Chandrayaan 2 - Landing on Moon Live Updates: ಚಂದಮಾಮನ ನೋಡಲು ಇನ್ನೊಂದೇ ದಿನ ಬಾಕಿ
ಬೆಂಗಳೂರು, ಸೆಪ್ಟೆಂಬರ್ 5: ಚಂದ್ರನಲ್ಲಿ ನೀರಿನ ಅಸ್ತಿತ್ವದ ಬಗ್ಗೆ ಅಧ್ಯಯನ ಮಾಡಲು ತೆರಳಿರುವ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯು ಚಂದ್ರಲೋಕಕ್ಕೆ ಕಾಲಿಡುವ ಕ್ಷಣಗಣನೆ ಆರಂಭವಾಗಿದೆ.
ಭಾರತ ಮಾತ್ರವಲ್ಲದೆ, ಇಡೀ ಜಗತ್ತು ಇಸ್ರೋದ ಈ ಮಹಾನ್ ಸಾಧನೆಗೆ ಸಾಕ್ಷಿಯಾಗಲು ಕಾತರದಿಂದ ಕಾದಿದೆ. ಚಂದ್ರಯಾನ ನೌಕೆಯು ಚಂದ್ರನ ಮೇಲೆ ನಿರೀಕ್ಷೆಯಂತೆ ಯಶಸ್ವಿಯಾಗಿ ಇಳಿಯಲಿ ಎಂದು ವಿಜ್ಞಾನ ಸಮೂಹ ಪ್ರಾರ್ಥಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಚಂದ್ರ ಉಪಗ್ರಹದಲ್ಲಿನ ನೀರಿನ ಅಸ್ತಿತ್ವ, ಜೀವಿಗಳ ಅಸ್ತಿತ್ವದ ಕುರಿತಾದ ಅಧ್ಯಯನಗಳಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಲಿವೆ. ಇದು ಬಾಹ್ಯಾಕಾಶ ಸಂಶೋಧನೆಗೆ ಬಹುದೊಡ್ಡ ಕೊಡುಗೆ ನೀಡಲಿದೆ.
ಉಡಾವಣೆಯಾದ ದಿನದಿಂದ ನೌಕೆಯು ಅಂದುಕೊಂಡಂತೆಯೇ ಎಲ್ಲ ವಿವಿಧ ಘಟ್ಟಗಳನ್ನು ಯಶಸ್ವಿಯಾಗಿ ಕ್ರಮಿಸಿ ಚಂದ್ರನ ಸಮೀಪ ಸಾಗಿದೆ. ಆದರೆ, ಅದನ್ನು ಚಂದ್ರನ ಮೇಲೆ ಇಳಿಸುವುದು ಸುಲಭದ ಮಾತಲ್ಲ. ವಿಕ್ರಂ ಲ್ಯಾಂಡರ್ಅನ್ನು ಚಂದ್ರನ ಮೇಲೆ ಸ್ಪರ್ಶಿಸಲು ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ.