ಉಗ್ರರಿಗಿಂತ ಜನರೇ ಹೆಚ್ಚು ಸತ್ತಿದ್ದು; ಕಾಂಗ್ರೆಸ್ ಹೇಳಿಕೆಗೆ 'ಜೈ' ಎಂದ ಉಗ್ರರು!
ನವದೆಹಲಿ, ಜೂನ್ 22: ಸೇನಾ ಕಾರ್ಯಾಚರಣೆಯಿಂದ ಉಗ್ರರಿಗಿಂತ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿದ್ದಾರೆ ಎನ್ನುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ವಿವಾದ ಸೃಷ್ಟಿಸಿದ್ದಾರೆ.
ಆಜಾದ್ ಅವರ ಹೇಳಿಕೆಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತಯಬಾ ಬೆಂಬಲಿಸಿದೆ.
ಜಮ್ಮು ಮತ್ತು ಕಾಶ್ಮೀರ: ಸೇನೆಯ ಬಲಕ್ಕೆ ನಾಲ್ವರು ಉಗ್ರರು ಬಲಿ
ಕಾಂಗ್ರೆಸ್ ಮುಖಂಡರೊಬ್ಬರು ಭಾರತದ ಸೇನೆಯ ಮೇಲೆ ಆರೋಪ ಹೊರಿಸುವ ಮತ್ತು ಉಗ್ರರ ಬಗ್ಗೆ ಸಹಾನುಭೂತಿ ತೋರುವ ರೀತಿ ಮಾತನ್ನಾಡಿರುವುದಕ್ಕೆ ಹಾಗೂ ಅದು ಭಯೋತ್ಪಾದನಾ ಸಂಘಟನೆಯೊಂದಕ್ಕೆ ಸಂತಸ ನೀಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೇನಾ ಪಡೆಗಳು ನಾಲ್ವರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ 20 ನಾಗರಿಕರನ್ನು ಕೊಂದು ಹಾಕುತ್ತವೆ. ಅವರ ಕ್ರಮಗಳು ಉಗ್ರರಿಗಿಂತ ನಾಗರಿಕರ ಮೇಲೆಯೇ ಹೆಚ್ಚಾಗಿರುತ್ತದೆ. ಉದಾಹರಣೆಗೆ ಅವರು ಪುಲ್ವಾಮಾದಲ್ಲಿ 13 ನಾಗರಿಕರನ್ನು ಮತ್ತು ಕೇವಲ 1 ಉಗ್ರರನ್ನು ಕೊಂದಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕಿದೆ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ 'ಆಲ್ ಔಟ್ ಆಪರೇಷನ್' ನಡೆಸುವುದಾಗಿ ಬಿಜೆಪಿ ಹೇಳಿದೆ. ಇದರರ್ಥ ಅಲ್ಲಿ ಹತ್ಯಾಕಾಂಡವೊಂದಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಆಜಾದ್ ಹೇಳಿದ್ದರು.
ನಬಿ ಹೇಳಿಕೆಗೆ ಜೈ ಎಂದ ಲಷ್ಕರ್ ನಾಯಕ
ಇ-ಮೇಲ್ ಹೇಳಿಕೆ ನೀಡಿರುವ ಲಷ್ಕರ್ ಎ ತಯಬಾ ಮುಖ್ಯಸ್ಥ ಮಹಮೂದ್ ಶಾ, ಆಜಾದ್ ಮತ್ತು ಕಾಂಗ್ರೆಸ್ನ ಇತರೆ ನಾಯಕರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾನೆ.
ಗುಲಾಂ ನಬಿ ಆಜಾದ್ ಮತ್ತು ಇತರರ ಅಭಿಪ್ರಾಯಗಳನ್ನು ನಾವು ಆರಂಭದಿಂದಲೂ ವ್ಯಕ್ತಪಡಿಸುತ್ತಿದ್ದೇವೆ. ಭಾರತವು ಅಮಾಯಕರ ಹತ್ಯಾಕಾಂಡ ನಡೆಸಲು ಮತ್ತು ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಮೂಲಕ ಜಗಮೋಹನ್ ಯುಗವನ್ನು ಮರಳಿ ತರುತ್ತಿದೆ. ರಂಜಾನ್ನಲ್ಲಿನ ಕದನ ವಿರಾಮ ಒಂದು ನಾಟಕ ಎಂದು ಆತ ಹೇಳಿದ್ದಾನೆ.
