'ಸ್ಥಳೀಯ ಮಟ್ಟದ ಸೋಂಕಿನ ಉಲ್ಬಣ 3ನೇ ಅಲೆಗೆ ಕಾರಣವಾಗಬಹುದು'
ನವದೆಹಲಿ, ಸೆಪ್ಟೆಂಬರ್ 21: ಸ್ಥಳೀಯ ಮಟ್ಟದಲ್ಲಿ ಕೊರೊನಾ ಸೋಂಕಿನ ಉಲ್ಬಣ ದೇಶದಲ್ಲಿ ಕೊರೊನಾ ಮೂರನೇ ಅಲೆ ರೂಪುಗೊಳ್ಳಲು ಕಾರಣವಾಗಬಹುದು ಎಂದು ಲಸಿಕಾ ತಜ್ಞ ಡಾ. ಗಗನ್ದೀಪ್ ಕಾಂಗ್ ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕು ಸ್ಥಳೀಯ ಸಾಂಕ್ರಾಮಿಕವಾಗುವ ಹಂತದಲ್ಲಿದೆ. ಯಾವುದೇ ಒಂದು ಸೋಂಕಿನ ವಿರುದ್ಧ ಜನಸಂಖ್ಯೆಯ ದೊಡ್ಡ ಭಾಗ ಪ್ರತಿರಕ್ಷಣೆಯನ್ನು ಪಡೆಯುವಂತಾದರೆ ಅದನ್ನು ಸ್ಥಳೀಯ ಸಾಂಕ್ರಾಮಿಕ ಹಂತ ಎನ್ನಬಹುದು.
ಸಂಪೂರ್ಣ ಕೋವಿಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಕೆ ಮಾಡಿದ ಯುಎಸ್
ಇನ್ಫ್ಲುಯೆನ್ಸಾದಂಥ ಸಾಕಷ್ಟು ಸ್ಥಳೀಯ ಸಾಂಕ್ರಾಮಿಕಗಳು ದೇಶದಲ್ಲಿವೆ. ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಸೋಂಕು ಹರಡುವ ಯಾವುದೇ ಹೊಸ ತಳಿ ಸೃಷ್ಟಿಯಾದರೆ ಮತ್ತೆ ಸಾಂಕ್ರಾಮಿಕವಾಗಿ ಹರಡಬಲ್ಲದು ಎಂದು ಹೇಳಿದ್ದಾರೆ.
ಕೊರೊನಾ ಮೂರನೇ ಅಲೆಯಲ್ಲಿ ಎರಡು ಸಾಧ್ಯತೆಗಳಿವೆ. ಒಂದು ರೂಪಾಂತರ ಒಂದು ಕ್ರಿಯೆ ನಡೆಸಿದ್ದರೆ, ಇನ್ನೊಂದು ರೂಪಾಂತರ ಇನ್ನೊಂದು ಕ್ರಿಯೆಯನ್ನು ನಡೆಸುತ್ತಿರುತ್ತದೆ ಎಂದು ವಿವರಿಸಿದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಕೊರೊನಾದ ಹೊಸ ರೂಪಾಂತರ ಸೃಷ್ಟಿಯಾದರೆ ಅಕ್ಟೋಬರ್ -ನವೆಂಬರ್ ವೇಳೆಗೆ ಭಾರತದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣವಾಗಬಹುದು ಎಂದು ಗಣಿತ ಮಾದರಿ ಮೂಲಕ ವಿಜ್ಞಾನಿಗಳು ಕಳೆದ ತಿಂಗಳು ತಿಳಿಸಿದ್ದರು.
ಜ್ವರ, ಕೆಮ್ಮು, ನೆಗಡಿ ಎಲ್ಲಾ ಕೊರೊನಾವೈರಸ್ ಅಲ್ಲ!?: ಇಲ್ಲಿದೆ ಸರಿಯಾದ ಅಂಕಿ-ಅಂಶ
ಆದರೆ ಮೂರನೇ ಅಲೆ ತೀವ್ರತೆ ಎರಡನೇ ಅಲೆಗಿಂತ ಕಡಿಮೆ ಇರುತ್ತದೆ. ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದರು. ದೇಶದ ಅರೋಗ್ಯ ವ್ಯವಸ್ಥೆಯೂ ತಲೆಕೆಳಗಾಗಿತ್ತು.
