ಸುಪ್ರೀಂ ಆದೇಶ: ಮುರಳಿ ಭೇಟಿ ಮಾಡಿದ ಆಡ್ವಾಣಿ
ಈ ಪ್ರಕರಣದಲ್ಲಿ, ಕೇಂದ್ರದ ಸಚಿವೆ ಉಮಾಭಾರತಿ, ಬಿಜೆಪಿಯ ಹಿರಿಯ ನಾಯಕ ವಿನಯ್ ಕಟಿಯಾರ್ ವಿರುದ್ಧವೂ ವಿಚಾರಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದೆ.
ನವದೆಹಲಿ, ಏಪ್ರಿಲ್ 19: ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ತಮ್ಮ ವಿರುದ್ಧ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ಬುಧವಾರ ಬಿಜೆಪಿಯ ಧುರೀಣ ಲಾಲ್ ಕೃಷ್ಣ ಆಡ್ವಾಣಿ, ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
1992ರಲ್ಲಿ ಅಯೋಧ್ಯೆಯಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸಕ್ಕೆ ಆಡ್ವಾಣಿಯವರ ಪ್ರಚೋದನಾಕಾರಿ ಭಾಷಣಗಳೇ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇದೀಗ ಅವರ ವಿರುದ್ಧ ವಿಚಾರಣೆಗೆ ಆದೇಶ ನೀಡಿದೆ.
ಈ ಪ್ರಕರಣದಲ್ಲಿ, ಕೇಂದ್ರದ ಸಚಿವೆ ಉಮಾಭಾರತಿ, ಬಿಜೆಪಿಯ ಹಿರಿಯ ನಾಯಕ ವಿನಯ್ ಕಟಿಯಾರ್ ವಿರುದ್ಧವೂ ವಿಚಾರಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದೆ.
ಸುಪ್ರೀಂ ಕೋರ್ಟ್ ನ ಈ ಆದೇಶ ಹೊರಬೀಳುತ್ತಿದ್ದಂತೆ, ಈ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗಿ ಚರ್ಚಿಸಿದರು. ಮಾತುಕತೆ ವಿವರಗಳು ಲಭ್ಯವಾಗಿಲ್ಲ.
ಏತನ್ಮಧ್ಯೆ, ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷವು ಆಡ್ವಾಣಿಯವರನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.