ಕಾಂಗ್ರೆಸ್ನಲ್ಲಿ ಆರ್ಎಸ್ಎಸ್ ಅಜೆಂಡಾ
ಮೆಹಬೂಬ ಮುಫ್ತಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಮಹಮೂದ್, ಕಣಿವೆ ಹಾಗೂ ಜಮ್ಮುವಿನಲ್ಲಿ ಆರ್ಎಸ್ಎಸ್ನ ಅಜೆಂಡಾವನ್ನು ಸ್ಥಾಪಿಸುವುದರಲ್ಲಿ ಮೆಹಬೂಬ ಮುಫ್ತಿ ಮಹತ್ವದ ಕಾರ್ಯ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದುದ್ದಕ್ಕೂ ಎಂಟು ಲಕ್ಷ ಭಾರತೀಯ ಪಡೆಗಳು ದೌರ್ಜನ್ಯಗಳನ್ನು ಎಸಗುತ್ತಿವೆ. ಹೆಚ್ಚುವರಿ ಪಡೆಗಳು ಶೋಷಣೆಯಿಂದ ಜನರು ಗುಲಾಮಗಿರಿಗೆ ಒಳಗಾಗುತ್ತಿದ್ದಾರೆ. ಕದನ ವಿರಾಮ ಎನ್ನುವುದು ಕೇವಲ ಒಂದು ನಾಟಕ. ಇದು ಶಾಂತಿ ಕಾಪಾಡುವ ಬೆಳವಣಿಗೆಯ ಉದ್ದೇಶಕ್ಕಲ್ಲ, ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಮಾಡಿದ ತಂತ್ರ ಎಂದು ಆತ ಹೇಳಿದ್ದಾನೆ.
|
ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ
ಕಾಂಗ್ರೆಸ್ ಮತ್ತು ಗುಲಾಂ ನಬಿ ಆಜಾದ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಈ ಘಟನೆಯನ್ನು 2005ರಲ್ಲಿ ಸೋರಿಕೆಯಾದ ವಿಕಿಲೀಕ್ಸ್ ಕೇಬಲ್ಗೆ ಹೋಲಿಸಿದ್ದಾರೆ.
ಲಷ್ಕರ್ ಎ ತಯಬಾಗಿಂತ ಹಿಂದೂ ಭಯೋತ್ಪಾದನೆ ಅಪಾಯಕಾರಿ ಎಂದು ರಾಹುಲ್ ಗಾಂಧಿ ಅವರು ಅಮೆರಿಕದ ರಾಯಭಾರ ಕಚೇರಿಗೆ ಹೇಳಿದ್ದು ವಿಕಿಲೀಕ್ಸ್ನಲ್ಲಿ ದಾಖಲಾಗಿತ್ತು.
ಈ ಹಿಂದೆ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಹೋಗಿ ಬಂದರು. ಆದರೆ, ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಿಲ್ಲ ಎಂದು ಸ್ವಾಮಿ ಉಲ್ಲೇಖಿಸಿದ್ದಾರೆ.
|
ನಾಚಿಕೆಯಾಗಬೇಕು
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದಕ್ಕೆ ಗುಲಾಂ ನಬಿ ಆಜಾದ್ ಮತ್ತು ಕಾಂಗ್ರೆಸ್ಗೆ ನಾಚಿಕೆಯಾಗಬೇಕು.
