'ಶಾಂತಿಗೆ ಭಂಗ ತರುವ ಯತ್ನ' ಎಂದು ಕೇರಳ ಕಾಂಗ್ರೆಸ್ ನಾಯಕರ ಪ್ರವೇಶಕ್ಕೆ ಲಕ್ಷದ್ವೀಪ ನಿರಾಕರಣೆ
ನವದೆಹಲಿ, ಜು.04: ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ರ ಹೊಸ ಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ದ್ವೀಪಸಮೂಹದಲ್ಲಿನ ಆಡಳಿತವು ಕೇರಳ ಕಾಂಗ್ರೆಸ್ ಮುಖಂಡರಿಗೆ ದ್ವೀಪವನ್ನು ಪ್ರವೇಶಿಸಲು ಅನುಮತಿ ನಿರಾಕರಿಸಿದೆ. ಆ ಭೇಟಿಯು ಈ ಪ್ರದೇಶದ ಶಾಂತಿಯುತ ವಾತಾವರಣಕ್ಕೆ ತೊಂದರೆ ಉಂಟು ಮಾಡುತ್ತದೆ ಎಂದು ಆಡಳಿತ ಹೇಳಿದೆ.
ಜುಲೈ 3 ರಂದು ತನ್ನ ಆದೇಶದಲ್ಲಿ, ಕಾಂಗ್ರೆಸ್ ಶಾಸಕರಾದ ಹಿಬಿ ಈಡೆನ್ ಮತ್ತು ಟಿ.ಎನ್.ಪ್ರಥಾಪನ್ ದ್ವೀಪಕ್ಕೆ ಭೇಟಿ ನೀಡುವ ಅರ್ಜಿಯನ್ನು ಆಡಳಿತ ತಿರಸ್ಕರಿಸಿತು. ಅನುಮತಿಯನ್ನು ನಿರಾಕರಿಸಿದ ಆಡಳಿತ, ಈ ಭೇಟಿಯು "ಶಾಂತಿಯುತ ವಾತಾವರಣಕ್ಕೆ ಭಂಗ ತರುವ" ಯೋಜಿತ ಪ್ರಯತ್ನಗಳ ಒಂದು ಭಾಗವೆಂದು ದೂರಿದೆ. ಹಾಗೆಯೇ "ಈ ಭೇಟಿಯು ಕೋವಿಡ್ ಪ್ರಕರಣಗಳಲ್ಲಿ ಉಲ್ಬಣಕ್ಕೆ ಕಾರಣವಾಗಬಹುದು," ಎಂದು ಸುದ್ದಿ ಸಂಸ್ಥೆ ಎಎನ್ಗೆ ತಿಳಿಸಿದೆ.
ಕೇರಳದಿಂದ ಕರ್ನಾಟಕ ಹೈಕೋರ್ಟ್ಗೆ ಕಾನೂನು ವ್ಯಾಪ್ತಿ ಬದಲಾವಣೆಗೆ ಲಕ್ಷದ್ವೀಪ ಆಡಳಿತ ಪ್ರಸ್ತಾಪ
"ಆಡಳಿತದ ಹೊಸ ನೀತಿಗಳಿಂದಾಗಿ ದ್ವೀಪವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶ ಇದೆ ಎಂದು ಹೇಳುವ ಕಾಂಗ್ರೆಸ್ ಸಂಸದರ ಭೇಟಿಯು ಒಂದು ರಾಜಕೀಯ ಕ್ರಮ ಎಂದು ತೋರುತ್ತದೆ," ಎಂದು ಕೂಡಾ ಹೇಳಿದೆ.
ಸಾಮಾಜಿಕ ವಿರೋಧಿ ಚಟುವಟಿಕೆಗಳ ನಿಯಂತ್ರಣ (ಪಿಎಎಸ್ಎ), ಲಕ್ಷದ್ವೀಪ ಪ್ರಾಣಿ ತಡೆಗಟ್ಟುವಿಕೆ ನಿಯಂತ್ರಣ ಮತ್ತು 2021 ರ ಲಕ್ಷದ್ವೀಪ ಪಂಚಾಯತ್ ನಿಯಂತ್ರಣ ಮುಂತಾದ ಕರಡು ಶಾಸನದ ವಿರುದ್ಧ ಲಕ್ಷದ್ವೀಪದ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. "ಗೂಂಡಾ ಆಕ್ಟ್" ಎಂದು ಜನಪ್ರಿಯವಾಗಿರುವ ಪಿಎಎಸ್ಎ ಯು ಸಾರ್ವಜನಿಕ ಬಹಿರಂಗಪಡಿಸುವಿಕೆಯಿಲ್ಲದೆ ಒಬ್ಬ ವ್ಯಕ್ತಿಯನ್ನು ಒಂದು ವರ್ಷದವರೆಗೆ ಬಂಧಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಲಕ್ಷದ್ವೀಪ ಆಡಳಿತ ಸುಧಾರಣೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್
ಕಾಂಗ್ರೆಸ್ ಮುಖಂಡರ ಭೇಟಿಗೆ ಅನುಮತಿ ನಿರಾಕರಿಸಿದ ಲಕ್ಷದ್ವೀಪ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್.ಅಸ್ಕರ್ ಅಲಿ, "ಕೇರಳದಿಂದ ಲಕ್ಷದ್ವೀಪಕ್ಕೆ ಸಂಸದರ ಪ್ರಸ್ತಾವಿತ ಭೇಟಿ ದ್ವೀಪಗಳಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಏಕೆಂದರೆ ರಾಜಕೀಯ ಪಕ್ಷಗಳು ಮತ್ತು ಮುಖ್ಯಭೂಮಿಯ ನಾಯಕರು ಸ್ಥಳೀಯ ಜನರು, ರಾಜಕೀಯ ಪಕ್ಷಗಳು / ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಜನರನ್ನು ಪ್ರಚೋದಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಎಲ್ಲಾ ಆಡಳಿತಾತ್ಮಕ ಕ್ರಮಗಳನ್ನು ವಿರೋಧಿಸಲು ಮತ್ತು ಆಡಳಿತದ ವಿರುದ್ಧ ಆಂದೋಲನ ನಡೆಸಲು ವಿವಿಧ ಹಂತಗಳಲ್ಲಿ ಪ್ರಯತ್ನಿಸುತ್ತಿದ್ದಾರೆ," ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಸಮುದಾಯ ಅಧಿಕವಾಗಿರುವ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಹೊರಡಿಸಿದ ನೂತನ ಪ್ರಸ್ತಾವನೆಗಳು ರಾಜಕೀಯ ಸ್ವರೂಪ ಪಡೆಯಲು ಕಾರಣವಾಗಿದ್ದಲ್ಲದೇ, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಪ್ರತಿಭಟನೆ ನಡೆಸಿದ ಹಲವಾರು ಮಂದಿಯ ಬಂಧನ ಕೂಡಾ ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)