"ಚೀನಾ- ಭಾರತ ಪರಸ್ಪರ ಸಹಕರಿಸಬೇಕೇ ವಿನಾ ವಿರುದ್ಧ ನಿಲ್ಲಬಾರದು"
ಚೀನಾ, ಜೂನ್ 09: ಚೀನಾ ಹಾಗೂ ಭಾರತ ಪರಸ್ಪರ ಸಹಕಾರದಿಂದಿರಬೇಕೇ ಹೊರತು ವಿರೋಧವಾಗಿ ನಿಲ್ಲಬಾರದು. ಸಮಾಲೋಚನೆ ಹಾಗೂ ಸಂವಾದದ ಮೂಲಕ ಎರಡೂ ದೇಶಗಳು ಗಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಚೀನಾ ರಾಯಭಾರಿ ಹೇಳಿದ್ದಾರೆ.
ಭಾರತ-ಚೀನಾ ಗಡಿ ವಿವಾದ ಇತಿಹಾಸದಿಂದಲೂ ಇದೆ. ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧದ ಮಾತುಕತೆಯಲ್ಲಿ ಗಡಿ ವಿವಾದವನ್ನು ಸೂಕ್ತವಾಗಿ ಪರಿಹರಿಸಬೇಕಿದೆ ಎಂದು ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.
ಪೂರ್ವ ಲಡಾಖ್ನಲ್ಲಿ ಹತ್ತಾರು ಚೀನಾ ಮಿಲಿಟರಿ ವಿಮಾನಗಳ ಹಾರಾಟ
ದೇಶ ದೇಶಗಳ ನಡುವೆ ಭಿನ್ನಾಭಿಪ್ರಾಯ ಇರುವುದು ಸಹಜ. ಗಡಿ ವಿವಾದ ಎಂಬುದು ಆಗಿನಿಂದಲೂ ಇದೆ. ಈ ಕುರಿತು ದ್ವಿಪಕ್ಷೀಯ ಸಂಬಂಧ ಮಾತುಕತೆಗಳಲ್ಲಿ ಸೂಕ್ತವಾಗಿ ಚರ್ಚಿಸಬೇಕು. ಸೂಕ್ತ ಸಮಾಲೋಚನೆ, ಸಂವಾದದ ಮೂಲಕ ವಿವಾದಗಳನ್ನು ಪರಿಹರಿಸಬೇಕೆಂಬುದನ್ನು ಬೀಜಿಂಗ್ ನಂಬಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಯುವ ಮುಖಂಡರೊಂದಿಗೆ ಮಂಗಳವಾರ ನಡೆದ ಆನ್ಲೈನ್ ಸಂವಾದದಲ್ಲಿ ಚೀನಾ ರಾಯಭಾರಿ ಮಾತನಾಡಿದ್ದಾರೆ.
ರಾಷ್ಟ್ರೀಯ ಸಾರ್ವಭಮತ್ವ, ಭದ್ರತೆ, ಅಭಿವೃದ್ಧಿ ಹಿತಾಸಕ್ತಿಗಳನ್ನು ಕಾಪಾಡುವ ನಮ್ಮ ದೃಢ ನಿಶ್ಚಯ ಅಚಲವಾಗಿದೆ ಎಂದಿರುವ ಅವರು, ಚೀನಾ ಹಾಗೂ ಭಾರತ ಪರಸ್ಪರ ಗೌರವಿಸಬೇಕು. ಸಮಾನವಾಗಿ ವರ್ತಿಸಬೇಕು. ಸಂವಾದದಲ್ಲಿ ತೊಡಗಿಕೊಳ್ಳಬೇಕು. ಎರಡೂ ದೇಶಗಳು ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳುವ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳಬೇಕು ಎಂದು ಸನ್ ಹೇಳಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಚೀನಾ ಹಾಗೂ ಭಾರತ ಪರಸ್ಪರ ಸಹಕಾರದಿಂದಿರುವುದು ಅವಶ್ಯಕ. ಸದ್ಯಕ್ಕೆ ಕೊರೊನಾ ಸಾಂಕ್ರಾಮಿಕ ರೋಗ ತಡೆಯೆಡೆಗೆ ಯೋಚಿಸಬೇಕು. ಆರ್ಥಿಕತೆ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಪೂರ್ವ ಲಡಾಖ್ನಲ್ಲಿ ಗಡಿಗೆ ಸಂಬಂಧಿಸಿದಂತೆ ಚೀನಾ ಹಾಗೂ ಭಾರತದ ನಡುವೆ ಭಿನ್ನಾಭಿಪ್ರಾಯಗಳಿವೆ. ಉಭಯ ರಾಷ್ಟ್ರಗಳ ನಾಯಕರು ಒಂದೆಡೆ ಕುಳಿತು ಚರ್ಚೆ ನಡೆಸಿದ್ದರೂ ಯಾವುದೇ ಫಲ ದೊರೆತಿಲ್ಲ.