ಯುಪಿ ರೈತರ ಹತ್ಯೆ: 'ಕೇವಲ ಒಂದು ಸಹಾನುಭೂತಿಯ ಮಾತು ಸಾಕು ಮೋದಿಜಿ' ಎಂದ ಸಿಬಲ್
ನವದೆಹಲಿ, ಅಕ್ಟೋಬರ್ 08: "ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನೀವು ವಿರೋಧ ಪಕ್ಷದಲ್ಲಿ ಇದ್ದರೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತಿದ್ದಿರಿ," ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ "ಕೇವಲ ಒಂದು ಸಹಾನುಭೂತಿಯ ಮಾತು ಸಾಕು ಮೋದಿಜಿ," ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಸಿಬಲ್, "ಮೋದಿ ನೀವು ಯಾಕೆ ಮೌನವಾಗಿದ್ದೀರಿ," ಎಂದು ಪ್ರಶ್ನಿಸಿದ್ದಾರೆ. "ನಮಗೆ ನಿಮ್ಮ ಬಗ್ಗೆ ಕೇವಲ ಒಂದು ಸಹಾನಭೂತಿಯ ಮಾತು ಬೇಕಾಗಿದೆ. ಅದು ನಿಮಗೆ ದೊಡ್ಡ ಕಷ್ಟದ ವಿಚಾರವೇನಲ್ಲ. ನೀವು ಒಂದು ವೇಳೆ ಈ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ಇದ್ದರೆ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಿರಿ, ದಯವಿಟ್ಟು ನಮಗೆ ತಿಳಿಸಿ," ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತಿಳಿಸಿದ್ದಾರೆ.
ಲಖಿಂಪುರ ಹಿಂಸಾಚಾರ: ಮೃತರ ಕುಟುಂಬವನ್ನು ಭೇಟಿಯಾದ ರಾಹುಲ್, ಪ್ರಿಯಾಂಕ
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ನಾಲ್ವರು ರೈತರು ಆಗಿದ್ದಾರೆ. ಕೇಂದ್ರ ಸಚಿವರುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಸೇರಿದ ವಾಹನ ಹಾಗೂ ಇತರೆ ವಾಹನಗಳು ವೇಗವಾಗಿ ಬಂದಿದ್ದು, ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿದು ಹೋಗಿದೆ ಎಂದು ಆರೋಪ ಮಾಡಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ವಾಹನದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಕೂಡಾ ಇದ್ದರು ಎಂದು ರೈತರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಈಗಾಗಲೇ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಆದರೆ ಈವರೆಗೂ ಆಶೀಶ್ ಮಿಶ್ರಾರವನ್ನು ಬಂಧನ ಮಾಡಿಲ್ಲ. ಇನ್ನು ಆಶೀಶ್ ಮಿಶ್ರಾಗೆ ಶುಕ್ರವಾರ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದು, ಆದರೆ ಆಶೀಶ್ ಮಿಶ್ರಾ ಇಂದು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಲವ್ಕುಶ್ ಹಾಗೂ ಆಶೀಶ್ ಪಾಂಡೆ ಎಂಬ ಇಬ್ಬರನ್ನು ಬಂಧನ ಮಾಡಲಾಗಿದ್ದು, ಪೊಲೀಸರು ಈ ಇಬ್ಬರು ಕೂಡಾ ಆ ವಾಹನದಲ್ಲಿ ಇದ್ದರು ಎಂದು ತಿಳಿಸಿದ್ದಾರೆ.
ಇನ್ನು ಬುಧವಾರ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಖಲಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. "ಸಂತ್ರಸ್ತರ ಕುಟುಂಬಕ್ಕೆ ಖಂಡಿತವಾಗಿ ನ್ಯಾಯ ದೊರೆಯಬೇಕು. ನಾವು ಇಲ್ಲಿ ಮೃತ ರೈತರ ಕುಟುಂಬಕ್ಕೆ ಸಹಾಯ ಮಾಡಲು ಬಂದಿದ್ದೇವೆ. ಈ ಮೂಲಕ ಆಡಳಿತದ ಮೇಲೆ ಒತ್ತಡವನ್ನು ಹೇರಲು ಬಂದಿದ್ದೇವೆ," ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ತಿಳಿಸಿದ್ದರು.
'ಶೀಘ್ರ ಗುಣಮುಖರಾಗಿ': ಗಾಂಧಿಗಳನ್ನು ಟೀಕಿಸಿದ ಕಪಿಲ್ ವಿರುದ್ದ ಪ್ರತಿಭಟನೆ, ಕಾರಿಗೆ ಹಾನಿ
ಸೋಮವಾರ ಉತ್ತರಪ್ರದೇಶ ಲಖಿಂಪುರ ಖೇರಿಗೆ ತೆರಳುತ್ತಿದ್ದ ವೇಳೆ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಬುಧವಾರ ಸೀತಾಪುರ ಗೆಸ್ಟ್ ಹೌಸ್ನಿಂದ ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆ ಪ್ರಿಯಾಂಕ ಗಾಂಧಿ ಕೂಟಾ ರೈತರ ಕುಟುಂಬವನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದಲ್ಲಿ ಜೊತೆಯಾದರು. ಈ ಕಾಂಗ್ರೆಸ್ ನಿಯೋಗವು ಮೃತಪಟ್ಟ 19 ವರ್ಷದ ಲವ್ಪ್ರೀತ್ ಸಿಂಗ್ ಹಾಗೂ 30 ವರ್ಷದ ಸ್ಥಳೀಯ ಪತ್ರಕರ್ತ ರಮನ್ ಕಶ್ಯಪ್ರ ಕುಟುಂಬವನ್ನು ಭೇಟಿಯಾಗಿದೆ.
(ಒನ್ಇಂಡಿಯಾ ಸುದ್ದಿ)