ಕೇರಳದಿಂದ ಕರ್ನಾಟಕ ಹೈಕೋರ್ಟ್ಗೆ ಕಾನೂನು ವ್ಯಾಪ್ತಿ ಬದಲಾವಣೆಗೆ ಲಕ್ಷದ್ವೀಪ ಆಡಳಿತ ಪ್ರಸ್ತಾಪ
ನವದೆಹಲಿ, ಜೂ.21: ತನ್ನ ಕೆಲವು ನೀತಿಗಳ ವಿರುದ್ದ ಭಾರೀ ಆಕ್ರೋಶ ಉಂಟಾಗುತ್ತಿರುವ ಕಾರಣ ಲಕ್ಷದ್ವೀಪ ಆಡಳಿತ, ಅಲ್ಲಿನ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್ನಿಂದ ಕರ್ನಾಟಕ ಹೈಕೋರ್ಟ್ಗೆ ಬದಲಿಸುವ ಪ್ರಸ್ತಾವನೆ ಮಾಡಲು ಚಿಂತನೆ ನಡೆಸುತ್ತಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಂವಿಧಾನದ 241 ನೇ ವಿಧಿ ಪ್ರಕಾರ ಹೈಕೋರ್ಟ್ನ ಅಧಿಕಾರ ವ್ಯಾಪ್ತಿಯನ್ನು ಸಂಸತ್ತಿನ ಕಾಯ್ದೆಯ ಮೂಲಕ ಮಾತ್ರ ಬದಲಿಸಬಹುದಾಗಿದೆ. ಈ ವಿಧಿಯ ಅನುಚ್ಛೇದ (1)ರ ಪ್ರಕಾರ ಸಂಸತ್ತು ತನ್ನ ಕಾಯಿದೆಯ ಮೂಲಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಹೈಕೋರ್ಟ್ ಸ್ಥಾಪಿಸಬಹುದು ಅಥವಾ ಆ ಪ್ರದೇಶದಲ್ಲಿರುವ ನ್ಯಾಯಾಲಯವನ್ನು ಹೈಕೋರ್ಟ್ ಆಗಿ ಪರಿವರ್ತಿಸಬಹುದು.
ಲಕ್ಷದ್ವೀಪ ಆಡಳಿತ ಸುಧಾರಣೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್
ಗೋ ಮಾಂಸ ಮಾರಾಟ ನಿಷೇಧ, ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಆಕಾಂಕ್ಷಿಗಳು ಅನರ್ಹ, ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಲಕ್ಷದ್ವೀಪಾಭಿವೃದ್ಧಿ ಪ್ರಾಧಿಕಾರ 2021 ರಚನೆ, ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧ ತೆರವು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧವನ್ನು ಒಳಗೊಂಡ ಹಲವು ಮಸೂದೆ, ವಿಧೇಯಕ ಜಾರಿಗೆ ತರುವ ಪ್ರಸ್ತಾಪವನ್ನು ದ್ವೀಪಸಮೂಹದ ನೂತನ ಆಡಳಿತಗಾರ ಪ್ರಫುಲ್ ಪಟೇಲ್ ಮಾಡಿದ್ದರು.
ಈ ಪ್ರಸ್ತಾಪದ ವಿರುದ್ದ ಕೇರಳ ಹೈಕೋರ್ಟ್ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಿಂದಾಗಿ ನೂತನ ಆಡಳಿತಗಾರ ಪ್ರಫುಲ್ ಪಟೇಲ್ ಲಕ್ಷದ್ವೀಪದ ಕಾನೂನು ವ್ಯಾಪ್ತಿಯನ್ನು ಕೇರಳ ಹೈಕೋರ್ಟ್ನಿಂದ ಕರ್ನಾಟಕ ಹೈಕೋರ್ಟ್ಗೆ ಬದಲಿಸುವ ಚಿಂತನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪಿಟಿಐ ಜೊತೆ ದೂರವಾಣಿ ಮೂಲಕ ಮಾತನಾಡಿದ ಲೋಕಸಭಾ ಸದಸ್ಯ ಮೊಹಮ್ಮದ್ ಫೈಜಲ್ ಪಿ ಪಿ, ''ಇದು ನ್ಯಾಯಾಂಗ ವ್ಯಾಪ್ತಿಯನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಪ್ರಫುಲ್ ಪಟೇಲ್ರ ಮೊದಲ ಪ್ರಯತ್ನವಾಗಿದೆ. ಅದನ್ನು ವರ್ಗಾಯಿಸಲು ಪಟೇಲ್ ಮಾಡುವ ಪ್ರಯತ್ನ ಸಂಪೂರ್ಣವಾಗಿ ತನ್ನ ಅಧಿಕಾರದ ದುರುಪಯೋಗವಾಗಿದೆ. ಈ ದ್ವೀಪಗಳಲ್ಲಿನ ಜನರ ಮಾತೃಭಾಷೆ ಮಲಯಾಳಂ. ಹೈಕೋರ್ಟ್ನ ಹೆಸರನ್ನು ಕೇರಳ ಮತ್ತು ಲಕ್ಷದ್ವೀಪ ಹೈಕೋರ್ಟ್ ಎಂಬುದನ್ನು ಯಾರೂ ಮರೆಯಬಾರದು,'' ಎಂದು ಹೇಳಿದ್ದಾರೆ.
