ಸೋಂಕು ನಿಯಂತ್ರಣಕ್ಕೆ ಕನಿಷ್ಠ ಎರಡು ತಿಂಗಳಾದರೂ ನಿರ್ಬಂಧ ಅತ್ಯಗತ್ಯ; ಕೋವಿಡ್ ಕಾರ್ಯಪಡೆ
ನವದೆಹಲಿ, ಏಪ್ರಿಲ್ 17: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗಿದ್ದು, ಸೋಂಕಿನ ನಿಯಂತ್ರಣಕ್ಕೆ ಕನಿಷ್ಠ ಎರಡು ತಿಂಗಳ ಮಟ್ಟಿಗಾದರೂ ಒಳಾಂಗಣ ಕೂಟ, ಸಭೆ ಸಮಾರಂಭ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಲ್ಯಾನ್ಸೆಟ್ ಕೋವಿಡ್ 19 ಆಯೋಗದ ಭಾರತದ ಕಾರ್ಯಪಡೆ ಸಲಹೆ ನೀಡಿದೆ. ಇದರಿಂದ ದೇಶದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ನೆರವಾಗುತ್ತದೆ ಎಂದು ತಿಳಿಸಿದೆ.
ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಸಭೆ ಸಮಾರಂಭಗಳಿಂದಲೇ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಎಂದು ತಿಳಿಸಿದೆ. ಮುಂದಿನ ಎರಡು ತಿಂಗಳ ಕಾಲ ಹತ್ತಕ್ಕೂ ಹೆಚ್ಚು ಮಂದಿ ಒಂದೆಡೆ ಸೇರುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲೇಬೇಕೆಂದು ಬಲವಾಗಿ ಶಿಫಾರಸ್ಸು ಮಾಡುವುದಾಗಿ ಹೇಳಿದೆ.
ಕೊರೊನಾ ಪಾಸಿಟಿವ್ ಇದ್ದರೂ "ನೆಗೆಟಿವ್" ವರದಿ; ಹೀಗಾಗುತ್ತಿರುವುದೇಕೆ?
ಆದರೆ ದೇಶದಲ್ಲಿ ಪ್ರಕರಣಗಳು ಹೀಗೆ ಏರಿಕೆಯಾಗುತ್ತಿದ್ದರೂ ಚುನಾವಣಾ ಆಯೋಗ ಚುನಾವಣಾ ಸಮಾವೇಶಗಳನ್ನು ರದ್ದುಪಡಿಸಿಲ್ಲ ಏಕೆ ಎಂಬುದು ಬಹುಮುಖ್ಯ ಅಂಶವಾಗಿದೆ. ಕೊರೊನಾ ನಡುವೆಯೂ ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಯ ಪ್ರಚಾರ, ಮತದಾನ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಪ್ರಶ್ನಿಸಿದೆ.
ಇದರ ನಡುವೆ ಉತ್ತರಾಖಂಡದ ಹರಿದ್ವಾರದಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಅಲ್ಲಿಯೂ ಸೋಂಕು ಹೆಚ್ಚಳವಾಗುತ್ತಿರುವುದನ್ನು ಗಮನಿಸಲೇಬೇಕಿದೆ. ಆಂಧ್ರ ಪ್ರದೇಶ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಹೆಚ್ಚಿನ ಜನ ಸೇರಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಲೇ ಇದ್ದಾರೆ. ಇದರ ಮೇಲೂ ನಿಯಂತ್ರಣ ಇಲ್ಲವಾಗಿದೆ. ಇವೆಲ್ಲವನ್ನೂ ಗಮನಿಸಿ ರಾಜ್ಯ ಸರ್ಕಾರಗಳು, ಒಳಾಂಗಣ ಹಾಗೂ ಹೊರಾಂಗಣದಲ್ಲಿ ಜನ ಸೇರುವುದರ ಮೇಲೆ ನಿರ್ಬಂಧ ಹೇರಬೇಕಿದೆ. ಆದರೆ ಈ ಕೆಲಸಗಳು ಇನ್ನೂ ನಡೆಯುತ್ತಿಲ್ಲ. ಸಾರ್ವಜನಿಕರ ಆರೋಗ್ಯವೇ ಮುಖ್ಯ ಎಂಬುದನ್ನು ಎಲ್ಲಾ ಸರ್ಕಾರಗಳೂ ಅರಿತುಕೊಳ್ಳಬೇಕಿದೆ ಎಂದು ಆಯೋಗ ತಿಳಿಸಿದೆ.
ಸಿನಿಮಾ ಮಂದಿರಗಳನ್ನು, ಕ್ರೀಡಾಕೂಟಗಳನ್ನು, ಸಭೆ ಸಮಾರಂಭಗಳನ್ನು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಿರ್ಬಂಧಿಸಬೇಕಿದೆ. ಈ ನಿರ್ಬಂಧಗಳೊಂದಿಗೆ ಟ್ರೇಸಿಂಗ್, ಟೆಸ್ಟಿಂಗ್ ಐಸೊಲೇಟಿಂಗ್ ಕೂಡ ರಾಜ್ಯಗಳಲ್ಲಿ ಸಮರ್ಪಕವಾಗಿ ನಡೆಯಬೇಕಿದೆ ಎಂದು ಸಲಹೆ ನೀಡಿದೆ.