ಸಿಮ್-ಆಧಾರ್ ಲಿಂಕ್: ಸುಪ್ರಿಂನಿಂದ ಕೇಂದ್ರಕ್ಕೆ ನೋಟಿಸ್ ಜಾರಿ
ನವದೆಹಲಿ, ಅಕ್ಟೋಬರ್ 30: ಮೊಬೈಲ್ ಸಿಮ್ ಕಾರ್ಡಿಗೆ ಆಧಾರ್ ಕಾರ್ಡ್ ಕಡ್ಡಾಯ ಜೋಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಇಂದು ವಿಚಾರಣೆ ನಡೆಸಿತು.
ಆನ್ಲೈನ್ ಮೂಲಕ ಮೊಬೈಲ್ SIM- ಆಧಾರ್ ಜೋಡಿಸಿ
ಈ ವೇಳೆ ಸುಪ್ರಿಂ ಕೋರ್ಟ್ ಕೇಂದ್ರ ಸರಕಾರ ಮತ್ತು ಮೊಬೈಲ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಈ ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರಕಾರ ಲಿಂಕ್ ಮಾಡಲು ಇರುವ ಕಾಲಾವಕಾಶವನ್ನು ಮಾರ್ಚ್ 2018ರವರೆಗೆ ಮುಂದೂಡುತ್ತೇವೆ ಎಂದು ಹೇಳಿತ್ತು. ಆದರೆ ವಿಚಾರಣೆ ವೇಳೆ ಲಿಂಕ್ ಮಾಡಿಲ್ಲ ಎಂಬ ಕಾರಣಕ್ಕೆ ಸಂಪರ್ಕ ಕಡಿತಗೊಳಿಸುವ ಸಾಧ್ಯತೆ ಇರುವುದರಿಂದ ಸಾಕಷ್ಟು ಕಾಲಾವಕಾಶ ನೀಡಿ ನೊಟೀಸ್ ಜಾರಿ ಮಾಡಿದೆ.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಸುಪ್ರೀಂ ಅಂಗಳದಲ್ಲಿ ಚೆಂಡು
ಇನ್ನು ಆಧಾರ್ ಕಡ್ಡಾಯವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಪಶ್ಚಿಮ ಬಂಗಾಳ ಸರಕಾರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಜ್ಯ ಸರಕಾರಗಳು ಶಾಸಕಾಂಗ ಜಾರಿಗೆ ತಂದ ಕಾನೂನುಗಳನ್ನು ಪ್ರಶ್ನಿಸಬಾರದು ಎಂದು ಹೇಳಿದೆ.
ಬೇಕಿದ್ದರೆ ವೈಯುಕ್ತಿಕವಾಗಿ ಮಮತಾ ಬ್ಯಾನರ್ಜಿ ಆರ್ಟಿಕಲ್ 32ರ ಅಡಿಯಲ್ಲಿ ಈ ಕಾನೂನನ್ನು ಪ್ರಶ್ನಿಸಲಿ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ನೆಲೆಯಲ್ಲಿ ಪ್ರಶ್ನಿಸುವುದು ಸರಿಯಲ್ಲ ಎಂದು ಹೇಳಿದೆ.