''ಈ ಪ್ರಸ್ತಾಪವನ್ನು ದ್ವೀಪಗಳಿಗೆ ಮೊದಲ ಭೇಟಿಯ ಸಮಯದಲ್ಲಿ ರೂಪಿಸಲಾಗಿದೆ. ಇದರ ಅವಶ್ಯಕತೆ ಇದೆಯೇ? ಈ ಪ್ರಸ್ತಾಪವನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ?,'' ಎಂದು ಮೊಹಮ್ಮದ್ ಫೈಜಲ್ ಪಿ ಪಿ ಪ್ರಶ್ನಿಸಿದ್ದಾರೆ.
ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಉಚ್ಚಾಟನೆಗೆ ಕೇರಳ ವಿಧಾನಸಭೆ ನಿರ್ಣಯ
''ಪಟೇಲರ ಮೊದಲು 36 ನಿರ್ವಾಹಕರು ಇದ್ದರು. ಯಾರಿಗೂ ಈ ರೀತಿಯ ಆಲೋಚನೆ ಇರಲಿಲ್ಲ. ನಾವು ಈ ಪ್ರಸ್ತಾಪವನ್ನು ವಿರೋಧಿಸುತ್ತೇವೆ,'' ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಉಚ್ಚಾಟನೆಗೆ ಕೇರಳ ವಿಧಾನಸಭೆ ನಿರ್ಣಯ ಕೈಗೊಂಡಿದೆ. ಮುಸ್ಲಿಂ ಸಮುದಾಯ ಅಧಿಕವಾಗಿರುವ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಹೊರಡಿಸಿದ ನೂತನ ಪ್ರಸ್ತಾವನೆಗಳು ರಾಜಕೀಯ ಸ್ವರೂಪ ಪಡೆಯಲು ಕಾರಣವಾಗಿದ್ದಲ್ಲದೇ, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಪ್ರತಿಭಟನೆ ನಡೆಸಿದ ಹಲವಾರು ಮಂದಿಯ ಬಂಧನ ಕೂಡಾ ಮಾಡಲಾಗಿದೆ. ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿದೆ.
ಲಕ್ಷದ್ವೀಪ ಆಡಳಿತ ಸುಧಾರಣೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಕೇರಳ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ಕರಡು ನಿಯಮಗಳನ್ನು ಪ್ರಶ್ನಿಸಿ ಕೆಪಿಸಿಸಿ ಪದಾಧಿಕಾರಿ ನೌಶಾದ್ ಆಲಿ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ತಿರಸ್ಕರಿಸಿದೆ. ಆಡಳಿತ ಸುಧಾರಣೆಗಳ ಬಗ್ಗೆ ದೂರುದಾರರು ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಆದರೆ ನ್ಯಾಯಾಲಯ ಅದಕ್ಕೆ ಅವಕಾಶ ನೀಡಿಲ್ಲ. ಬದಲಾಗಿ, ವಿವರಣೆ ಕೋರಿ ಕೇಂದ್ರ ಮತ್ತು ಲಕ್ಷದ್ವೀಪ ಆಡಳಿತಕ್ಕೆ ಪತ್ರ ಕಳುಹಿಸಿದೆ.