ಮಗನ ಚಿಂತೆಯಲ್ಲಿ ಲಾಲೂಗೆ ನಿದ್ದೆ ಬರ್ತಿಲ್ಲ, ಶುಗರ್ ನಿಯಂತ್ರಣ ಇಲ್ಲ
ರಾಂಚಿ, ನವೆಂಬರ್ 9: ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಮದುವೆ ಮುರಿದುಕೊಳ್ಳಲು ನಿರ್ಧಾರ ಮಾಡಿರುವುದರಿಂದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಒತ್ತಡಕ್ಕೆ ಸಿಲುಕಿ, ನಿದ್ದೆಯಿಲ್ಲದ ರಾತ್ರಿ ಕಳೆಯುವಂತಾಗಿದೆ.
ಬಹುಕೋಟಿ ಮೇವು ಹಗರಣದಲ್ಲಿ ಅವರಿಗೆ ಜೈಲು ಶಿಕ್ಷೆ ಆಗಿದ್ದು, ಅನಾರೋಗ್ಯ ಸಮಸ್ಯೆ ಕಾರಣಕ್ಕೆ ಜಾರ್ಖಂಡ್ ನ ರಾಜಧಾನಿ ರಾಂಚಿಯಲ್ಲಿರುವ ರಾಜೇಂದ್ರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಐಶ್ವರ್ಯ ರೈಗೆ ವಿವಾಹ ವಿಚ್ಛೇದನದ ನೋಟಿಸ್ ಕಳಿಸಿದ ತೇಜ್
ತಮ್ಮ ಪತ್ನಿಗೆ ವಿವಾಹ ವಿಚ್ಛೇದನ ನೀಡುವ ಕುರಿತು ಮಾತುಕತೆ ನಡೆಸುವ ಸಲುವಾಗಿ ವಾರದ ಹಿಂದೆ ತೇಜ್ ಪ್ರತಾಪ್ ಯಾದವ್ ಅವರು ಲಾಲೂ ಪ್ರಸಾದ್ ರನ್ನು ಭೇಟಿ ಆಗಿದ್ದರು. ಎರಡು ಗಂಟೆಗಳ ಕಾಲ ಅಪ್ಪ-ಮಕ್ಕಳು ಮಾತುಕತೆ ನಡೆಸಿದ್ದು, ಮಗನ ಮನವೊಲಿಸಿ, ವಿಚ್ಛೇದನ ನಿರ್ಧಾರದಿಂದ ಹಿಂತೆಗೆಯುವಂತೆ ಮಾಡುವಲ್ಲಿ ಲಾಲೂ ವಿಫಲರಾಗಿದ್ದಾರೆ.
ಬಿಹಾರದ ಮಾಜಿ ಸಚಿವರಾದ ಚಂದ್ರಿಕಾ ರಾಯ್ ಮಗಳು ಐಶ್ವರ್ಯಾರನ್ನು ತೇಜ್ ಪ್ರತಾಪ್ ಈ ವರ್ಷದ ಮೇ ತಿಂಗಳಲ್ಲಿ ಮದುವೆ ಆಗಿದ್ದಾರೆ. ಆದರೆ ಡೈವೋರ್ಸ್ ನೀಡಲು ತೀರ್ಮಾನ ಮಾಡಿದ್ದಾರೆ.
"ಆತಂಅ ಹಾಗೂ ಒತ್ತಡ ಲಾಲೂ ಯಾದವ್ ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಅವರಿಗೆ ಈಗ ಎಪ್ಪತ್ತರ ಹತ್ತಿರ ವಯಸ್ಸಾಗಿದೆ. ದಿನಕ್ಕೆ ಹದಿನಾಲ್ಕು-ಹದಿನೈದು ಬಗೆಯ ಔಷಧ ತೆಗೆದುಕೊಳ್ತಾರೆ. ಒತ್ತಡ ಹಾಗೂ ಸರಿಯಾದ ನಿದ್ದೆ ಇಲ್ಲದ ಕಾರಣಕ್ಕೆ ಅವರ ಆರೋಗ್ಯದ ಮೇಲೆ ಒತ್ತಡ ಬಿದ್ದಿದೆ. ಮಧುಮೇಹ, ಕಿಡ್ನಿಗೆ ಸಂಬಂಧಿಸಿದ ತೊಂದರೆ ಸೇರಿ ವಿವಿಧ ಆರೋಗ್ಯ ಸಮಸ್ಯೆ ಇದೆ. ಹೆಚ್ಚಿನ ಡೊಸೇಜ್ ನ ಇನ್ಸುಲಿನ್ ನೀಡಲಾಗುತ್ತಿದೆ" ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
IRCTC ಹಗರಣ: ರಾಬ್ರಿ, ತೇಜಸ್ವಿ ಯಾದವ್ ಗೆ ಜಾಮೀನು
ಕಳೆದ ಮೂರು ದಿನಗಳಿಂದ ಮಧುಮೇಹದ ಪ್ರಮಾಣದ ವಿಪರೀತ ಏರಿಳಿತ ಇರುವುದರಿಂದ ಇನ್ಸುಲಿನ್ ಡೋಸೇಜ್ ಹೆಚ್ಚಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ತಡರಾತ್ರಿ ತನಕ ಲಾಲೂ ಪ್ರಸಾದ್ ಎಚ್ಚರವಾಗಿಯೇ ಇರುತ್ತಾರೆ. ಕುಟುಂಬದ ಸಮಸ್ಯೆ ಬಗ್ಗೆ ಚಿಂತಿಸುತ್ತಾ ಬಹಳ ಕಡಿಮೆ ನಿದ್ದೆ ಮಾಡುತ್ತಾರೆ. ಅದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲಿ ಎಂದಿದ್ದಾರೆ ವೈದ್ಯರು.
ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಗೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಹದಿನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.