ಮೇವು ಪ್ರಕರಣ: ಲಾಲೂ ಪ್ರಸಾದ್ ಯಾದವ್ ಗೆ ಮೂರೂವರೆ ವರ್ಷ ಜೈಲು
ರಾಂಚಿ, ಜನವರಿ 6: ಮೇವು ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಗೆ ಮೂರೂವರೆ ವರ್ಷ ಜೈಲು ಹಾಗೂ 5 ಲಕ್ಷ ರು. ದಂಡ ವಿಧಿಸಿ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಲಾಲೂ ಪ್ರಸಾದ್ ಸೇರಿದಂತೆ ಇತರೆ ಆರೋಪಿಗಳಾದ ರಾಜರಾಮ್, ಸುಶೀಲ್ ಕುಮಾರ್, ಜೂಲಿಯು, ಸುಧೀರ್ ಕುಮಾರ್, ಮಹೇಶ್ ಪ್ರಸಾದ್, ಸುನಿಲ್ ಕುಮಾರ್ ಮತ್ತು ಪೌಲ್ ಚಂದ್ ಗೆ ತಲಾ 3.5 ಜೈಲು ಹಾಗೂ 5 ಲಕ್ಷ ರು. ದಂಡ ವಿಧಿಸಿ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಮೂರ್ತಿ ಶಿವಪಾಲ್ ಸಿಂಗ್ ಅವರು ಶನಿವಾರ ಆದೇಶ ಹೊರಡಿಸಿದರು.
ಮೇವು ಹಗರಣ ಬಯಲಿಗೆಳೆದ 'ಹೀರೋ' ಬಿಸ್ವಾಸ್
ಶಿಕ್ಷೆಗೆ ಗುರಿಯಾಗಿರುವ ಎಲ್ಲಾ ಆರೋಪಿಗಳಿಗೆ ರಾಂಚಿ ಕೋರ್ಟ್ ಜಾಮೀನು ನೀಡಲು ಬರುವುದಿಲ್ಲ. ಆದ್ದರಿಂದ ಆರೋಪಿಗಳು ಜಾಮೀನು ಪಡೆಯಲು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ ಸುಪ್ರೀಂಕೋರ್ಟ್ ಗೆ ಹೋಗಲು ಅವಕಾಶ ಇದೆ.
ದೇವಘರ್ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ದೋಷಿ ಎಂದು ಡಿಸೆಂಬರ್ 23 ರಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಅಂತಿಮ ತೀರ್ಪನ್ನು ನೀಡಿತ್ತು. ಆದರೆ, ಶಿಕ್ಷೆ ಪ್ರಮಾಣವನ್ನು ಕೋರ್ಟ್ ಜನವರಿ 3ಕ್ಕೆ ಪ್ರಕಟಿಸಬೇಕಿತ್ತು, ಕಾರಣಾಂತರಗಳಿಂದ ಎರಡು ಬಾರಿ ಮುಂದೂಡಿ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.
ಲಾಲೂನ ಜೈಲಿಗೆ ಕರೆದೊಯ್ದ 900 ಕೋಟಿ ಮೇವು ಹಗರಣದ ಟೈಮ್ ಲೈನ್
ಲಾಲೂ ಸೇರಿ 22 ಆರೋಪಿಗಳ ಪೈಕಿ 7 ಜನರಿಗೆ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ.ಒಟ್ಟು 6 ಪ್ರಕರಣಗಳಲ್ಲಿ ಎರಡು ಪ್ರಕರಣಕ್ಕೆ ತೀರ್ಪು ಪ್ರಕಟಿಸಿದ್ದು, ಇನ್ನುಳಿದ 4 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಇದೇ ಪ್ರಕರಣದಲ್ಲಿ ಲಾಲು ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಅದರಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಸುಪ್ರೀಂ ಕೋರ್ಟ್ ನೀಡಿದ ಜಾಮೀನಿನ ಮೇಲೆ ಹೊರಬಂದಿದ್ದರು. 1996ರಲ್ಲಿ ಬೆಳಕಿಗೆ ಬಂದ ಈ ಪ್ರಕರಣದ ವಿಚಾರಣೆ ಡಿಸೆಂಬರ್ 13, 2017ಕ್ಕೆ ಅಂತ್ಯವಾಗಿತ್ತು.
ಪಶುಗಳಿಗೆ ಮೇವು ಪೂರೈಸುವುದಾಗಿ ಸುಳ್ಳು ಬಿಲ್ಲು ಸೃಷ್ಟಿಸಿ ಅಕ್ರಮವಾಗಿ ದೇವಗಡ್ ಖಜಾನೆಯಿದ 89 ಲಕ್ಷ ರು ಪಡೆದ ಆರೋಪ ಎದುರುಸುತ್ತಿದ್ದರು. 1994-1996 ರಲ್ಲಿ ಬಿಹಾರದಲ್ಲಿ ನಡೆದ ಈ ಹಗರಣದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವ ಉದ್ದೇಶದಿಂದ ಡಿಯೋದರ್(ಈಗ ಜಾರ್ಖಾಂಡ್ ರಾಜ್ಯದಲ್ಲಿದೆ) ಎಂಬ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ ಈ ಹಣವನ್ನು ಮೂಲ ಉದ್ದೇಶಕ್ಕಾಗಿ ಬಳಸಿಕೊಳ್ಳದೆ ಬಿಹಾರದ ಆಗಿನ ಮುಖ್ಯಮಂತ್ರಿಯಾಗಿದ್ದ ಲಾಲೂ ಯಾದವ್ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂಬುದು ಆರೋಪವಾಗಿತ್ತು.