗುರುವಾರ ನಸುಕಿನ ಜಾವ 2.30ರ ವೇಳೆಗೆ ಸ್ಟೆರಿನ್ ಎಂಬ ವಿಷಾನಿಲ ಸೋರಿಕೆಯಾಯಿತು. ಅಸಲಿಗೆ ಸಿಂಥೆಟಿಕ್ ರಬ್ಬರ್ ಹಾಗೂ ರಾಳ ತಯಾರಿಕೆಗೆ ಬಳಸುವ ಸ್ಟೆರಿನ್ ರಾಸಾಯನಿಕವನ್ನು ಉಸಿರಾಡಿದರೆ ಮನುಷ್ಯನ ನರವ್ಯೂಹನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಗಂಟಲು, ಚರ್ಮ, ಕಣ್ಣು ಮತ್ತು ದೇಹದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.
ಸ್ಟೆರಿನ್ ವಿಷಾನಿಲದಿಂದ ಆಂಧ್ರದಲ್ಲಿ 11 ಮಂದಿ ಬಲಿ
ಈ ವಿಷಾನಿಲ ಉಸಿರಾಡಿದ ಗ್ರಾಮಸ್ಥರು ಎಲ್ಲೆಂದರಲ್ಲಿ ಮೂರ್ಛೆ ತಪ್ಪಿ ಬಿದ್ದರು, ಸಾವಿರಾರೂ ಜನ ಅಸ್ವಸ್ಥರಾದರೆ 11 ಮಂದಿ ಪ್ರಾಣವನ್ನೇ ಬಿಟ್ಟರು. ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಘೋಷಿಸಿದ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅಸ್ವಸ್ಥರ ಎಲ್ಲ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದರು.
ಛತ್ತೀಸ್ ಗಢದ ಪೇಪರ್ ಮಿಲ್ ನಲ್ಲಿ ವಿಷಾನಿಲ ಸೋರಿಕೆ
ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆ ದುರಂತ ಒಂದು ಕಡೆಯಾದರೆ ಅದೇ ದಿನ ಛತ್ತೀಸ್ ಗಢದ ಪೇಪರ್ ಮಿಲ್ ನಲ್ಲೂ ಅನಿಲ ಸೋರಿಕೆ ದುರಂತ ಸಂಭವಿಸಿತ್ತು. ರಾಯಘರ್ ಜಿಲ್ಲೆ ಟೆಟ್ಲಾ ಗ್ರಾಮದಲ್ಲಿರುವ ಶಕ್ತಿ ಪೇಪರ್ ಮಿಲ್ ನಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿಷಾನಿಲ ಸೋರಿಕೆಯಾಗಿ ಏಳು ಮಂದಿ ಕಾರ್ಮಿಕರು ಅಸ್ವಸ್ಥಗೊಂಡಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಮೂವರನ್ನು ರಾಯ್ ಪುರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಎನ್ಎಲ್ ಸಿ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟ, 8 ಮಂದಿ ಅಸ್ವಸ್ಥ
ತಮಿಳುನಾಡು ನಿವೇಲಿ ಪ್ರದೇಶದಲ್ಲಿ ಇರುವ ಎನ್ಎಲ್ ಸಿ ಇಂಡಿಯಾ ಲಿಮಿಟೆಡ್ ಕಂಪನಿಯ ಥರ್ಮಲ್ ಪವರ್ ಸ್ಟೇಷನ್(ಟಿಪಿಎಸ್) ನಲ್ಲಿ ಬಾಯ್ಲರ್ ಸ್ಫೋಟಗೊಂಡಿತು. ಹೆಚ್ಚಿನ ಶಾಖ ಹಾಗೂ ಒತ್ತಡದಿಂದ ಬಾಯ್ಲರ್ ಸ್ಫೋಟ ಸಂಭವಿಸಿರುವ ಬಗ್ಗೆ ಕಂಪನಿಯು ಶಂಕೆ ವ್ಯಕ್ತಪಡಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಟಿಪಿಎಸ್-2 ನಲ್ಲಿ ಸಣ್ಣ ಅಗ್ನಿ ಅವಘಡ ಸಂಭವಿಸಿತ್ತು. ಇದರ ಬೆನ್ನಲ್ಲೇ ಗುರುವಾರ ನಡೆದ ದುರಂತದಲ್ಲಿ ಎಂಟು ಮಂದಿ ಕಾರ್ಮಿಕರು ಗಾಯಗೊಂಡರು. ಈ ಪೈಕಿ ಇಬ್ಬರು ಕಾರ್ಮಿಕರಿಗೆ ಶೇ.70ರಷ್ಟು ದೇಹವು ಸುಟ್ಟಿದೆ.
ಮಹಾರಾಷ್ಟ್ರದ ನಾಸಿಕ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಟ
ಇನ್ನು, ಗುರುವಾರವೇ ಮಹಾರಾಷ್ಟ್ರದ ನಾಸಿಕ್ ನಲ್ಲಿ ಇರುವ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತು. ಸತ್ಪುರ್ ಪ್ರದೇಶದಲ್ಲಿ ಇರುವ ಫಾರ್ಮಾಸೆಂಟಿಕಲ್ ಪ್ಯಾಕೇಜಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಎರಡು ಅಗ್ನಿಶಾಮಕ ವಾಹನ ಸಿಬ್ಬಂದಿ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಲಿಲ್ಲ.