"ಚೀನಾ-ಪಾಕ್ ಅನ್ನು ಪ್ರೋತ್ಸಾಹಿಸುತ್ತಿದ್ದೀರಾ ರಾಹುಲ್ ಗಾಂಧಿಯವರೇ?"
ನವದೆಹಲಿ, ಜೂನ್.28: ಭಾರತ-ಚೀನಾ ಗಡಿ ಪ್ರದೇಶ ಪೂರ್ವ ಲಡಾಖ್ ನಲ್ಲಿರುವ ಗಾಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಳವಿಲ್ಲದ ಮನ್ಸಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರಿದ್ದಾರೆ.
Recommended Video
ನವದೆಹಲಿಯಲ್ಲಿ ಏಷಿಯನ್ ನ್ಯೂಸ್ ಇಂಟರ್ ನ್ಯಾಷನಲ್ ಸುದ್ದಿ ಸಂಸ್ಥೆಯ ಸಂಪಾದಕರಾದ ಸ್ಮಿತಾ ಪ್ರಕಾಶ್ ನಡೆಸಿದ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. ಭಾರತದ ಜೊತೆಗೆ ಪಾಕಿಸ್ತಾನ ಮತ್ತು ಚೀನಾ ಗಡಿ ವಿವಾದ ಮೊದಲಿನಿಂದಲೂ ಇದೆ.
ಭಾರತದ ಸುರಕ್ಷತೆಗೆ ರಾಹುಲ್ ಗಾಂಧಿಯೇ ಬೆಸ್ಟ್ ಎಂದವರೆಷ್ಟು ಜನ?
ಭಾರತದ ವಿರುದ್ಧ ಎರಡು ರಾಷ್ಟ್ರಗಳು ಹಿಂದಿನಿಂದಲೂ ಕಾಲ್ಕೆರೆದು ಜಗಳಕ್ಕೆ ನಿಂತಿರುವುದು ಇತಿಹಾಸದಲ್ಲಿದೆ. 1962ರಿಂದ ಇಲ್ಲಿಯವರೆಗೂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಆಗಿದೆ ಎನ್ನುವುದನ್ನು ವಿಸ್ತೃತವಾಗಿ ಚರ್ಚಿಸುವುದಕ್ಕೆ ಬೇಕಿದ್ದಲ್ಲಿ ಸಂಸತ್ ಕಲಾಪ ಕರೆಯಲಾಗುತ್ತದೆ. ಅಲ್ಲಿ ರಾಹುಲ್ ಗಾಂಧಿ ಅವರು ಈ ಕುರಿತು ಚರ್ಚೆ ಮಾಡಲಿ. ಅದನ್ನು ಬಿಟ್ಟು ಸುಖಾಸುಮ್ಮನೆ ದೇಶದ ಭದ್ರತೆ ವಿಚಾರದಲ್ಲಿ ಟೀಕಿಸುವುದು ಸರಿಯಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ.
"ಪಾಕಿಸ್ತಾನ, ಚೀನಾಗೆ ರಾಹುಲ್ ಗಾಂಧಿ ಪ್ರೋತ್ಸಾಹ?"
ನೆರೆರಾಷ್ಟ್ರಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಿವೆ. ಇಂಥ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಯನ್ನು ನರೇಂದ್ರ ಮೋದಿ ಅಲ್ಲ "ಸರೆಂಡರ್ ಮೋದಿ" ರಾಹುಲ್ ಗಾಂಧಿ ಟೀಕಿಸುವ ಮೂಲಕ ಚೀನಾ ಮತ್ತು ಪಾಕಿಸ್ತಾನಗಳಿಗೆ ಪ್ರೋತ್ಸಾಹಿಸುತ್ತಿದ್ದೀರಾ ಎಂದು ಸಂಸದ ರಾಹುಲ್ ಗಾಂಧಿ ಅವರನ್ನು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ. ವಿರೋಧಿಗಳನ್ನು ಬಗ್ಗುಬಡಿಯುವಲ್ಲಿ ಭಾರತೀಯ ಸರ್ಕಾರವು ಸಮರ್ಥವಾಗಿದೆ. ಆದರೆ ಒಂದು ದೊಡ್ಡ ಪಕ್ಷದ ಅಧ್ಯಕ್ಷರಾಗಿದ್ದವರು ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೀಳು ಮನಸ್ಥಿತಿಯ ರಾಜಕಾರಣ ಮಾಡುತ್ತಿರುವುದು ತುಂಬಾ ನೋವುಂಟು ಮಾಡುತ್ತಿದೆ ಎಂದು ಅಮಿತ್ ಶಾ ತಿಳಿಸಿದರು.
'ಸರೆಂಡರ್ ಮೋದಿ' ಹ್ಯಾಶ್ ಟ್ಯಾಗ್ ಬಗ್ಗೆ ಕಾಂಗ್ರೆಸ್ ಉತ್ತರವೇನು?
