ಛತ್ತೀಸ್ಗಢ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ: ಮತ್ತಷ್ಟು ಶಾಸಕರು ದೆಹಲಿಗೆ
ನವದೆಹಲಿ, ಅಕ್ಟೋಬರ್ 02: ಛತ್ತೀಸ್ಗಢದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮತ್ತಷ್ಟು ಶಾಸಕರು ದೆಹಲಿಗೆ ಧಾವಿಸಿದ್ದಾರೆ.
ದೇಶದ ಹಲವು ರಾಜ್ಯಗಳ ಕಾಂಗ್ರೆಸ್ ಘಟಕಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಧಿಕಾರಕ್ಕಾಗಿ ಅಥವಾ ಮುಂದಿನ ಇತರ ವಿಚಾರಗಳಿಗಾಗಿ ಕಿತ್ತಾಟ ಆರಂಭವಾಗಿದೆ. ಕೆಲವು ತಿಂಗಳುಗಳ ಹಿಂದೆ ಛತ್ತೀಸ್ಗಢದಲ್ಲಿ ಆರಂಭವಾಗಿದ್ದ ಕಾಂಗ್ರೆಸ್ ಒಳಜಗಳ ದೆಹಲಿ ತಲುಪಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭೂಪೇಶ್ ಬಘೇಲ್ ಪರ ಶಾಸಕರು ಇಲ್ಲಿ ಬಲಪ್ರದರ್ಶನವೆಂಬುದು ಇಲ್ಲ. ಅವರು ತಮ್ಮ ತಮ್ಮ ಸ್ವಂತ ವಿಚಾರಗಳಿಗೆ ದೆಹಲಿಗೆ ತೆರಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಛತ್ತೀಸ್ಗಢದಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ ಹಲವಾರು ಶಾಸಕರು ದೆಹಲಿಗೆ ಭೇಟಿಯಾಗುತ್ತಿದ್ದಾರೆ. ಸಿಎಂ ಭೂಪೇಶ್ ಬಘೇಲ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಅವರ ಬೆಂಬಲಿಗ ಶಾಸಕರು ದೆಹಲಿಗೆ ತೆರಳಿದ್ದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಬಘೇಲ್ಗೆ ಆಪ್ತರಾಗಿರುವ ಶಾಸಕರು ದೆಹಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ 20 ಮಂದಿ ಶಾಸಕರು ದೆಹಲಿಗೆ ತಲುಪಿದ್ದು, ಇನ್ನೂ ಹತ್ತು ಶಾಸಕರು ದೆಹಲಿಗೆ ತೆರಳಲಿದ್ದಾರೆ . ಅವರು ಬಘೇಲ್ ಆಪ್ತರು ಎಂದು ತಿಳಿದು ಬಂದಿದೆ.
ಭೂಪೇಶ್ ಬಘೇಲ್ ಸಿಎಂ ಆದಾಗಿನಿಂದಲೂ ಛತ್ತೀಸ್ಗಢ ಕಾಂಗ್ರೆಸ್ನಲ್ಲಿ ಆಗಾಗ ಸ್ವಲ್ಪ ಮಟ್ಟದ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿದ್ದವು. ಚುನಾವಣೆ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದ, ಈಗ ಆರೋಗ್ಯ ಸಚಿವ ತ್ರಿಭುವನೇಶ್ವರ್ ಸರಣ್ ಸಿಂಗ್ ಡಿಯೋ ಅಥವಾ ಟಿ.ಎಸ್.ಡಿಯೋ ಅವರೇ ವಿಧಾನಸಭಾ ಚುನಾವಣೆ ಗೆಲುವಿಗೆ ಕಾರಣ ಎಂದು ಅವರ ಬೆಂಬಲಿಗರು ಹೇಳಿಕೊಂಡಿದ್ದರು.
ಟಿ.ಎಸ್.ಡಿಯೋ ಬೆಂಬಲಿಗರು ಜೂನ್ನಿಂದ ಇಲ್ಲಿಯವರೆಗೆ ದೆಹಲಿ ತಲುಪಿ ಡಿಯೋ ಪರವಾಗಿ ಬಲಪ್ರದರ್ಶನ ಮಾಡಲು ಮುಂದಾಗಿದ್ದರು. ಇದೇ ಕಾರಣದಿಂದ ಈಗ ಬಘೇಲ್ ಪರವಾಗಿ ಶಾಸಕರು ದೆಹಲಿಗೆ ತೆರಳಿದ್ದಾರೆ. ಇವರ ಜೊತೆಗೆ ಭೂಪೇಶ್ ಬಘೇಲ್ ಕೂಡಾ ದೆಹಲಿಯಲ್ಲಿ ಕ್ಯಾಂಪ್ ಹೂಡಿದ್ದಾರೆ.