ಇದಕ್ಕೆ ಗುಲಾಂ ನಬಿ ಅವರ ಅಭಿಪ್ರಾಯ ನಮ್ಮದೂ ಹೌದು, ನಾವು ಹಿಂದಿನಿಂದಲೂ ಇದನ್ನೇ ಪ್ರತಿಪಾದಿಸುತ್ತಿದ್ದೇವೆ ಎಂದು ಅದಕ್ಕೆ ಲಷ್ಕರ್ ಮುಖ್ಯಸ್ಥನೇ ಬೆಂಬಲ ನೀಡಿದ್ದಾನೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ ಕೆಂಡಕಾರಿದ್ದಾರೆ.
|
ಸಾಯಿಸಿದ್ದು ಉಗ್ರರು, ತಿಳಿದಿರಲಿ
ಇದು ಉಗ್ರರ ಪರವಾದ ವ್ಯಕ್ತಿಗಳಿಂದ ಬಂದ ಹೇಳಿಕೆಯಾಗಿದ್ದರೆ ಅರ್ಥಮಾಡಿಕೊಳ್ಳುತ್ತಿದ್ದೆ. ಆದರೆ, ಈ ಹೇಳಿಕೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಂದ ಬಂದಿರುವುದು ವಿಷಾದನೀಯ.
ಸರ್, ಕಾಶ್ಮೀರವನ್ನು ರಕ್ಷಿಸಲು ಪಟತೊಟ್ಟಿರುವ ನಾಗರಿಕರನ್ನು, ಸೇನೆ ಮತ್ತು ಪೊಲೀಸರನ್ನು ಕೊಲ್ಲುತ್ತಿರುವುದು ಈ ಭಯೋತ್ಪಾದಕರು. ನಿಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುತ್ತೀರಿ ಎಂದು ವಿಶ್ವಾಸ ಹೊಂದಿದ್ದೇನೆ ಎಂದು ಕೆಂದ್ರ ಸಚಿವ ರಾಜ್ಯವರ್ಧನ ಸಿಂಗ್ ರಾಥೋರ್ ಹೇಳಿದ್ದಾರೆ.
ಕ್ರಮ ತೆಗೆದುಕೊಳ್ಳಲಿ: ಬಲೂನಿ
ಸೇನೆಯ ವಿರುದ್ಧ ಯಾವುದೇ ವಾಸ್ತವ ಅಂಶಗಳಿಲ್ಲದೆ ಆಧಾರರಹಿತ ಆರೋಪ ಮಾಡುತ್ತಿರುವ ಆಜಾದ್ ಅವರಂತಹ ನಾಯಕರ ವಿರುದ್ಧ ರಾಹುಲ್ ಗಾಂಧಿ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಅವು ಬಿಜೆಪಿಯನ್ನು ಗುರಿ ಮಾಡಿಕೊಳ್ಳಲಿ ಆದರೆ, ಸಶಸ್ತ್ರಪಡೆಗಳ ವಿರುದ್ಧ ನಕಾರಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ರಾಜ್ಯಸಭೆ ಸದಸ್ಯ ಅನಿಲ್ ಬಲೂನಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕರು ಸೇನಾ ಮುಖ್ಯಸ್ಥರ ಕುರಿತು ಲಘುವಾಗಿ ಮಾತನಾಡುತ್ತಾರೆ. ಮತ್ತು ಸಶಸ್ತ್ರ ಪಡೆಗಳ ಕುರಿತು ನಿರಂತರವಾಗಿ ಪ್ರಶ್ನಿಸುತ್ತಾರೆ. ಆಜಾದ್ ಅವರಂತಹ ಹಿರಿಯರು ಈ ರೀತಿ ಹೇಳಿಕೆ ನೀಡುತ್ತಿರುವುದು ನೋವಿನ ಸಂಗತಿ. ಕಾಂಗ್ರೆಸ್ ಪಕ್ಷ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
|
ಭಾರತಕ್ಕೆ ಗಂಭೀರ ಬೆದರಿಕೆ
ಜಮ್ಮ ಮತ್ತು ಕಾಶ್ಮೀರ ಸಮಸ್ಯೆಯಲ್ಲಿ ಭಾರತ ವಿರೋಧಿ ಧ್ವನಿಗಳನ್ನು ಬೆಂಬಲಿಸಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಕಾಂಗ್ರೆಸ್ ಗಂಭೀರ ಬೆದರಿಕೆಯಾಗಿದೆ. ಬಿಜೆಪಿ ವಿರುದ್ಧದ ಅವರ ದ್ವೇಷವು ದೇಶವನ್ನು ಒಡೆಯಲು ನಿಂತಿರುವವರ ಪರವಾಗಿ ಇರುವಂತೆ ಮಾಡಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.