ನಿಮ್ಮ ಆಯ್ಕೆ, ಇಂಡೋ-ಪಾಕ್ ಪಂದ್ಯವೋ, ಅರ್ಥ್ ಅವರ್ರೋ?
ನವದೆಹಲಿ, ಮಾರ್ಚ್, 18: ನೀವು ಪರಿಸರ ಪ್ರೇಮಿ, ಕ್ರಿಕೆಟ್ ಅಭಿಮಾನಿಯೂ ಆಗಿದ್ದರೆ ಮಾರ್ಚ್ 19 ರಂದು ಗೊಂದಲಕ್ಕೆ ಒಳಗಾಗಲಿದ್ದೀರಿ. ಒಂದೆಡೆ ಭಾರತ-ಪಾಕಿಸ್ತಾನದ ನಡುವೆ ಟಿ-20 ವಿಶ್ವಕಪ್ ಪಂದ್ಯ ನಡೆಯಲಿದ್ದರೆ, ಇನ್ನೊಂದೆಡೆ ಜಾಗತಿಕ ತಾಪಮಾನ ನಿಯಂತ್ರಣ ಹಿನ್ನೆಲೆಯಲ್ಲಿ ಅದೇ ಸಮಯದಲ್ಲಿ "ಅರ್ಥ್ ಅವರ್" ಆಚರಿಸಲಾಗುತ್ತಿದೆ.
ಜಾಗತಿಕ ತಾಪಮಾನ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ವಿಶ್ವ ವನ್ಯನಿಧಿ (ಡಬ್ಲ್ಯುಡಬ್ಲ್ಯುಎಫ್) ಸಂಸ್ಥೆಯು 'ಅರ್ಥ್ ಅವರ್' ಆಚರಿಸುತ್ತಿದೆ.[ಅರ್ಥ್ ಅವರ್ ಎಂದರೇನು?]
ಮಹಾನಗರಗಳಲ್ಲಿ ಕತ್ತಲೆ: ಬೆಂಗಳೂರು ಸೇರಿದಂತೆ ನವದೆಹಲಿ ಮತ್ತು ಮುಂಬೈ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಶನಿವಾರ (ಮಾರ್ಚ್ 19) ರಾತ್ರಿ 8.30ರಿಂದ 9.30ರವರಗೆ ವಿದ್ಯುದ್ದೀಪಗಳನ್ನು ಆರಿಸಲಾಗುತ್ತದೆ.[ಅರ್ಥ್ ಅವರ್ ಗೆ ನಮ್ಮ ಬೆಂಬಲವಿದೆ, ನಿಮ್ಮದು?]
ಸೌರಶಕ್ತಿ ಸೇರಿದಂತೆ ನವೀಕೃತ ಇಂಧನಗಳನ್ನು ಹೆಚ್ಚು ಬಳಸುವಂತೆ ಜಾಗೃತಿ ಮೂಡಿಸುವುದು ಈ ಬಾರಿಯ ಆಂದೋಲನದ ಉದ್ದೇಶವಾಗಿದೆ. 'ಗೋ ಸೋಲಾರ್' ಘೋಷವಾಕ್ಯದಡಿ ಆಂದೋಲನ ನಡೆಯಲಿದೆ. ಕ್ರಿಟೆಗಿಗ ಶಿಖರ್ ಧವನ್ ಜಾಗೃತಿ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ.
ಇದು ಅರ್ಥ್ ಅವರ್ನ 10ನೇ ಆವೃತ್ತಿಯಾಗಿದೆ. 170 ದೇಶಗಳ ಕೋಟ್ಯಾಂತರ ಮಂದಿ 8.30ಕ್ಕೆ ವಿದ್ಯುತ್ ದೀಪಗಳನ್ನು ಆರಿಸಿ, ಜಾಗತಿಕ ತಾಪಮಾನ ಇಳಿಕೆಗೆ ನೆರವಾಗಲಿದ್ದಾರೆ. ಪ್ರಪಂಚದ ಒಟ್ಟಾರೆ 7000ಕ್ಕೂ ಹೆಚ್ಚು ನಗರಗಳು ಭಾಗಿಯಾಗಲಿವೆ.