ಕೆಲವು ಬೆಂಬಲಿಗರು ಟಿ.ಎಸ್.ಡಿಯೋ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಸಿಎಂ ಸ್ಥಾನ ಟಿ.ಎಸ್.ಡಿಯೋಗೆ ಒಲಿಯಲಿಲ್ಲ. ಜೂನ್ನಲ್ಲಿ ಬಘೇಲ್ ಸರ್ಕಾರವು ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಮತ್ತೆರಡು ವರ್ಷಗಳಿಗಾದರೂ ಸಿಎಂ ಆಗಿ ಟಿ.ಎಸ್.ಡಿಯೋ ಅವರನ್ನು ನೇಮಿಸಬೇಕೆಂಬ ಒತ್ತಡ ಹೆಚ್ಚಾಗಿದೆ.
ರಾಜ್ಯದಲ್ಲಿ ಸಿಎಂ ಬಘೇಲ್ ಹಾಗೂ ಆರೋಗ್ಯ ಸಚಿವ ಟಿ ಎಸ್ ಸಿಂಗ್ ದೇವ್ ನಡುವೆ ಪೈಪೋಟಿ ನಡೆಯುತ್ತಿದ್ದು ಪಂಜಾಬ್ ಮಾದರಿಯಲ್ಲೇ ಇಲ್ಲೂ ಸಿಎಂ ಬದಲಾವಣೆಯಾಗುವ ಸಾಧ್ಯತೆಯನ್ನು ವಿಶ್ಲೇಷಿಸಲಾಗುತ್ತಿದೆ.
ಆದರೆ ಇದನ್ನು ಅಲ್ಲಗಳೆದಿರುವ ಬೃಹಸ್ಪತ್ ಸಿಂಗ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ, ನಮ್ಮದು ಪಂಜಾಬ್ ನಂತಹ ಪರಿಸ್ಥಿತಿ ಇಲ್ಲ" ಎಂದು ಹೇಳಿದ್ದಾರೆ.
ಛತ್ತೀಸ್ ಗಢದ 15-16 ಶಾಸಕರು ಕಳೆದ ಬುಧವಾರ ರಾತ್ರಿ ದೆಹಲಿಗೆ ಆಗಮಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ತಂಗಿದ್ದಾರೆ. ಶಾಸಕರು ರಾಜ್ಯ ಉಸ್ತುವಾರಿ ಪಿಎಲ್ ಪುನಿಯಾ ಅವರನ್ನು ಭೇಟಿ ಮಾಡಲಿದ್ದು, ಎಲ್ಲಾ ಶಾಸಕರಿಗೂ ಉಪಯೋಗವಾಗುವಂತೆ ಮಾಡಲು ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವೇಳಾಪಟ್ಟಿಯನ್ನು ವಿಸ್ತರಿಸಲು ಮನವಿ ಮಾಡಲಿದ್ದಾರೆ ಎಂದು ರಾಮಾನುಜ್ ಗಂಜ್ ನ ಶಾಸಕ ಬೃಹಸ್ಪತ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಮೂಲಕ ಛತ್ತೀಸ್ ಗಢದಲ್ಲಿ ರಾಜಕೀಯ ಮೇಲಾಟ ಪ್ರಾರಂಭವಾಗಿದೆ. ರಾಜಕೀಯ ವಲಯದಲ್ಲಿ ಶಾಸಕರ ಈ ಭೇಟಿಯನ್ನು ಹಾಲಿ ಸಿಎಂ ಭೂಪೇಶ್ ಬಘೇಲ್ ಅವರನ್ನು ಬೆಂಬಲಿಸುವ ನಿರ್ಧಾರವನ್ನು ಹೈಕಮಾಂಡ್ ಗೆ ತಲುಪಿಸುವುದಕ್ಕಾಗಿ ಎಂಬ ಮಾತುಗಳು ಕೇಳಿಬರುತ್ತಿವೆ.