ಮೈಸೂರಿನ ಲಲಿತ ಮಹಲ್ ಹೋಟೆಲ್ ಕರ್ನಾಟಕ ಸರಕಾರಕ್ಕೆ : ಜೇಟ್ಲಿ
ನವದೆಹಲಿ, ಸೆಪ್ಟೆಂಬರ್ 20: ಮೈಸೂರಿನ ಐತಿಹಾಸಿಕ ಲಲಿತ ಮಹಲ್ ಪ್ಯಾಲೇಸ್ ಹೊಟೇಲ್ ನ್ನು ಕರ್ನಾಟಕ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ. 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಈ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ನಿರ್ವಹಣೆ ಮಾಡುತ್ತಿದ್ದವು. ಇದೀಗ ಸಂಪೂರ್ಣವಾಗಿ ರಾಜ್ಯ ಸರಕಾರಕ್ಕೆ ಈ ಹೋಟೇಲನ್ನು ಹಸ್ತಾಂತರಿಸಲಾಗುತ್ತದೆ.
ಇದರ ಜತೆಗೆ ಐಟಿಡಿಸಿ ಕೈಯಲ್ಲಿದ್ದ ಹೋಟೆಲ್ ಜೈಪುರ್ ಅಶೋಕ್ ನ್ನು ರಾಜಸ್ಥಾನ ಸರಕಾರಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ರೈಲ್ವೇ ನೌಕರರಿಗೆ ದಸರಾ ಉಡುಗೊರೆಯಾಗಿ ಬೋನಸ್ ಘೋಷಿಸಲಾಗಿದೆ. ಜಮ್ಮು ಕಾಶ್ಮೀರದ ವಿಶೇಷ ಕೈಗಾರಿಗೆ ಉತ್ತೇಜನ ಯೋಜನೆ ಮತ್ತು ಉಡಾನ್ ಯೋಜನೆಯ ಅವಧಿಯನ್ನು ಡಿಸೆಂಬರ್ 31ರವೆರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಇನ್ನು ರೋಹಿಂಗ್ಯಾ ಸಮಸ್ಯೆ ಬಗ್ಗೆ ಮಾತನಾಡಿರುವ ಅರುಣ್ ಜೇಟ್ಲಿ ಇದು ಕಾನೂನು ವಿಚಾರ, ಈ ಕುರಿತು ಸುಪ್ರಿಂ ಕೋರ್ಟ್ ಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿದೆ ಎಂದಷ್ಟೇ ಹೇಳಿದ್ದಾರೆ.