ಪುಟಾಣಿ ಚಂದನ್ ಹೋರಾಟಕ್ಕೆ ಅಂತ್ಯ ಹಾಡಿದ ಕ್ಯಾನ್ಸರ್
ಬೆಂಗಳೂರು, ಫೆ. 4: ಕ್ಯಾನ್ಸರ್ ವಿರುದ್ಧ ಹೋರಾಡುತ್ತ ವಾಯು ಸೇನೆ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಭಾರತದ ಲಕ್ಷಾಂತರ ಜನರ ಹೃದಯ ಗೆದ್ದಿದ್ದ ಚಂದನ್ ಎಂಬ ಸ್ಫೂರ್ತಿಯ ಸೆಲೆ ಬತ್ತಿಹೋಗಿದೆ.
ಕ್ಯಾನ್ಸರ್ ಮಹಾಮಾರಿ ಭಾರತದ ಅತ್ಯಂತ ಕಿರಿಯ ಪೈಲಟ್ ಚಂದನ್ ಜೀವ ಬಲಿಪಡೆದಿದೆ. ವಿಶ್ವ ಕ್ಯಾನ್ಸರ್ ದಿನಾಚರಣೆಯ ದಿನವೇ ಬಾಲಕನ ಜೀವ ಹೋಗಿರುವುದು ವಿಪರ್ಯಾಸದ ಸಂಗತಿ.
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮಹಾಮಾರಿಯ ಕೈ ಮೇಲಾಗಿದೆ. ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಚಂದನ್ ಇಹಲೋಕ ತ್ಯಜಿಸಿದ್ದಾನೆ ಎಂದು ಬಾಲಕನ ತಂದೆ ಗಿರೀಶ್ ಮಢಲ್ ಒನ್ ಇಂಡಿಯಾ ಗೆ ತಿಳಿಸಿದ್ದಾರೆ.[ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ಬಾಲಕನ ಕುಟುಂಬ]
ಬಿಹಾರದ ಬಾಲಕ ದೆಹಲಿಯ ಎಐಐಎಂಎಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉದಯ್ ಫೌಂಡೇಷನ್ ನೆರವಿನ ಹಸ್ತ ಚಾಚಿತ್ತು. ಆದರೆ ಕುಟುಂಬದ ದೀಪ ಆರಿಹೋಗಿದೆ. ಒನ್ ಇಂಡಿಯಾ ಚಂದನ್ ಸ್ಥಿತಿಗತಿ ಮತ್ತು ಕುಟುಂಬ ಅನುಭವಿಸುತ್ತಿರುವ ವೇದನೆಯನ್ನು ಓದುಗರ ಮುಂದೆ ತೆರೆದಿಟ್ಟಿತ್ತು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಹ ಬಾಲಕನ ಉಳಿವಿಗೆ ಪ್ರಾರ್ಥನೆ ಮಾಡುವಂತೆ ಕರೆ ನೀಡಿದ್ದರು. ವಾಯುಸೇನೆಯ ಮುಖ್ಯಸ್ಥ ಅರುಪ್ ರಹಾ ಚಂದನ್ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದು 'ಆತ ನಿಜವಾದ ಹೋರಾಟಗಾರ, ನಮಗೆಲ್ಲ ನಿಜಕ್ಕೂ ಸ್ಫೂರ್ತಿ ತುಂಬಿದ್ದ' ಎಂದಿದ್ದಾರೆ.
ಕಳೆದ ನವೆಂಬರ್ ನಲ್ಲಿ ವಾಯುಪಡೆ ಅಧಿಕಾರಿಗಳ ಜತೆ ವಿಮಾನದಲ್ಲಿ ಹಾರಾಡಿದ್ದ ಬಾಲಕ ಭಾರತದ ಅತ್ಯಂತ ಕಿರಿಯ ಪೈಲಟ್ ಎಂಬ ಶ್ರೇಯ ಪಡೆದುಕೊಂಡಿದ್ದ. ಆದರೆ, ಕ್ಯಾನ್ಸರ್ ಮಹಾಮಾರಿ ಆಗಲೇ ಬಾಲಕನ ಆಯಸ್ಸನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡಿತ್ತು. [ಬಾಲಕನ ಕ್ಯಾನ್ಸರ್ ನೋವು ಮರೆಸಿದ 'ತೇಜಸ್']
ತೇಜಸ್ ಯುದ್ಧ ವಿಮಾನವನ್ನು ಬಹುವಾಗಿ ಪ್ರೀತಿಸುತ್ತಿದ್ದ ಬಾಲಕನಿಗೆ ಸ್ವತಃ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿಯ ನಿರ್ದೇಶಕ ಪಿ.ಎಸ್.ಸುಬ್ರಮಣಿಯನ್ ಖುದ್ದಾಗಿ ಯುದ್ಧ ವಿಮಾನದ ಮಾದರಿಯೊಂದನ್ನು ನೀಡಿ ಆತನಿಗೆ ಹುರುಪು ತುಂಬಿದ್ದರು.