ಲಮೋ ನಾಳೆ ಅರ್ನಾಬ್ ಹೆಸರು ಹೇಳಿದ್ರೂ ಅಚ್ಚರಿ ಏನಿಲ್ಲ!
ಬೆಂಗಳೂರು, ಜೂ, 26: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಲಲಿತ್ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಲಲಿತ್ ಮೋದಿ ತಮ್ಮ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮದ ಮಾಲೀಕನ ಹೆಸರನ್ನು ನಾಳೆ ಹೇಳಬಹುದು ಎಂದು ವ್ಯಂಗವಾಡಿದ್ದಾರೆ.
ಗಾಂಧಿ ಕುಟುಂಬವನ್ನು ಭೇಟಿಯಾದೆ ಎಂದು ಗುರುವಾರ ಹೇಳಿದ್ದ ಲಲಿತ್ ಮೋದಿ ಇಂದು ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುವ ಇಂಥವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜನರ ದೃಷ್ಟಿಯಲ್ಲಿ ನಗೆಪಾಟಲಿಗೆ ಗುರಿಯಾಗುತ್ತಾರೆ ಎಂದು ಹೇಳಿದ್ದಾರೆ.[ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ನಾಲ್ಕು ಘಟವಾಣಿಯರು]
ಲಲಿತ್ ಮೋದಿ ಮಾಧ್ಯಮ ಮತ್ತು ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುತ್ತಾರೆ ಅಂದುಕೊಂಡಂತಿದೆ ಎಂದು ಕಟುಕಿದ್ದಾರೆ.
ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಾಗಲ್ಲ. ಇಂಥವರು ನೀಡುತ್ತಿರುವ ಹೇಳಿಕೆಗಳ ಹಿಂದಿನ ಮರ್ಮ ಏನು ಎಂಬುದು ಜನರಿಗೆ ಅರಿವಾಗಲು ಬಹಳ ಕಾಲ ಬೇಡ ಎಂದಿದ್ದಾರೆ.[ಲಲಿತ್ ಮೋದಿ-ಸುಷ್ಮಾ ವಿವಾದದ ಸಂಪೂರ್ಣ ಚಿತ್ರಣ]
ವಸುಂಧರಾ ರಾಜೇ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ , ಮೋದಿ ಮತ್ತು ಅವರ ನಡುವೆ ಯಾವುದೇ ಹಣಕಾಸು ವ್ಯವಹಾರ ನಡೆದ ದಾಖಲೆಯಿಲ್ಲ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ಎಂದರೆ ಸಾರ್ವಜನಿಕ ಹಣ ದುರುಪಯೋಗ ತಾನೆ? ಅವರು ವೃತ್ತಿಗೆ ಹಣ ಪಡೆದುಕೊಂಡರೆ ತಪ್ಪೇನು ಎಂದು ರಾಜೇ ಮಗ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.