ದೇಶದಲ್ಲೇ ದೊಡ್ಡ ಪಕ್ಷ ಎನಿಸಿರುವ ಕಾಂಗ್ರೆಸ್ ತಮ್ಮದೇ ಪಕ್ಷದ ಸಂಸದರೊಬ್ಬರು ಸೃಷ್ಟಿಸಿರುವ 'ಸರೆಂಡರ್ ಮೋದಿ' ಹ್ಯಾಶ್ ಟ್ಯಾಗ್ ಬಗ್ಗೆ ಸ್ವಯಂಪರಾಮರ್ಶೆ ಮಾಡಿಕೊಳ್ಳಬೇಕು. ನೀವು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಚೀನಾ ಮತ್ತು ಪಾಕಿಸ್ತಾನಕ್ಕೆ ಬೆಂಬಲಿಸಲು ಹೊರಟಿದ್ದೀರಾ ಹೇಗೆ. ಈ ಪ್ರಶ್ನೆಗೆ ಪಕ್ಷದ ನಾಯಕರೇ ಉತ್ತರ ನೀಡಬೇಕು. ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು ವರ್ತಿಸುತ್ತಿರುವಂತೆ ನೀವೇ ವರ್ತಿಸುತ್ತಿರುವುದು ತುಂಬಾ ನೋವಿನ ಸಂಗತಿ ಎಂದು ಅಮಿತ್ ಶಾ ಬೇಸರ ವ್ಯಕ್ತಪಡಿಸಿದ್ದಾರೆ.
"ಸಂಸತ್ ಕಲಾಪದಲ್ಲಿ ಚರ್ಚೆ ಮಾಡುವುದಕ್ಕೆ ಅವಕಾಶವಿದೆ"
ಚೀನಾ ಭಾರತ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿ ಅವರು ಚರ್ಚಿಸಬೇಕಿದ್ದಲ್ಲಿ ಅದಕ್ಕಾಗಿ ಸಂಸತ್ ಕಲಾಪವಿದೆ. ಅಲ್ಲಿ ನಿಮಗೆ ಬೇಕಾದಷ್ಟು ಕಾಲ ಚರ್ಚೆ ಮಾಡಿ ನಿಮ್ಮನ್ನು ಯಾರೂ ತಡೆಯುವುದಿಲ್ಲ. 1962 ರಿಂದ ಇಂದಿನವರೆಗೂ ಗಡಿ ವಿಚಾರದಲ್ಲಿ ಏನೆಲ್ಲಾ ಆಗಿದೆ ಎನ್ನುವುದನ್ನು ವಿಸ್ತೃತವಾಗಿ ಬೇಕಾದರೆ ಚರ್ಚಿಸೋಣ. ಆದರೆ, ಭಾರತದ ಗಡಿಯಲ್ಲಿ ಸೈನಿಕರು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ದೇಶದ ಸಾರ್ಮಭೌಮತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಶಿಸ್ತುಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸುವುದು ಪಾಕಿಸ್ತಾನ ಮತ್ತು ಚೀನೀದಂತಾ ರಾಷ್ಟ್ರಗಳಿಗೆ ಹಾಸಿಕೊಟ್ಟಂತೆ ಆಗುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಪ್ರಧಾನಿಯನ್ನು 'ಸರೆಂಡರ್ ಮೋದಿ' ಎಂದಿದ್ದ ರಾಹುಲ್ ಗಾಂಧಿ
ಭಾರತ-ಚೀನಾ ಸಂಘರ್ಷ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಸಂಸದ ರಾಹುಲ್ ಗಾಂಧಿ ಕೆಂಡ ಕಾರಿದ್ದರು. ಚೀನಾ ಯೋಧರಿಗೆ ದೇಶದ ಗಡಿ ಪ್ರದೇಶವನ್ನು ಪ್ರಧಾನಿಯವರು ಸರೆಂಡರ್ ಮಾಡಿದ್ದಾರೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲ, ಸರೆಂಡರ್ ಮೋದಿ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪೂರಕವಾಗುವಂತೆ ಟ್ವೀಟ್ ವೊಂದನ್ನು ಮಾಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಗಡಿ ಪ್ರದೇಶಕ್ಕೆ ಯಾರೊಬ್ಬರೂ ಅತಿಕ್ರಮಿಸಿಲ್ಲ ಎಂದಿದ್ದರು. ಆದರೆ ಉಪಗ್ರಹದಲ್ಲಿ ಸೆರೆಯಾದ ಫೋಟೋಗಳಲ್ಲಿ ಚೀನಾ ಯೋಧರು ಭಾರತದ ಗಡಿ ಪ್ರವೇಶಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ಯಾಂಗಾಂಗ್ ನದಿವರೆಗೆ ಚೀನಾ ಯೋಧರು ನುಗ್ಗಿರುವುದು ಉಪಗ್ರಹದಲ್ಲಿ ಸೆರೆಯಾದ ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ರಾಹುಲ್ ಗಾಂಧಿ ಫೋಟೋ ಸಹಿತ ಟ್ವೀಟ್ ಮಾಡಿದ್ದರು.