ಆದ್ದರಿಂದ ನಾವು ಈ ತ್ರೈಮಾಸಿಕದಲ್ಲಿ ಅದೇ ತರಹದ ಸಂಖ್ಯೆಗಳನ್ನು ಪಡೆಯಬಹುದು. ಸ್ಥಳೀಯ ಸೋಂಕಿನ ಉಲ್ಬಣ ಚಿಕ್ಕದಾಗಿದ್ದರೂ ವ್ಯಾಪಕವಾಗುವ ಸಾಧ್ಯತೆಯಿರುತ್ತದೆ. ಜೊತೆಗೆ ಹಬ್ಬಗಳ ಸಮಯದಲ್ಲಿ ನಮ್ಮ ನಡವಳಿಕೆ ಮೂರನೇ ಅಲೆಗೆ ಕಾರಣವಾಗಬಹುದು. ಆದರೆ ಊಹಿಸಿದಷ್ಟು ಹೆಚ್ಚು ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಮುಂದಿನ ಆರು ತಿಂಗಳಿನಲ್ಲಿ ಕೊರೊನಾ, ಜನಜೀವನದಲ್ಲಿ ದಿನನಿತ್ಯದ ಭಾಗವಾಗಲಿದೆ ಎಂದು ಅವರು ಹೇಳಿದ್ದಾರೆ.
'ಕಳೆದ ಹಲವಾರು ವಾರಗಳಿಂದ ನಮ್ಮ ದೇಶದಲ್ಲಿ ಸರಾಸರಿ ಸುಮಾರು 30,000 - 45000 ದೈನಂದಿನ ಪ್ರಕರಣಗಳು ವರದಿಯಾಗುತ್ತಿವೆ. ಇವು ಹೆಚ್ಚಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಂದ, ವಿಶೇಷವಾಗಿ ಕೇರಳ, ಹಲವು ಈಶಾನ್ಯ ರಾಜ್ಯಗಳು ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳು ಹಾಗೂ ದಕ್ಷಿಣದ ಕೆಲ ರಾಜ್ಯಗಳಿಂದ ವರದಿಯಾಗುತ್ತಿವೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಹರಡಿದ ʻಸಾರ್ಸ್-ಕೋವ್2ʼ ವೈರಸ್ ಜೀನೋಮಿಕ್ ವಿಶ್ಲೇಷಣೆ ಪರಿಶೀಲಿಸಿದಾಗ ಹೊಸ ರೂಪಾಂತರ ಪತ್ತೆಯಾಗಿಲ್ಲ ಎಂದು ಗೊತ್ತಾಗುತ್ತದೆ. ಅಲ್ಲದೆ, ಜುಲೈ ನಲ್ಲಿ ನಡೆಸಲಾದ ಸೆರೋ-ಸಮೀಕ್ಷೆಯ ಆಧಾರದ ಮೇಲೆ ನೋಡುವುದಾದರೆ, ಪ್ರಸ್ತುತ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳು ಇನ್ನೂ ಲಸಿಕೆ ಪಡೆಯದ ಸೋಂಕು ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಲ್ಲಷ್ಟೇ ಕಂಡು ಬಂದಿವೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್ಟಿಎಜಿಐ) ಕಾರ್ಯಕಾರಿ ತಂಡದ ಅಧ್ಯಕ್ಷ ಡಾ. ಎನ್.ಕೆ.ಅರೋರಾ ತಿಳಿಸಿದ್ದಾರೆ.
ನಮ್ಮ ಜನರಿಗೆ ಸೂಕ್ತ ರಕ್ಷಣೆ ಒದಗಿಸುವ ಸಮಗ್ರ ಉದ್ದೇಶದೊಂದಿಗೆ ಲಭ್ಯವಿರುವ ಅತ್ಯುತ್ತಮ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಮೂರನೇ ಡೋಸ್ ಲಸಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದರೊಂದಿಗೆ, ಕೊರೊನಾ ಸೋಂಕಿನ ಮುಂದಿನ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವುದಾಗಿ ತಜ್ಞರು ಅಂದಾಜು ಮಾಡಿದ್ದು, ಈ ಮಾರ್ಚ್ ತಿಂಗಳಿನಿಂದ ಸದ್ದಿಲ್ಲದೇ ಮಕ್ಕಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದಾಗಿ ತಜ್ಞರ ಸಮಿತಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಮಂಗಳವಾರ 26,115 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,35,04,534ಕ್ಕೆ ಏರಿಕೆಯಾಗಿದ್ದು, 24 ಗಂಟೆಗಳಲ್ಲಿ 252 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 4,45,385ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 3,27,49,574 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,09,575 ಆಗಿದೆ.